Posts Tagged ‘vartha bharathi’

ಮತದ ಅಮಲು ಪ್ರೀತಿಯನ್ನು ಚಿವುಟಿ ಹಾಕಿತು..
ಉಡುಪಿ ತಾಲೂಕು ತೋನ್ಸೆ ಗ್ರಾಮದ ಕಂಬಳತೋಟ ಎಂಬಲ್ಲಿ ವಾಸವಾಗಿರುವ ಸದಾನಂದ (35) ತೆಂಗಿನ ತೋಟದ ಕಾರ್ಮಿಕ. ಈತನ ಮನೆ ಬಳಿಯೇ ವಾಸವಾಗಿರುವ ಹಾಜಿರಾ (32) ಮೇಸ್ತ್ರಿ ಕೆಲಸದವರ ಜೊತೆಗೆ ಹೆಲ್ಪರ್ ಆಗಿ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕೆ. ಇಬ್ಬರದೂ ಒಕ್ಕಲು ಕುಟುಂಬ. ಇಷ್ಟು ಬರೆದ ಮೇಲೆ ಇವರದು ಬಡ ಕುಟುಂಬ ಎನ್ನುವುದಕ್ಕೆ ಬೇರೆ ಸಾಕ್ಷಿಯ ಅಗತ್ಯವಿಲ್ಲ.
ಹಾಜಿರಾ ಹೆತ್ತವರು ಅನಾರೋಗ್ಯ ಬಾಧಿತರು. ಸಹೋದರರು ಮನೆ ಕಡೆ ಗಮನ ಕೊಟ್ಟವರಲ್ಲ. ಇದರಿಂದಾಗಿ ಹಾಜಿರಾ ಹಾಗೂ ಅನಾರೋಗ್ಯ ಬಾಧಿತ ಹೆತ್ತವರಿಗೆ ಸದಾನಂದ ಸಹಜವಾಗಿಯೇ ಹತ್ತಿರದವನಾದ. ಪರಿಣಾಮವಾಗಿ ಹಾಜಿರಾ-ಸದಾನಂದರು ಪ್ರೇಮಿಗಳಾದರು. ಇವರ ಪ್ರೇಮ ಪ್ರಕರಣಕ್ಕೆ ಅರ್ಧ ದಶಕದ ಇತಿಹಾಸ.
ಇತ್ತೀಚೆಗೆ, ಅಂದರೆ ಐದು ತಿಂಗಳ ಹಿಂದೆ ಹಾಜಿರಾ ಗರ್ಭಿಣಿಯಾದಳು. ನಾಲ್ಕು ತಿಂಗಳ ಕಾಲ ಇಬ್ಬರೂ ಸುಮ್ಮಗಿದ್ದರು. ಗರ್ಭಪಾತ ಮಾಡಿಸಲು ಇವರಿಗೆ ಮನಸ್ಸಿರಲಿಲ್ಲ. ಮದುವೆಯಾಗಲು, ಇವರಿಗೆ ಇವರ ನಡುವಿನ ಮತದ ಭಯ. ಇಬ್ಬರೂ ಬೇರೆ ಬೇರೆ ಮತ (ಧರ್ಮ ಅಲ್ಲ) ಗಳಿಗೆ ಸೇರಿದವರು. ಕೊನೆಗೆ, ಅಂದರೆ ಒಂದು ತಿಂಗಳ ಹಿಂದೆ ಇಬ್ಬರೂ ಗಟ್ಟಿ ಮನಸ್ಸು ಮಾಡಿ ಮದುವೆಯಾಗಲು ನಿರ್ಧರಿಸಿದರು.
ನಮ್ಮನ್ನು ಒಂದು ಮಾಡಿ ಎಂದು ಸದಾನಂದ ದಲಿತ ನಾಯಕರಿಗೆ ಮೊರೆ ಇಟ್ಟಿದ್ದಾನೆ. ಅಂತರ್ಮತೀಯ ಪ್ರೇಮಿಗಳ ಊರು ಕೋಮು ಸೂಕ್ಷ್ಮ ಪ್ರದೇಶ ಎಂಬ ಭಯ ಮತ್ತು ಊರಿನ ಶಾಂತಿ- ನೆಮ್ಮದಿಯ ನೆಪದಲ್ಲಿ ದಲಿತ ನಾಯಕರು ಹಾಜಿರಾಳ ಮತಕ್ಕೆ ಸೇರಿದ ಸಂಘಟನೆಗಳ ನಾಯಕರನ್ನು ಸಂಪರ್ಕಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಕೋರಿಕೊಂಡಿದ್ದಾರೆ.
ಹಾಜಿರಾ ಹಾಗೂ ಸದಾನಂದ ಇವರ ನಡುವಿನ ಪ್ರೀತಿ, ಪ್ರೇಮ, ಐದು ವರ್ಷಗಳ ದೈಹಿಕ, ಮಾನಸಿಕ ಸಂಬಂಧ, ಹಾಜಿರಾಳ ಗರ್ಭದಲ್ಲಿ ಬೆಳೆಯುತ್ತಿರುವ ಸದಾನಂದ ಮಗುವನ್ನು ಪರಿಗಣಿಸಿ ಇಬ್ಬರನ್ನೂ ಒಂದುಗೂಡಿಸಬೇಕಾದ ಮುಸ್ಲೀಮ್ ಸಂಘಟನೆಗಳ ನಾಯಕರು, ಇವುಗಳೆಲ್ಲವನ್ನೂ ಸಂಪೂರ್ಣವಾಗಿ ಕಡೆಗಣಿಸಿ, ನಿರ್ಲಕ್ಷಿಸಿ, ಕಾಲಕಸದಂತೆ ಕಂಡು ಜೋಡಿಯನ್ನು ಬೇರ್ಪಡಿಸಿದರು.
ಸದಾನಂದ ಮುಸ್ಲೀಮ್ ಮತಕ್ಕೆ ಮತಾಂತರ ಆಗಲು ಒಪ್ಪಿಕೊಂಡಲ್ಲಿ ಹಾಜಿರಾ ಜೊತೆ ಮದುವೆಯಾಗಲು ನಮ್ಮ ಅಭ್ಯಂತರವಿಲ್ಲ, ನಾವೇ ಮುಂದೆ ನಿಂತು ಮದುವೆ ಮಾಡಿಸುತ್ತೇವೆ ಎಂಬುದು ಮುಸ್ಲೀಮ್ ನಾಯಕರ ಸ್ಪಷ್ಟನೆಯಾಗಿತ್ತು. ಮುಸ್ಲೀಮ್ ಆಗಲು ಸದಾನಂದ ಸಿದ್ಧನಿರಲಿಲ್ಲ. ಸದಾನಂದ ಮುಸ್ಲೀಮ್ ಆಗಲು ನಿರಾಕರಿಸಿದ ಕಾರಣಕ್ಕೆ ಮುಸ್ಲೀಮ್ ನಾಯಕತ್ವ ಪ್ರೀತಿಯನ್ನು ಚಿವುಟಿ ಹಾಕುವಲ್ಲಿ ಯಶಸ್ವಿಯಾಯಿತು.
ಈಗ ಗರ್ಭಿಣಿ ಹಾಜಿರಾ ತನ್ನ ಮನೆಯಲ್ಲಿಲ್ಲ. ಮುಸ್ಲೀಮ್ ನಾಯಕರು ಹಾಜಿರಾಳನ್ನು ಅದೆಲ್ಲಿಗೋ ಸಾಗಿಸಿ ಗುಪ್ತ ಸ್ಥಳದಲ್ಲಿ ಇರಿಸಿದ್ದಾರೆ. ಹಾಜಿರಾಳನ್ನು ಓರ್ವ ಮುಸ್ಲೀಮನಿಗೇ ಮದುವೆ ಮಾಡಿ ಕೊಡುವ ನಿರ್ಧಾರ ಮಾಡಿರಬಹುದಾದ ಮುಸ್ಲೀಮ್ ನಾಯಕರಿಗೆ, ಸದಾನಂದನಿಂದಾಗಿ ಹಾಜಿರಾಳ ಗರ್ಭದಿಂದ ಜನಿಸುವ ಒಂದು ಮಗುವನ್ನು ಮುಸ್ಲೀಮ್ ಮತಕ್ಕೆ ಬಳುವಳಿಯಾಗಿ ನೀಡಿದ ಹೆಮ್ಮೆ…
* * *
ಮತದ ಅಮಲು ದಂಪತಿಗಳನ್ನೂ ಬೇರ್ಪಡಿಸಿತು..
ಭರತ್ ರಾಜ್ ಹಾಗೂ ಫರ್ಹಾ ಇಬ್ಬರೂ ಉಡುಪಿ ತಾಲೂಕು ಹಂದಾಡಿ ಗ್ರಾಮದ ಅಕ್ಕ ಪಕ್ಕದ ಮನೆಯವರು. ಫರ್ಹಾಳದು ಬಡ ಕುಟುಂಬ. ತಾಯಿಗೆ ಅಸೌಖ್ಯ. ಅಸೌಖ್ಯದಲ್ಲಿದ್ದ ತಾಯಿ ಯಾಸ್ಮೀನ್ ರನ್ನು ತಿಂಗಳಿಗೊಂದೆರಡು ಬಾರಿಯಂತೆ ಆಸ್ಪತ್ರೆಯೆಗೆ ಕೊಂಡೊಯ್ಯಲು ಫಿರಾಳ ಮನೆಗೆ ಬರುತ್ತಿದ್ದವನು ಪಕ್ಕದ ಮನೆಯ ರಿಕ್ಷಾ ಚಾಲಕ ಭರತ್. ಫರ್ಹಾಳ ತಾಯಿಗೆ ನಡೆದಾಡಲೂ ಆಗುತ್ತಿರಲಿಲ್ಲ. ಆಗ ಫರ್ಹಾಳ ತಾಯಿಯನ್ನು ಕೈ ಹೆಗಲು ಕೊಟ್ಟು ರಿಕ್ಷಾದಲ್ಲಿ ಕುಳಿತುಕೊಳ್ಳಿಸಿ, ಮತ್ತೆ ರಿಕ್ಷಾದಿಂದಿಳಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದವನು ಇದೇ ಭರತ್.
ಸಹಜವಾಗಿ ಭರತ್ ಹಾಗೂ ಫರ್ಹಾ ನಡುವೆ ಪ್ರೀತಿ ಅಂಕುರಿಸಿದೆ. ಇಬ್ಬರೂ 2012 ರ ಮಾರ್ಚ್ 19 ರಂದು ಮಂಗಳೂರಿನ ಆರ್ಯ ಸಮಾಜದಲ್ಲಿ ವಿವಾಹವಾಗಿದ್ದಾರೆ. ಅದೇ ದಿನ ವಿವಾಹ ನೋಂದಣಿ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಫರ್ಹಾಳ ಮನೆಯವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿಕೊಂಡಿದ್ದರು. ಹಾಗಾಗಿ ಮದುವೆಯಾಗಿ ಸತಿ ಪತಿಗಳಾದ ಭರತ್ ಹಾಗೂ ಫರ್ಹಾ ಖುದ್ದಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ‘ನಾನು ನನ್ನ ಸ್ವ ಇಚ್ಛೆಯಿಂದ ಭರತ್ನನ್ನು ವಿವಾಹವಾಗಿದ್ದೇನೆ, ನಾನು ಗಂಡನೊಂದಿಗೆ ಇರುತ್ತೇನೆ, ನನಗೆ ಹೆತ್ತವರ ಆಸ್ತಿ-ಪಾಸ್ತಗಳು ಬೇಡ’ ಎಂದು ಆಗ ಫರ್ಹಾ ಹೇಳಿಕೆ ನೀಡಿದ್ದಳು. ಅಂದಿನಿಂದ ಫರ್ಹಾಳನ್ನು ಹೆತ್ತವರು ತಮ್ಮ ಲೆಕ್ಕದಿಂದ ಬಿಟ್ಟು ಬಿಟ್ಟಿದ್ದರು. ದಂಪತಿಗಳು ಸುಖ-ಸಂತೋಷದಿಂದ ದಾಂಪತ್ಯ ಜೀವನ ನಡೆಸುತ್ತಿದ್ದರು.
2012 ರ ಡಿಸೆಂಬರ್ 12 ರಂದು ಫರ್ಹಾ ಉಡುಪಿಯ ಸರಕಾರಿ ಹೆಂಗಸರ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದಳು. ಫರ್ಹಾ ಮಗುವಿಗೆ ಜನ್ಮ ನೀಡಿದ ಬೆನ್ನಿಗೆ ಆಸ್ಪತ್ರೆಗೆ ಭೇಟಿ ನೀಡಿದ ಫರ್ಹಾಳ ಹೆತ್ತವರು ಮತ್ತು ನೆಂಟರು ಕೇವಲ ಎರಡೇ ತಿಂಗಳ ಅಂತರದಲ್ಲಿ ಅದೇನು ಆಕೆಯ ತಲೆಯಲ್ಲಿ ಮತೀಯ ಮೂಲಭೂತವಾದ ತುರುಕಿಸಿದರೋ ಗೊತ್ತಿಲ್ಲ. 2013 ರ ಫೆಬ್ರವರಿ 6 ರಂದು ಭರತ್ನಿಂದ ಫರ್ಹಾಳನ್ನು ಬೇರ್ಪಡಿಸಲು ಆಕೆಯ ಮನೆಯವರು ಹಾಗೂ ಸಂಬಂಧಿಕರು ಪೂರ್ಣ ಯಶಸ್ವಿಯಾದರು. ಎರಡು ತಿಂಗಳ ಮಗುವಿನೊಂದಿಗೆ ಈಗ ಫರ್ಹಾ ಭೂಗತ.
* * *
ಮಾನವಧರ್ಮದಿಂದ ಆದರ್ಶ ದಂಪತಿಗಳಾದರು..
ಕುಂದಾಪುರ ತಾಲೂಕಿನ ಗಂಗೊಳ್ಳಿ ನಿವಾಸಿಗಳಾದ ಸದಾಶಿವ ಹಾಗೂ ಫಿಲೋಮಿನಾ ಫೆರ್ನಾಂಡಿಸ್ ಪರಸ್ಪರ ಪ್ರೀತಿಸಿ ಮದುವೆಯಾದವರು. ಇದೇ ವರ್ಷದ ಎಪ್ರಿಲ್ 17 ಕ್ಕೆ ಇವರ ಸುಂದರ ದಾಂಪತ್ಯಕ್ಕೆ ಇಪ್ಪತ್ತು ವರ್ಷ. ಇವರಿಗೆ ಸುಶ್ಮಿತ ಹಾಗೂ ರಶ್ಮಿತ ಎಂಬಿಬ್ಬರು ಹೆಣ್ಮಕ್ಕಳು. ಸದಾಶಿವರು ಇದುವರೆಗೂ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿಲ್ಲ. ಫಿಲೋಮಿನಾ ಈತನಕ ಹಿಂದೂ ಮತಕ್ಕೆ ಮತಾಂತರವಾಗಿಲ್ಲ. ಇಬ್ಬರೂ ತಮ್ಮ ಮನೆಯಲ್ಲಿ ಎರಡೂ ಮತಕ್ಕೆ ಸೇರಿದ ಹಬ್ಬಗಳನ್ನು ಪರಸ್ಪರ ಗೌರವದಿಂದ ಆಚರಿಸಿಕೊಳ್ಳುತ್ತಾರೆ. ಎರಡೂ ಕಡೆಯ ಕುಟುಂಬಸ್ಥರು ಇವರ ಮನೆಗೆ ಬಂದು ಹಬ್ಬದೂಟ ಉಂಡು ಹರಸಿ ಹೋಗುತ್ತಾರೆ.
ಕಟಪಾಡಿಯ ಎಡ್ವಿನ್ ಕೋಟ್ಯಾನ್ ಹಾಗೂ ಮಲ್ಪೆ ತೊಟ್ಟಂನ ಲಲಿತಾ ಎಂಬವರು ಹತ್ತು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದವರು. ಇಂದಿಗೂ ಪರಸ್ಪರ ಮತಾಂತವಾಗದೆ ದಂಪತಿಗಳಾಗಿ ನೆಮ್ಮದಿಯಿಂದಿದ್ದಾರೆ. ಇವರಿಗೆ ಇಬ್ಬರು ಮಕ್ಕಳು.
ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ನಿವೃತ್ತ ಪ್ರೊಫೆಸರ್, ಹಿರಿಯ ಮಾನವಹಕ್ಕು ಹೋರಾಟಗಾರರಾದ ನಗರಿ ಬಾಬಯ್ಯನವರು ಮುಸ್ಲೀಮ್ ಯುವತಿಯನ್ನು ಪ್ರೀತಿಸಿ ಮದುವೆಯಾದವರು. ಬಾಬಯ್ಯನವರು ಮುಸ್ಲೀಮ್ ಆಗಿಲ್ಲ. ಬಾಬಯ್ಯನವರೂ ತಮ್ಮ ಪತ್ನಿಯನ್ನು ಹಿಂದೂ ಆಗಿ ಮತಾಂತರ ಮಾಡಿಲ್ಲ. ಇವರ ಮಕ್ಕಳೂ ಇಂದು ಪತ್ರಕರ್ತರಾಗಿ ಪ್ರಸಿದ್ಧರು.
* * *
ಜಾತಿ, ಮತಗಳು ಮಾನವನ ಸೃಷ್ಟಿ. ತನ್ನ ಮತವೇ ಶ್ರೇಷ್ಟವೆಂಬ ಭ್ರಮೆಯಲ್ಲಿ ಈ ಮೂಲಭೂತವಾದಿಗಳು ಪ್ರೀತಿಯನ್ನು ಹೊಸಕಿ ಹಾಕುತ್ತಾರೆ. ಮತದ ಆಧಾರದಲ್ಲಿಯೇ ದಂಪತಿಗಳನ್ನು ಬೇರ್ಪಡಿಸುತ್ತಾರೆ. ಮತವೆಂಬ ಅಮಲನ್ನು ಕುಡಿದವರು, ಮತವೆಂಬ ಮಾದಕ ದ್ರವ್ಯವನ್ನು ಸೇವಿಸಿದವರು ಮಾತ್ರ ಮನುಷ್ಯತ್ವ, ಮಾನವೀಯತೆ, ಕರುಣೆ, ಒಲವು, ಮಮತೆ, ಪ್ರೀತಿ, ಪ್ರೇಮ, ನಂಬಿಕೆ, ವಿಶ್ವಾಸ ಇತ್ಯಾದಿಗಳನ್ನು ಕಾಲಕಸದಂತೆ ತುಳಿದುಬಿಡಲು ಸಾಧ್ಯ. ಇಂಥವರಿಗೆ ತಮ್ಮ ದೇಶದ ಸಂವಿಧಾನ ಮತ್ತು ಕಾನೂನು ಮುಖ್ಯವಾಗುವುದಿಲ್ಲ. ಮತೀಯ ಆಚರಣೆಗಳೇ ಎಲ್ಲವೂ ಆಗಿಬಿಡುವ ಅಪಾಯವಿರುವುದು.
ಅಂತರ್ಮತೀಯ ಜೋಡಿಗಳು ಪರಸ್ಪರ ಮತಾಂತರವಾಗದೆ ದಂಪತಿಗಳಾಗಿರಲು ಸಾಧ್ಯವಿಲ್ಲವೇ ? ಖಂಡಿತಾ ಸಾಧ್ಯವಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಹಲವು ಆದರ್ಶ ಜೋಡಿಗಳು ನಮ್ಮ ಕಣ್ಣ ಮುಂದಿವೆ. ಆದರೆ ಮತೀಯವಾದವನ್ನೇ, ಮತೀಯ ಶ್ರೇಷ್ಟತೆಯನ್ನೇ ಉಸಿರಾಡುವವರಿಗೆ ಯುವಕನಾಗಲಿ, ಯುವತಿ ಇರಲಿ ತಮ್ಮ ಮತಕ್ಕೆ ಮತಾಂತರವಾದರೆ ಮಾತ್ರ ಅವರನ್ನು ಮನುಷ್ಯರನ್ನಾಗಿ ನೋಡಲು ಸಾಧ್ಯವಾಗುತ್ತದೆ ಎನ್ನುವುದು ದುರಂತವೆನ್ನದೇ ನಿರ್ವಾಹವೇ ವಿಲ್ಲ.
ಜಾತಿ ಬಿಡಿ, ಮತ ಬಿಡಿ, ಮಾನವತೆಗೆ ಜೀವ ಕೊಡಿ ಎಂಬ ಘೋಷಣೆಯಡಿಯಲ್ಲಿ ನಡೆಯುವ ಜಾಥಾ, ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಜನರಿಗೆ ಅಂತರ್ಮತೀಯ ಜೋಡಿಗಳನ್ನು ಅವರು ಮನುಷ್ಯರು ಎಂದು ಪರಿಗಣಿಸಲು ಯಾಕೆ ಸಾಧ್ಯವಾಗುತ್ತಿಲ್ಲ ?
ಬ್ರಾಹ್ಮಣರಲ್ಲಿ ತಮ್ಮ ಜಾತಿಯೇ ಶ್ರೇಷ್ಟವೆಂಬ ಭ್ರಮೆಯಿದೆ. ಇದೊಂದು ಮಾನಸಿಕ ರೋಗವೂ ಹೌದು. ಈ ಭ್ರಮೆ ಎಂಬ ರೋಗ ಮುಸ್ಲೀಮರಲ್ಲೂ ಇದೆ. ಇದನ್ನು ಹೋಗಲಾಡಿಸುವುದು ಹೇಗೆ ? ಈ ರೋಗ ಮಾಯವಾದಾಗ ಮಾತ್ರ ಮನುಷ್ಯನನ್ನು ಮನುಷ್ಯನೆಂದು ನೋಡಿ ಒಪ್ಪಿಕೊಂಡು, ಅಪ್ಪಿಕೊಳ್ಳಲು ಸಾಧ್ಯ. ಇಲ್ಲವಾದರೆ, ಇದೇ ರೋಗ ತಮ್ಮನ್ನು ಸುಡುವುದರೊಂದಿಗೆ ಇತರರನ್ನು ಸುಟ್ಟುಬಿಡುತ್ತದೆ.
ಎಲ್ಲಾ ಮತಗಳ ಮೂಲಭೂತವಾದಿಗಳೂ ಅಮಾನುಷವಾದ, ಅಮಾನವೀಯವಾದ ಭ್ರಮೆಗಳಿಂದ ಆದಷ್ಟು ಬೇಗನೆ ಹೊರಗಡೆ ಬರುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ. ಮೂಲಭೂತವಾದ ತಮ್ಮನ್ನು ತಾವೇ ಬಂಧನದಲ್ಲಿರಿಸಿದಂತೆ. ಇನ್ನಾದರೂ ಬ್ರಮೆಗಳಲ್ಲಿ ಬದುಕುವ ಜನರು ಮತೀಯವಾದವನ್ನೇ ಉಸಿರಾಡುವುದನ್ನು ನಿಲ್ಲಿಸಬೇಕು. ನಿಲ್ಲಿಸಿದರೆ ಮಾತ್ರ ಮನುಕುಲಕ್ಕೆ ಒಳಿತು. ಇಲ್ಲವಾದರೆ ಅದು ಹಾಗೆ ಹೇಳುತ್ತೆ, ಇದು ಹೀಗೆ ಹೇಳುತ್ತೆ, ಅದರಲ್ಲಿ ಹಾಗೆ ಇದೆ, ಇದರಲ್ಲಿ ಹೀಗೆ ಇದೆ ಎಂದು ಹೇಳಿಕೊಳ್ಳುತ್ತಾ ಇರಬೇಕೇ ಹೊರತು ನಾವೇನು ಮಾಡುತ್ತಿದ್ದೇವೆ ಎಂದು ನಮ್ಮನ್ನು ನಾವು ನೋಡಿಕೊಳ್ಳಲು, ತಿಳಿದುಕೊಳ್ಳಲು ಅಸಾಧ್ಯ. (ಕೃಪೆ: ಜಯಕಿರಣ, ವಾರದ ಖಾರ, 07.03.2013)

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಮತದಾನದ ದಿನವಾದ ಇಂದು ಮತ್ತು ನಿನ್ನೆ ಸಹ ಮಣಿಪಾಲದಿಂದ ಪ್ರಕಟವಾಗುವ ಪ್ರತಿಷ್ಟಿತ ‘ಉದಯವಾಣಿ’ ದಿನಪತ್ರಿಕೆಯು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಕಾಸಿಗಾಗಿ ಸುದ್ದಿ ಪ್ರಕಟಿಸಿ ಪತ್ರಿಕಾಧರ್ಮಕ್ಕೆ ಅಪಚಾರವೆಸಗಿದೆ.
ಮಾ.18 ರ ಉದಯವಾಣಿಯ ಪುಟ 12 ರಲ್ಲಿ ‘ಸುನಿಲ್ ಕುಮಾರ್ ಗೆ ಎಲ್ಲೆಡೆ ಭಾರೀ ಬೆಂಬಲ’ ಎಂಬ ಸುದ್ದಿಯನ್ನು ಪ್ರಕಟಿಸಿದೆ. ಈ ಸುದ್ದಿ ಕಾಸು ಪಡೆದುಕೊಂಡು ಪ್ರಕಟಿಸಿದ ಸುದ್ದಿ ಎನ್ನುವುದನ್ನು ಯಾರು ಬೇಕಾದರೂ ಹೇಳಬಹುದು.
ಮಾ.17 ರ ಉದಯವಾಣಿಯಲ್ಲಿ ಕಾಂಗ್ರೆಸ್ ನಿಂದ ಕಾಸು ಪಡೆದುಕೊಂಡು ಪ್ರಕಟಿಸಿದ ಎರಡು ಸುದ್ದಿಗಳಿವೆ. ಒಂದು, ‘ಜಯಪ್ರಕಾಸ್ ಹೆಗ್ಡೆ ಪರ ಜನಬೆಂಬಲದ ಮಹಾಪೂರ’, ಇನ್ನೊಂದು, ‘ಕಾಂಗ್ರೆಸ್ ಸರಕಾರದ ಅಭಿವೃದ್ದಿ ಕಾರ್ಯಕ್ರಮ ನಮಗೆ ಶ್ರೀರಕ್ಷೆ. – ಆಸ್ಕರ್ ಫೆರ್ನಾಂಡಿಸ್’.
ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಗೆಲುವಿಗಾಗಿ, ಅಧಿಕಾರಕ್ಕಾಗಿ ಅನೈತಿಕ ಮಾರ್ಗ ಹಿಡಿದಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ? ಈ ಎರಡೂ ರಾಜಕೀಯ ಪಕ್ಷಗಳು ದಿನ ಪತ್ರಿಕೆಗಳಿಗೆ ಮತ್ತು ವಾರ ಪತ್ರಿಕೆಗಳಿಗೆ ಹಾಗೂ ಸ್ಥಳೀಯ ಕೆಲವು ಖಾಸಗಿ ಟಿವಿ ಛಾನೆಲ್ ಗಳಿಗೆ ಅನಧಿಕೃತವಾಗಿ ವಿತರಿಸಿದ ಹಣ ಕೆಲವು ಲಕ್ಷಗಳು. ಈ ಬಗ್ಗೆ ಚುನಾವಣಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ನಡೆಸುವ ದಿಟ್ಟತನ ಪ್ರದರ್ಶಿಸಬೇಕೆಂದು www.udupibits.com ಒತ್ತಾಯಿಸಿದೆ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾ.18 ರಂದು ನಡೆಯಲಿದ್ದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಕಾರ್ಕಳದ ಮಾಜಿ ಶಾಸಕ ವಿ.ಸುನಿಲ್ ಕುಮಾರ್ ಗೆಲುವಿಗಾಗಿ ಉದಯವಾಣಿ ಪತ್ರಿಕೆಗೆ ಹಣ ಕೊಟ್ಟು ಬಿಜೆಪಿ ಪರವಾದ ಸುದ್ದಿ ಪ್ರಕಟವಾಗುವಂತೆ ಮಾಡಿದ (ಕಾಸಿಗಾಗಿ ಸುದ್ದಿ) ಬಿಜೆಪಿ ವಿರುದ್ದ ಕಾಂಗ್ರೆಸ್ ಪಕ್ಷ ಚುನಾವಣಾಧಿಕಾರಿಯವರಿಗೆ ಮಾ.14 ರಂದು ದೂರು ನೀಡಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರ ಚುನಾವಣಾ ಏಜೆಂಟ್ ಆಗಿರುವ ವಕೀಲ ವಿಜಯ ಹೆಗ್ಡೆ ಅವರು ಬುಧವಾರ ಸಂಜೆ ಚುನಾವಣಾ ಅಧಿಕಾರಿಗಳಾದ ಡಾ.ಎಂ.ಟಿ.ರೇಜು ಅವರನ್ನು ಭೇಟಿಯಾಗಿ ಬಿಜೆಪಿ ವಿರುದ್ದ ದೂರು ಸಲ್ಲಿಸಿದ್ದಾರೆ.
ವಾಸ್ತವವಾಗಿ ಕಾಂಗ್ರೆಸ್ ಪಕ್ಷ ಉದಯವಾಣಿ ಪತ್ರಿಕೆಯ ವಿರುದ್ದ ದೂರು ನೀಡಬೇಕಾಗಿತ್ತು. ಲಕ್ಷಾಂತರ ರು. ಹಣ ಪಡೆದುಕೊಂಡು ಜಾಹೀರಾತಿನ ಬದಲಾಗಿ ಬಿಜೆಪಿ ಪರವಾಗಿ ಸುದ್ದಿ ಪ್ರಕಟಿಸುವ ಮೂಲಕ ುದಯವಾಣಿ ಪತ್ರಿಕೆ ಅಪರಾಧ ಎಸಗಿತ್ತು.
ಈ ರೀತಿಯಾಗಿ ಹಣ ಪಡೆದು ಜಾಹೀರಾತಿನ ಬದಲು ಸುದ್ದಿ ರೂಪದಲ್ಲಿ ಒಂದು ಪಕ್ಷದ ಪರವಾಗಿ ಸುದ್ದಿ ಪ್ರಕಟಿಸುವ ಮೂಲಕ ಉದಯವಾಣಿ ದಿನ ಪತ್ರಿಕೆಯು ಓದುಗರಿಗೆ, ಚುನಾವಣಾ ಆಯೋಗಕ್ಕೆ, ಸರಕಾರಕ್ಕೆ, ಪತ್ರಿಕಾ ಕ್ಷೇತ್ರಕ್ಕೆ ಅಪಚಾರವೆಸಗಿತ್ತು.
ಆದರೆ, ಉದಯವಾಣಿ ವಿರುದ್ದ ದೂರು ನೀಡಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಉದಯವಾಣಿಯಲ್ಲಿ ತಮ್ಮ ಹೆಸರು, ಸುದ್ದಿ, ಫೋಟೋ ಯಾವುದೂ ಪ್ರಕಟವಾಗದೇ ಇರಬಹುದೆಂ ಭಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಬಿಜೆಪಿ ವಿರುದ್ದ ದೂರು ನೀಡಿ ಕೈತೊಳೆದುಕೊಂಡಿದ್ದಾರೆ. ವರದಿ: ಶ್ರೀರಾಮ ದಿವಾಣ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಮರು ಚುನಾವಣೆಯ ಪ್ರಚಾರ ಕಾರ್ಯಕ್ರಮ ನಡೆಯುತ್ತಿರುವಂತೆಯೇ ಮಣಿಪಾಲದಿಂದ ಪ್ರಕಟವಾಗುತ್ತಿರುವ ‘ಉದಯವಾಣಿ’ ದಿನ ಪತ್ರಿಕೆಯು ಮೂರನೇ ದಿನವಾದ ಇಂದೂ (ಮಾ.14) ಸಹ ಕಾಸಿಗಾಗಿ ಸುದ್ದಿ ಪ್ರಕಟಿಸಿದೆ.
ಮಾ.14 ರ ುದಯವಾಣಿಯ 12 ನೇ ಪುಟದಲ್ಲಿ ‘ಮೀನುಗಾರರಿಗೆ ರಾಜ್ಯ ಸರಕಾರದ ಬಂಪರ್ ಕೊಡುಗೆ’ ಎಂಬ ಶಿರ್ಷಿಕೆಯಡಿಯಲ್ಲಿ ಬಿಜೆಪಿ ಪರವಾದ ವಿಶೇಷ ಬರಹವನ್ನು ಪ್ರಕಟಿಸಿ ಪತ್ರಿಕಾರಂಗಕ್ಕೆ ಕಳಂಕ ಹಚ್ಚಿದೆ. ಈ ಬರಹದೊಂದಿಗೆ ಮೀನುಗಾರಿಕಾ ನಿಗಮದ ಅಧ್ಯಕ್ಷರ ಹಾಗೂ ಮೀನುಗಾರಿಕಾ ಫಡರೇಶನಿನ ಅಧ್ಯಕ್ಷರ ಅಭಿಪ್ರಾಯಗಳನ್ನೂ ಪ್ರಕಟಿಸಿದೆ. ಇವರಿಬ್ಬರೂ ಬಿಜೆಪಿ ನಾಯಕರೂ ಹೌದು.
ಕಳೆದ ಮೂರ್ನಾಲ್ಕು ದಿನಗಳಿಂದ ಉದಯವಾಣಿಯ 12 ನೇ ಪುಟದಲ್ಲಿ ಪ್ರತಿದಿನವೂ ಬಿಜೆಪಿ ಪರವಾದ ವಿಶೇಷ ಲೇಖನಗಳು ಪ್ರಕಟವಾಗುತ್ತಿದ್ದು, ಇವುಗಳನ್ನು ಸಂಬಂಧಪಟ್ಟವರಿಂದ ಹಣ ಪಡೆದುಕೊಂಡು ಜಾಹೀರಾತಿನ ಬದಲಾಗಿ ಲೇಖನದ ರೂಪದಲ್ಲಿ ಉದಯವಾಣಿ ಪ್ರಕಟಿಸುತ್ತಿದೆ.
ಬಿಜೆಪಿ ಮತ್ತು ಉದಯವಾಣಿ ಈ ಮೂಲಕ ಚುನಾವಣಾ ಆಯೋಗ, ಚುನಾವಣಾ ವೀಕ್ಷಕರು, ಸರಕಾರವನ್ನು ವಂಚಿಸುತ್ತಿದೆ. ಚುನಾವಣಾಧಿಕಾರಿಗಳು, ಚುನಾವಣಾ ವೀಕ್ಷಕರು ಮತ್ತು ಕಾಂಗ್ರೆಸ್ ನಾಯಕರಾಗಲೀ, ಜೆಡಿಎಸ್ ನಾಯಕರಾಗಲೀ ಕಾಸಿಗಾಗಿ ಸುದ್ದಿಯ ವಿರುದ್ದ ಸಂಬಂಧಪಟ್ಟವರಿಗೆ ಇನ್ನೂ ಸಹ ದೂರು ನೀಡದೇ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾ.18 ರಂದು ನಡೆಯಲಿರುವ ಮರು ಚುನಾವಣೆಯ ಪ್ರಕ್ರೀಯೆಯಲ್ಲಿ ಒಂದೆರಡು ಪತ್ರಿಕೆಗಳು ಮತ್ತು ಒಂದೆರಡು ಖಾಸಗಿ ಟಿವಿ ಛಾನೆಲ್ ಗಳು ಪ್ರಮುಖ ರಾಜಕೀಯ ಪಕ್ಷಗಳಿಂದ ಜಾಹೀರಾತಿನ ಬದಲಾಗಿ ಕಾಸು ಪಡೆದು ಕಾಸು ಪಡೆದ ಪಕ್ಷಗಳ ಪರವಾಗಿ ಸುದ್ದಿಗಳನ್ನು ಪ್ರಕಟ ಮಾಡುವ ಪ್ರಕರಣ ಇಂದೂ ಮುಂದುವರಿದಿದೆ.
ಈ ಹಗರಣವನ್ನು www.udupibits.com ಮಾ.12 ರಂದು ವರದಿ ಮಾಡುವ ಮೂಲಕ ಬಹಿರಂಗಗೊಳಿಸಿತ್ತು. ಮಾ.13 ರ ಉದಯವಾಣಿಯಲ್ಲೂ ಒಂದು ವರದಿ ಪ್ರಕಟವಾಗಿದ್ದು, ಈ ವರದಿ ಕಾಸು ಪಡೆದು ಪ್ರಕಟಿಸಿದ ಸುದ್ದಿಯಾಗಿರಬಹುದೇ ಎಂಬ ಸಂಶಯ ಉದ್ಭವಿಸಿದೆ.
ಮಂಗಳವಾರದ ಉದಯವಾಣಿಯ 12 ನೇ ಪುಟದಲ್ಲಿ ಪ್ರಕಟವಾದ ‘ಡಾ.ಆಚಾರ್ಯರ ಅಭಿವೃದ್ದಿ ಕೊಡುಗೆಗಳೇ ಬಿಜೆಪಿಗೆ ಶ್ರೀರಕ್ಷೆ’ ಎಂಬ ವರದಿ ಸಂಪೂರ್ಣವಾಗಿ ಬಿಜೆಪಿ ಪರವಾಗಿದ್ದು, ಕಾಸಿಗಾಗಿ ಬರೆದ ವರದಿಯಂತಿದೆ ಎಂದು ಯಾರು ಬೇಕಾದರೂ ಹೇಳಬಹುದು.
ಇಂತಹ ಬಿಜೆಪಿ ಪರವಾದ ವರದಿಗಳು ಉದಯವಾಣಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಪ್ರಕಟವಾಗುತ್ತಿದೆ.
ನಿರ್ಧಿಷ್ಟವಾಗಿ ಸ್ಥಳೀಯ ಎರಡು ಖಾಸಿ ಛಾನೆಲ್ ಗಳಲ್ಲೂ ಸುದ್ದಿಯ ಹೆಸರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪರವಾಗಿ ಪ್ರಚಾರ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಚುನಾವಣಾ ಆಯೋಗ ಮತ್ತು ವೀಕ್ಷಕರು ಇದರ ಕಡೆಗೆ ಗಮನಹರಿಸದಿರುವುದು ಸಂಶಯಗಳಿಗೆ ಕಾರಣವಾಗಿದೆ. ವರದಿ: ಶ್ರೀರಾಮ ದಿವಾಣ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾ.18 ರಂದು ನಡೆಯಲಿರುವ ಮರು ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವಂತೆಯೇ ಕೆಲವು ಪತ್ರಿಕೆಗಳಿಗೆ ಮತ್ತು ಖಾಸಗಿ ಟಿವಿ ಛಾನೆಲ್ ಗಳಿಗೆ ಕಾಸು ಕೊಟ್ಟು ತಮ್ಮ ಪರವಾಗಿ ಸುದ್ದಿಯನ್ನು ಬರೆಸಿಕೊಳ್ಳುತ್ತಿದ್ದಾರೆಯೇ ಎಂಬ ಸಂಶಯ ವ್ಯಕ್ತವಾಗಿದೆ.
ಕೆಲವು ದಿನಪತ್ರಿಕೆಗಳಲ್ಲಿ, ವಾರ ಪತ್ರಿಕೆಗಳಲ್ಲಿ, ಕೆಲವು ಟಿವಿ ಛಾನೆಲ್ ಗಳಲ್ಲಿ ಒಂದೆರಡು ಪ್ರಮುಖ ರಾಜಕೀಯ ಪಕ್ಷಗಳ ಪರವಾದ ಸುದ್ದಿಗಳು ಈಗಾಗಲೇ ಪ್ರಕಟವಾಗಿವೆ, ಪ್ರಸಾರವಾಗಿವೆ. ಆಗುತ್ತಲೇ ಇದೆ. ಒಂದೆರಡು ವಾರ ಪತ್ರಿಕೆಗಳು ಈಗಾಗಲೇ ಯಾರು ಗೆಲ್ಲಬಹುದೆಂಬುದನ್ನು ಬಹಿರಂಗಪಡಿಸಿವೆ. ಯಾರು ಗೆಲ್ಲಬೇಕೆಂದೂ ಫರ್ಮಾನು ಹೊರಡಿಸಿವೆ. ಕೆಲವು ಖಾಸಗಿ ಟಿವಿ ಛಾನೆಲ್ ಗಳು ನ್ಯೂಸ್ ಹೆಸರಲ್ಲಿ ಅಭ್ಯರ್ಥಿಗಳ ಚುನಾವಣಾ ವೇದಿಕೆಯೂ ಆಗುತ್ತಿರುವುದನ್ನು ಸ್ಪಷ್ಪವಾಗಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಭಾಷಣಗಳನ್ನು ಕಾಲು ಗಂಟೆ, ಅರ್ಧ ಗಂಟೆ ಕಾಲ ಪ್ರಸಾರ ಮಾಡುತ್ತಿವೆ.
ಪತ್ರಿಕೆಗಳಲ್ಲಿ ಪ್ರಕಟವಾಗುವ ಕೆಲವು ವರದಿಗಳು, ವಿಶೇಷ ವರದಿಗಳು, ಲೇಖನಗಳು, ಟಿವಿ ಛಾನೆಲ್ ಗಳಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವುಗಳೆಲ್ಲ ಸುದ್ದಿ ರೂಪದಲ್ಲಿರುವ ಜಾಹೀರಾತುಗಳು ಎಂಬ ಸತ್ಯ ಖಚಿತವಾಗುತ್ತದೆ.
ಮಾ. 12 ರ ಉದಯವಾಣಿಯಲ್ಲಿ ‘ಶ್ರೀ ಕ್ಷೇತ್ರ ಕಚ್ಚೂರಿನ ಅಭಿವೃದ್ದಿ: ರಾಜ್ಯ ಸರಕಾರದಿಂದ 2 ಕೋ.ರೂ. ಮಿಕ್ಕಿ ಅನುದಾನ’ ಎಂಬ ಬರಹ ಪ್ರಕಟವಾಗಿದೆ. ಇದನ್ನು ವರದಿ ಎಂದು ಹೇಳಲು ಸಾಧ್ಯವಿಲ್ಲ. ವರದಿಗೆ ಬೇಕಾದ ಡೇಟ್ ಲೈನ್ ಈ ಬರಹಕ್ಕಿಲ್ಲ. ಇದನ್ನು ಲೇಖನ ಎನ್ನಬಹುದು. ಆದರೆ, ಈ ಲೇಖನ ಬರೆದವರ ಹೆಸರು ಇದರಲ್ಲಿಲ್ಲ. ಕಚ್ಚೂರು ಕ್ಷೇತ್ರದಲ್ಲಿ ಈಗ ಬ್ರಹ್ಮಕಲಶವಾಗಲೀ, ಜೀರ್ಣೋದ್ದಾರವಾಗಲೀ, ವಾರ್ಷೀಕ ಉತ್ಸವವಾಗಲೀ ಇಲ್ಲ. ಯಾವ ಕಾರ್ಯಕ್ರಮಗಳೂ ಇಲ್ಲದಿರುವಾಗ ಬಿಜೆಪಿ ಪರವಾದ, (ಲೇಖನದಲ್ಲಿ ಆನಂದ ಮಟಪಾಡಿ, ಸಮಾಜ ಸೇವಕರು ಎಂಬವರ ಅಭಿಪ್ರಾಯವನ್ನೂ ಪ್ರಕಟಿಸಲಾಗಿದೆ. ಇವರು ಬಿಜೆಪಿ ಜಿಲ್ಲಾ ಸಮಿತಿಯ ಪದಾಧಿಕಾರಿ ಎನ್ನುವುದನ್ನು ಲೇಖನದಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ) ಲೇಖನವನ್ನು ಚುನಾವಣಾ ಸಂದರ್ಭದಲ್ಲಿ ಪ್ರಕಟಿಸಿರುವುದು ಕಾಸಿಗಾಗಿ ಸುದ್ದಿ ಅಲ್ಲದೇ ಮತ್ತೇನು ?
ಚುನಾವಣಾ ವೀಕ್ಷಕರು ಕಳೆದ ಒಂದು ವಾರದ ಎಲ್ಲಾ ದಿನ, ವಾರ ಪತ್ರಿಕೆಗಳನ್ನು, ಖಾಸಗಿ ಟಿವಿ ಛಾನೆಲ್ ಗಳ ಎಲ್ಲಾ ಸುದ್ದಿಗಳನ್ನೂ ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕಾಗಿದೆ. ಸರಕಾರಿ ಅಧಿಕಾರಿಗಳು, ಸಾರ್ವಜನಿರು ಇವುಗಳನ್ನೆಲ್ಲ ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದೇ ಆದಲ್ಲಿ ಕಾಸಿಗಾಗಿ ಸುದ್ದಿ ಪ್ರಕರಣ ಬಯಾಲಾಗಲಿದೆ. ವರದಿ: ಶ್ರೀರಾಮ ದಿವಾಣ.

ಉಡುಪಿ: ಅಧಿಕಾರ ದಾಹ ಮತ್ತು ಹಣದ ವ್ಯಾಮೋಹದಿಂದಾಗಿ ಸದಾನಂದ ಗೌಡರು ಉಡುಪಿ- ಚಿಕ್ಕ ಮಗಳೂರು ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿಯಾಗಿದ್ದಾರೆ. ಇದರಿಂದಾಗಿ ಮರು ಚುನಾವಣೆ ನಡೆಯುತ್ತಿದೆ. ಜನರ ತೆರಿಗೆ ಹಣ ಈ ಚುನಾವಣೆಗಾಗಿ ವ್ಯರ್ಥವಾಗುತ್ತಿದ್ದು, ಇದಕ್ಕೆ ಸದಾನಂದ ಗೌಡರೇ ನೇರ ಹೊಣೆಗಾರರು. ದೇವೇಗೌಡರ ಮಾರ್ಗದರ್ಶನದಲ್ಲಿ ಸದಾನಂದ ಗೌಡರು ಆಡಳಿತ ನಡೆಸುತ್ತಿದ್ದಾರೆ ಎಂದು ಸಂಯುಕ್ತ ಜನತಾದಳ (ಜೆಡಿಯು) ಅಭ್ಯರ್ಥಿ ಚಿಕ್ಕ ಮಗಳೂರಿನ ಕೆ.ಭರತೇಶ್ ಆರೋಪಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾ.1 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಭರತೇಶ್ ಈ ಹಿಂದೆ 10 ವರ್ಷಗಳ ಕಾಲ ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿ, ಒಂದು ವರ್ಷ ಕಾಲ ಚಿಕ್ಕ ಮಗಳೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದವರು ಬಳಿಕ ಜೆಡಿಯು ಪಕ್ಷಕ್ಕೆ ಸೇರಿ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಕಾಫಿ ಪ್ಲಾಂಟರ್ ಆಗಿರುವ ಭರತೇಶ್, ತಾನು ಚುನಾವಣೆಯಲ್ಲಿ ಗೆದ್ದರೆ ರಯತರ, ಯುವಕರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಲಿರುವುದಾಗಿ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಅವರು ಸಿ.ಟಿ.ರವಿ, ಅನಂತ ಕುಮಾರ್ ಮೊದಲಾದವರೊಂದಿಗೆ ಸೇರಿಕೊಂಡು ಧರ್ಮ- ಧರ್ಮಗಳ ನಡುವೆ ಬೆಂಕಿ ಹಚ್ಚಿ, ವಿಷ ಬೀಜ ಬಿತ್ತಿ ಕೋಮು ಗಲಭೆ ನಡೆಸುತ್ತಾರೆ. ಅಧರ್ಮದ ರಾಜಕಾರಣ ನಡೆಸುತ್ತಾರೆ. ಪಕ್ಷದ ಪ್ರಮುಖರ ಮೇಲೆ ಇರುವ ಮೊಕದ್ದಮೆಗಳಿಗೆ `ಬಿ’ ವರದಿ ಸಲ್ಲಿಸಿ ಪ್ರಕರಣಗಳಿಗೆ ಮಂಗಳ ಹಾಡುತ್ತಿದೆ. ಬಹುಕೋಟ್ಯಧಿಪತಿ ಮಂತ್ರಿಗಳೇ ಇರುವ ಸರಕಾರ ಕಣ್ಣು, ಕಿವಿ ಕಳೆದುಕೊಂಡಿದೆ. ಇದೊಂದು ಗೂಂಡಾ ರಾಜ್ಯ ಎಂದು ಭರತೇಶ್ ಅಪಾದಿಸಿದರು.
ದೇವೇಗೌಡ ಏಂಡ್ ಸನ್ಸ್ ಪ್ರೈವೇಟ್ ಲಿಮಿಟೆಡ್ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಆಡಳಿತಕ್ಕೆ ತಂದಿದೆ. ಸಮಯ ಸಾಧಕ ರಾಜಕಾರಣಿಯಾಗಿರುವ ದೇವೇಗೌಡರು ಬಿಜೆಪಿಯನ್ನು ಗೆಲ್ಲಿಸಲಿಕ್ಕಾಗಿಯೇ ಎಸ್.ಎಲ್.ಭೋಜೇಗೌಡರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಚುನಾವಣೆಯ ಸಮಯದಲ್ಲಿ ಮಾತ್ರ ಜನರ ನಡುವೆ ಬರ್ತಾರೆ. ಉಳಿದ ಸಮಯದಲ್ಲಿ ಕ್ರಿಕೆಟ್ ನಡೆಸ್ತಾರೆ ಎಂದು ಟೀಕಿಸಿದ ಕೆ.ಭರತೇಶ್, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಮತದಾರರು ಕಸದ ಬುಟ್ಟಿಗೆ ಎಸೆಯಲಿದ್ದಾರೆ. ಹೊಸ ಶಕ್ತಿಯನ್ನು ಬಯಸುತ್ತಿರುವ ಮತದಾರರ ಜೆಡಿಯು ಪಕ್ಷಕ್ಕೆ ಒಲಿಯಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಧ್ಯಮಗೋಷ್ಟಿಯಲ್ಲಿ ಜೆಡಿಯು ರಾಜ್ಯ ಸಂಘಟನಾ ಕಾರ್ಯದರ್ಶಿ ಜಾನ್ ಫ್ರಾನ್ಸಿಸ್ ಫೆರ್ನಾಂಡಿಸ್, ದ.ಕ.ಜಿಲ್ಲಾಧ್ಯಕ್ಷ ಹರೀಶ್ ಆಳ್ವ, ಗದಗ ಜಿಲ್ಲಾಧ್ಯಕ್ಷ ಬಸವರಾಜ ದೇಸಾಯಿ, ಚಿಕ್ಕ ಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಪಿ.ಮಂಜುನಾಥ ಪಟೇಲ್, ಇತರ ಮುಖಂಡರುಗಳಾದ ಲತಾ ಉದಯ ಶೆಟ್ಟಿ, ಝಮಾನ್, ದಿನೇಶ್ ಶೆಟ್ಟಿ, ವಿಶಾಂತ್ ಡಿ’ ಸೋಜ, ಸುಪ್ರಿತ್ ಕುಮಾರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ಅಕ್ರಮ ಪಿಸ್ತೂಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳಿಗೆ ಉಡುಪು ಜಿಲ್ಲಾ ನ್ಯಾಯಾಲಯವು ಜ.4 ರಂದು ಜಾಮೀನು ನೀಡಿ ತೀರ್ಪು ನೀಡಿದೆ.
ಉಡುಪಿಯ ಬಾಲಕೃಷ್ಣ ದೇವಾಡಿಗ ಹಾಗೂ ಮಂಗಳೂರಿನ ಅನೀಶ್ ಶೆಟ್ಟಿ ಎಂಬವರೇ ಜಾಮೀನು ಪಡೆದುಕೊಂಡವರು. ಇವರ ಪರವಾಗಿ ಕ್ರಮವಾಗಿ ವಕೀಲರುಗಳಾದ ವಿಜಯ ಕುಮಾರ್ ಶೆಟ್ಟಿ ಹಾಗೂ ಹಮ್ಜತ್ ವಾದಿಸಿದ್ದರು.
ಮಂಗಳೂರು ಕುದ್ರೋಳಿಯ ಶ್ರೇಯಸ್ ಕುಲಾಲ್ ಹಾಗೂ ಮರೋಳಿಯ ದೀಕ್ಷಿತ್ ಪೂಜಾರಿ ಪ್ರಕರಣ ಪ್ರಧಾನ ಆರೋಪಿಗಳಾಗಿದ್ದು, ಈಗಲೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆರೋಪಿಗಳನ್ನು ಡಿವೈಎಸ್ಪಿ ಜಯಂತ್ ಶೆಟ್ಟಿ ಹಾಗೂ ಸಿಬ್ಬಂದಿಗಳು ಡಿಸೆಂಬರ್ 10 ರಂದು ಮಧ್ಯಾಹ್ನ ಉಡುಪಿ ನಗರದ ಬೃಂದಾವನ ಲಾಡ್ಜ್ ಮುಂಭಾಗದಿಂದ ಬಂಧಿಸಿದ್ದರು. ಶ್ರೇಯಸ್ ಹಾಗೂ ದೀಕ್ಷಿತ್ ಇವರಿಂದ ಎರಡು ಪಿಸ್ತೂಲುಗಳನ್ನು ಜಯಂತ್ ಶೆಟ್ಟಿ ವಶಪಡಿಸಿಕೊಂಡಿದ್ದರು.
ಪ್ರಕರಣದಲ್ಲಿ ಆರೋಪಿ ಎಂದು ಜಯಂತ್ ಶೆಟ್ಟಿಯವರಿಂದ ಬಂಧಿಸಲ್ಪಟ್ಟಿದ್ದ ಉಡುಪಿಯ ಬಾಲಕೃಷ್ಣ ದೇವಾಡಿಗ ಟೂರಿಸ್ಟ್ ಕಾರಿನ ಚಾಲಕರು ಮತ್ತು ಮಾಲಕರಾಗಿದ್ದು, ಅನ್ಯಾಯವಾಗಿ ಬಂಧನಕ್ಕೆ ಒಳಗಾಗಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾದ ಶ್ರೇಯಸ್ ಹಾಗೂ ದೀಕ್ಷಿತ್ ಮಂಗಳೂರಿನಿಂದ ಉಡುಪಿಗೆ ಆಗಮಿಸಿ, ನಗರದ ಬೃಂದಾವನ ಲಾಡ್ಜ್ ನಲ್ಲಿ ಉಳಕೊಂಡಿದ್ದರು. ಅದೇ ದಿನ ಬೃಂದಾವನ ಲಾಡ್ಜ್ ನ ಅಧಿಕೃತರು ಬಾಲಕೃಷ್ಣ ದೇವಾಡಿಗ ಅವರ ಮೊಬೈಲ್ ಗೆ ಕರೆ ಮಾಡಿ, ಮಂಗಳೂರಿಗೆ ಒಂದು ಬಾಡಿಗೆ ಇದೆ ಎಂದೂ, ಬರಬೇಕೆಂದು ತಿಳಿಸಿದ್ದರು. ಬಾಡಿಗೆ ಎಂದು ಅಪರಿಶಿತರನ್ನು ಮಂಗಳೂರಿಗೆ ಕರೆದೊಯ್ಯಲು ಬಾಲಕೃಷ್ಣ ದೇವಾಡಿಗರು ಬೃಂದಾವನ ಲಾಡ್ಜ್ ನ ಮುಂಭಾಗಕ್ಕೆ ಹೋಗಿ ತಮ್ಮ ಕಾರು ನಿಲ್ಲಿಸಿದ್ದರು. ಪ್ರಕರಣದ ಪ್ರಧಾನ ಆರೋಪಿಗಳಾದ ಶ್ರೇಯಸ್ ಹಾಗೂ ದೀಕ್ಷಿತ್ ಇವರು ಲಾಡ್ಜ್ ನಿಂದ ಕೆಳಗಿಳಿದು ಕಾರಿನ ಬಳಿ ಬರುತ್ತಿರುವಷ್ಟರಲ್ಲಿ ಜಯಂತ್ ಶೆಟ್ಟಿ ಹಾಗೂ ಸಿಬ್ಬಂದಿಗಳು ಶ್ರೇಯಸ್, ದೀಕ್ಧಿತ್ ಹಾಗೂ ಇವರನ್ನು ಪರಿಚಯ ಇಲ್ಲದೆ ಕೇವಲ ಬಾಡಿಗೆಗೆ ಕರೆದೊಯ್ಯಲೆಂದು ಬಂದು ನಿಂತಿದ್ದ ಬಾಲ ಕೃಷ್ಣ ದೇವಾಡಿಗ ಅವರನ್ನು ಬಂಧಿಸಿದ್ದರು.
ಪ್ರಧಾನ ಆರೋಪಿಗಳು ತಮಗೆ ಅನೀಶ್ ಶೆಟ್ಟಿ ಪಿಸ್ತೂಲ್ ನೀಡಿದ್ದು ಎಂದು ಹೇಳಿಕೆ ನೀಡಿದ ಕಾರಣ ಪೊಲೀಸರು ಮಂಗಳೂರಿನ ಅನೀಶ್ ಶೆಟ್ಟಿಯನ್ನು ಬಂಧಿಸಿದ್ದರು. ಅನೀಶ್ ಶೆಟ್ಟಿ ಈ ಹೇಳಿಕೆಯನ್ನು ಅಲ್ಲಗೆಲೆದಿದ್ದರು. ಮಾತ್ರವಲ್ಲ, ತನಗೆ ಕಳೆದ ಮೂರು ವರ್ಷಗಳಿಂದ ಆರೋಪಿಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.
ಆರೋಪಿಗಳಿಂದ ವಶಪಡಿಸಿಕೊಂಡ ಪಿಸ್ತೂಲುಗಳು ವಿದೇಶಿ ನಿರ್ಮಿತವೆಂದೂ, ಆರೋಪಿಗಳು ಕುಖ್ಯಾತ ಭೂಗತ ಜಗತ್ತಿನ ಪಾತಕಿ ಕೊರಗ ವಿಶ್ವನಾಥ ಶೆಟ್ಟಿಯ ಸಹಚರರೆಂದೂ, ಆರೋಪಿಗಳು ಮಾಜಿ ಭೂಗತ ಜಗತ್ತಿನ ಪಾತಕಿ ಮಂಗಳೂರಿನ ರಾಕೇಶ್ ಮಲ್ಲಿ ಕೊಲೆಗೆ ಸಂಚು ರೂಪಿಸಿದ್ದರು ಎಂದೂ ಎಸ್ ಪಿ ಡಾ.ರವಿಕುಮಾರ್ ಹಾಗೂ ಡಿವೈಎಸ್ಪಿ ಜಯಂತ್ ಶೆಟ್ಟ ಮಾಧ್ಯಮ ಗೋಷ್ಠಿ ಕರೆದು ತಿಳಿಸಿದ್ದರು.
ಇಡೀ ಪ್ರಕರಣದ ಸಾಚಾ ತನದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವಾರು ಸಂಶಯಗಳು ವ್ಯಕ್ತವಾಗಿತ್ತು.

ಉಡುಪಿ: ಇಲ್ಲಿನ ಬಳಕೆದಾರರ ವೇದಿಕೆ ಪ್ರಮುಖರು ಡಿ.30 ರಂದು ವೇದಿಕೆಯ ಕಚೇರಿಯಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಹಸಿ ಹಸಿ ಸುಳ್ಳು ಮಾಹಿತಿ ನೀಡಿರುವುದು ದಾಖಲಾತಿಗಳ ಸಹಿತ ಬಹಿರಂಗಗೊಂಡಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಳಕೆದಾರರ ವೇದಿಕೆಯ ಟ್ರಸ್ಟ್ ಗಳಲ್ಲಿ ಒಬ್ಬರಾದ ಎ.ಪಿ.ಕೊಡಂಚ ಎಂಬವರು, ವೇದಿಕೆಗೆ ಇದುವರೆಗೆ ಸರಕಾರದಿಂದ ಯಾವುದೇ ರೀತಿಯ ಅನುದಾನವೂ ಬಂದಿಲ್ಲ ಎಂದು ತಿಳಿಸಿದ್ದರು.
ಆದರೆ, udupibits.com ಗೆ ಲಭಿಸಿದ ದಾಖಲಾತಿಗಳ ಪ್ರಕಾರ ಬಳಕೆದಾರರ ವೇದಿಕೆಗೆ 5 ಲಕ್ಷ ರು. ಗಳಂತೆ ಕನಿಷ್ಠ ಎರಡು ಬಾರಿ ಒಟ್ಟು 10 ಲಕ್ಷ ರು. ಅನುದಾನ ಸರಕಾರದಿಂದ ಬಿಡುಗಡೆಯಾಗಿದೆ.
ಕೇಂದ್ರ ಸರಕಾರದ ನಾಗರಿಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಸರಬರಾಜು ಇಲಾಖೆಯು ಸೆಂಟ್ರಲ್ ಬ್ಯಾಂಕ್ ಮೂಲಕ 2003 ಮತ್ತು 2006 ರಲ್ಲಿ ಉಡುಪಿ ಬಳಕೆದಾರರ ವೇದಿಕೆಗೆ ಹಣ ಬಿಡುಗಡೆ ಮಾಡಿದೆ. ಈ ಹಣವನ್ನು ವೇದಿಕೆಯ ಅಧ್ಯಕ್ಷರಾದ ಕೆ.ದಾಮೋದರ ಐತಾಳ್ ಅವರು ಪಡೆದುಕೊಂಡಿದ್ದಾರೆ.
ಒಂದು ಬಾರಿ 2.50 ಲಕ್ಷ ರು., ಎರಡನೇ ಬಾರಿ 1.75 ಲಕ್ಷ ರು. ಮತ್ತು ಮೂರನೇ ಬಾರಿ 75 ಸಾವಿರ ರು. ಹೀಗೆ ಮೊದಲ ಸಲ ಮೂರು ಪ್ರತ್ಯೇಕ ಕಂತುಗಳಲ್ಲಿ ಕೇಂದ್ರ ಸರಕಾರವು ಉಡುಪಿ ಬಳಕೆದಾರರ ವೇದಿಕೆಗೆ ಅನುದಾನವನ್ನು ಬಿಡುಗಡೆ ಮಾಡಿತ್ತು.
ಎರಡನೇ ಸಲವೂ ಕೇಂದ್ರ ಸರಕಾರವು ಬಳಕೆದಾರರ ವೇದಿಕೆಗೆ ಇದೆ ರೀತಿಯಾಗಿ ಅನುದಾನವನ್ನು ಬಿಡುಗಡೆಮಾಡಿತ್ತು. ಬಳಕೆದಾರರ ವೇದಿಕೆಗೆ 10 ಲಕ್ಷಕ್ಕೂ ಅಧಿಕ ಹಣ ಬಿದುಗದೆಯಾಗಿದೆಯಾದರೂ, ವೇದಿಕೆಯ ಪ್ರಮುಖರು ಯಾಕೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.

ಉಡುಪಿ: ಮಲ್ಪೆಯ ಬೋಟ್ ಮಾಲಕ, ಉದ್ಯಾವರ ಸಮೀಪದ ಪಿತ್ರೋಡಿಯ ಖದಿಮಿ ಜಾಮೀಯ ಮಸೀದಿಯ ಪಕ್ಕದಲ್ಲಿರುವ ಅನುಗ್ರಹದಲ್ಲಿ ವಾಸವಾಗಿದ್ದ ಅಮರ್ ಯಾನೆ ಅಮರನಾಥ್ (30) ನನ್ನು ಯಾರೋ ಕೊಲೆ ಮಾಡಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತವಾಗಿ ಮತ್ತು ಸಮಗ್ರವಾಗಿ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಅಮರ್ ನ ಹೆತ್ತವರು ಡಿ.19 ರಂದು ಪಶ್ಚಿಮ ವಲಯದ ಐಜಿಪಿ ಪ್ರತಾಪ್ ರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಒಕ್ಟೋಬರ್ 23 ರಂದು ರಾತ್ರಿ 11 ಗಂಟೆಗೆ ಅಮರ್ ಮನೆಗೆ ಬಂದಿದ್ದಾನೆ. 11.20 ಕ್ಕೆ ಅತ್ಯಂತ ನಿಗೂಢ ರೀತಿಯಲ್ಲಿ ಅಮರ್ ಸತ್ತಿದ್ದಾನೆ. ಮನೆಗೆ ಬಂದ ಕೇವಲ 20 ನಿಮಿಷದಲ್ಲಿ ಅಮರ್ ನ ದೇಹ, ಪತ್ನಿ ಶೀತಲ್ ಜೊತೆ ವಾಸವಾಗಿರುವ ಅನುಗ್ರಹದ ಮಹಡಿಯಲ್ಲಿರುವ ತನ್ನದೇ ಮನೆಯ ಕೆಳಗಡೆ ಬಿದ್ದ ಸ್ಥಿತಿಯಲ್ಲಿ ಬಿದ್ದಿತ್ತು. ಮುಖ ಕೆಳಗಾಗಿ ಬಿದ್ದಿತ್ತು. ಕೈಗಳು ಹೊಟ್ಟೆಯ ಭಾಗದಲ್ಲಿ ಅಡಿ ಭಾಗದಲ್ಲಿತ್ತು. ಕೆನ್ನೆ ಸಂಪೂರ್ಣವಾಗಿ ನಜ್ಜು ಗುಜ್ಜಾದ ಸ್ತ್ಫಿತಿಯಲ್ಲಿತ್ತು. ಯಾವುದೋ ವಸ್ತುವಿನಿಂದ ಹೊಡೆದು ಕೊಲೆ ಮಾಡಿದ ಬಳಿಕ ಕೊಲೆಗಡುಕರು ಮಹಡಿಯಿಂದ ಕೆಳಗೆಸೆದಿದ್ದಾರೆ. ಸಹಜವಾಗಿ ಕೆಳಗೆ ಬೀಳುವ ಸಾಧ್ಯತೆಯೇ ಇಲ್ಲ. ಒಂದು ಪಕ್ಷ ಬಿದ್ದರೂ ಕೈ ಕಾಲು ಮುರಿಯಬೇಕಾಗಿತ್ತೆ ಹೊರತು ಸಾಯಲು ಸಾಧ್ಯವೇ ಇಲ್ಲ. ಇಂತಹದ್ದರಲ್ಲಿ ನಾಯಿಗೆ ತಿನ್ನಲು ಕೊಡುವಾಗ ಅಮರ್ ಕೆಳಗೆ ಬಿದ್ದು ಸತ್ತ ಎಂಬ ಅಮರನ ಪತ್ನಿ ಶೀತಲ್ ಳ ಹೇಳಿಕೆ ನಂಬಲಸಾಧ್ಯ ಎಂದು ಅಮರ್ ನ ತಾಯು ಗಿರಿಜಾ ಸುವರ್ಣ ಹಾಗೂ ತಂದೆ ಸದಾನಂದ ಜಿ.ಸುವರ್ಣ ದೂರಿನಲ್ಲಿ ಹೇಳಿದ್ದಾರೆ.
ಅಮರ್ ನನ್ನು ವಿವಾಹವಾಗಿರುವ ಶೀತಲ್, ಕ್ರಿಶ್ಚಿಯನ್ ಸಮುದಾಯದವಳಾಗಿದ್ದಾಳೆ. ಮೊದಲು ಒಬ್ಬಾತನನ್ನು ವಿವಾಹವಾಗಿ ಬಳಿಕ ವಿಚ್ಛೇದನೆ ಪಡೆದವಳು. ಅಮರ್ ಸತ್ತ ದಿನದ ಶೀತಲ್ ವರ್ತನೆ ನಮಗೆ ಅನೇಕ ಸಂಶಯಗಳಿಗೆ ಕಾರಣವಾಗಿದೆ. ಆಕೆಗೂ ಅಮರ್ ಗೂ ಅನೈತಿಕ ಸಂಬಂಧದ ವಿಷಯದಲ್ಲಿ ಆಗಾಗ ಮನೆಯಲ್ಲಿ ಜಗಳಗಳು ನಡೆಯುತ್ತಿತ್ತು ಎಂದು ಅಮರ್ ಮನೆಯವರು ದೂರಿನಲ್ಲಿ ವಿವರ ನೀಡಿದ್ದಾರೆ.
ಅಮರ್ ಹಾಗೂ ಶೀತಲ್ ವಾಸವಾಗಿದ್ದ ಮಹಡಿ ಮನೆಗೆ ಹಿಂಬಾಗಿಲಿನಿಂದ ಮೆಟ್ಥಿಲುಗಳಿದ್ದು, ರಾತ್ರಿ ಇಲ್ಲಿಂದಾಗಿ ಬಂದ ಯಾರೋ ಅಮರ್ ಕೊಲೆ ಮಾಡಿ ಹೋಗಿರುವ ಸಾಧ್ಯತೆಗಳಿವೆ. ಅಮರ್ ಸತ್ತ ಬಳಿಕ ಶೀತಲ್ ಅಮರ್ ಗೆ ಸೇರಿದ ವಿವಿಧ ಬ್ಯಾಂಕ್ ಖಾತೆಯ ಪಾಸ್ ಪುಸ್ತಕಗಳು, ಪಾಲಿಸಿಗಳು ಇತ್ಯಾದಿ ಹಲವಾರು ದಾಖಲೆಗಳನ್ನು ತವರು ಮನೆಗೆ ಕೊಂದೊಯ್ದಿದ್ದಾಳೆ ಎಂದು ಅಮರ್ ಮನೆಯವರು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಕಾಪು ಪೋಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ದಾಖಲಾಗಿದೆ. ನಮ್ಮ ಸಂಶಯಗಳ ಬಗ್ಗೆ ದೂರು ಕೂತ್ತರೂ, ಕೊಲೆಯಾಗಿರುವ ಸಾಧ್ಯತೆಗಳ ಬಗ್ಗೆ ಸಬ್ ಇನ್ಸ್ ಪೆಕ್ಟರ್ ಮೋಹನ್ ಕೊಟ್ಟಾರಿ ಅವರಿಗೆ ವಿವರವಾದ ಮಾಹಿತಿ ನೀಡಿದರೂ ಅವರು ಸರಿಯಾಗಿ ತನಿಖೆ ನಡೆಸಿಲ್ಲ. ಬದಲಾಗಿ ಪ್ರಕರಣದಲ್ಲಿ ರಾಜಿಯಾಗುವಂತೆ ಪಿಎಸ್ಐ ಒತ್ತಡ ಹಾಕುತ್ತಿದ್ದಾರೆ. ಈ ಬಗ್ಗೆ ಎಸ್ ಪಿ ಡಾ.ವೈ.ಎಸ್.ರವಿಕುಮಾರ್ ಅವರಿಗೆ ದೂರು ಕೊಟ್ಟಿದ್ದೇವೆ. ಎಸ್ ಪಿ ಅವರಿಗೆ ದೂರು ಕೊಟ್ಟ ಬಳಿಕ ಮನೆಗೆ ಭೇಟಿ ನೀಡಿದ ಅವರಿಗೆ ಮನೆಯ ಕೆಲವು ನಿರ್ಧಿಷ್ಟ ಸ್ಥಳಗಳಲ್ಲಿದ್ದ ರಕ್ತದ ಕಲೆಗಳನ್ನು ನಾವು ತೋರಿಸಿದ್ದು, ಪೋಲೀಸ್ ಅಧಿಕಾರಿಗಳು ರಕ್ತದ ಕಲೆಗಳನ್ನು ಸಂಗ್ರಹಿಸಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.
ಅಮರ್ ನನ್ನು ಆತನ ಪತ್ನಿ ಶೀತಲ್ ಳೇ ಕೊಲೆ ಮಾಡಿಸಿರುವ ಸಾಧ್ಯತೆಗಳಿವೆ. ಹಾಗಾಗಿ ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಹೆತ್ತವರು ಮನವಿ ಮಾಡಿಕೊಂಡಿದ್ದಾರೆ. ಚಿತ್ರಗಳು: ಶ್ರೀರಾಮ ದಿವಾಣ.