Posts Tagged ‘udupi’

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಅವರನ್ನು ಜಿಲ್ಲೆಯಿಂದ ಸಚಿವರನ್ನಾಗಿ ಆಯ್ಕೆ ಮಾಡುವಂತೆ ಜಿಲ್ಲೆಯ ದಲಿತ ಮುಖಂಡರ ನಿಯೋಗವೊಂದು ಬೆಂಗಳೂರಿಗೆ ತೆರಳಿ ಕೆಪಿಸಿಸಿ ಅದ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡು ಒತ್ತಡ ಹಾಕಿದೆ.
ಪ್ರಮೋದ್ ಅವರು ಬಡವರು, ದಲಿತರು, ಮಹಿಳೆಯರ ಬಗ್ಗೆ ಅಪಾರವಾದ ಕಾಳಜಿಯುಳ್ಳವರು. ಜನ ಸಾಮಾನ್ಯರ ಕೈಗೆ ಸಿಕ್ಕುವಂಥ ವ್ಯಕ್ತಿ. ಯಾವುದೇ ಒಂದು ಜಾತಿಯವರ ಪರವಾಗಿಯಷ್ಟೇ ಕೆಲಸ ಮಾಡಿದವರೂ ಅಲ್ಲ. ಇವರನ್ನು ಸಚಿವರನ್ನಾಗಿ ಮಡಿದಲ್ಲಿ ಮಾತ್ರ ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಗೆ ಪ್ರಯೋಜನವಾಗಲಿದೆ. ಮಾತ್ರವಲ್ಲ, ಪ್ರಮೋದರು ಸಚಿವರಾದರೆ ಮಾತ್ರವೇ ಜಿಲ್ಲೆಯ ಎಲ್ಲಾ ಜಾತಿ, ಮತ, ವರ್ಗಗಳ ಜನರಿಗೂ ಉಪಕಾರವಾಗಲಿದೆ ಎಂದು ದಲಿತ ನಾಯಕರು ಡಾ.ಪರಮೇಶ್ವರ್ ಅವರಿಗೆ ಮನವರಿಕೆ ಮಾಡಿಕೊಟ್ಟರು ಎಂದು ತಿಳಿದುಬಂದಿದೆ. ಕಾಪು ಕ್ಷೇತ್ರದಿಂದ ಶಾಸಕರಾದ ವಿನಯ ಕುಮಾರ್ ಸೊರಕೆಯವರು ಸಂಸದರಾಗಿದ್ದ ಅವಧಿಯಲ್ಲಿಯೂ ಅವರು ಜಿಲ್ಲೆಗಾಗಲೀ, ಜಿಲ್ಲೆಯ ಬಡ ಜನರಿಗಾಗಲೀ ಮಾಡಿದ್ದೇನೂ ಇಲ್ಲ. ಸ್ವಜಾತಿ ವಾದಿಯಾದ ಸೊರಕೆಯವರು ತಮ್ಮ ಸುತ್ತಲೂ ಸ್ವಜಾತಿ ಬಾಂಧವರನ್ನೇ ಇಟ್ಟುಕೊಂಡು ರಾಜಕೀಯ ಮಾಡಿದವರು. ಸೊರಕೆಯವರನ್ನು ಸಚಿವರನ್ನಾಗಿ ಮಡಿದಲ್ಲಿ ಇತರ ಯವ ಜಾತಿಯವರಿಗೂ ಯಾವುದೇ ಲಾಭವಾಗದು. ಸೊರಕೆಯವರನ್ನು ಸುತ್ತುವರಿದಿರುವ ಅವರ ಸ್ವಜಾತಿ ಬಾಂಧವರೂ ಇತರ ಯಾರನ್ನೂ ಶಾಸಕರ ಹತ್ತಿರ ಸುಳಿಯಲೂ ಬಿಡಲಾರದ ಸ್ಥಿತಿ ನಿರ್ಮಾಣವಾಗುವುದು ಖಚಿತ ಎಂದು ದಲಿತ ಮುಖಂಡರು ಸೊರಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. ಉಡುಪಿ ಜಿಲ್ಲೆಯಿಂದ ಸಚಿವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸೊರಕೆಯವರ ಬದಲಾಗಿ ಪ್ರಮೋದ್ ಮಧ್ವರಾಜ್ ಅವರನ್ನು ಪರಿಗಣಿಸಬೇಕು. ಪ್ರಮೋದರನ್ನು ಸಚಿವರನ್ನಾಗಿ ಮಾಡಿದಲ್ಲಿ ಜಿಲ್ಲೆಯ ಸಮಸ್ತ ದಲಿತ ಸಮುದಾಯ ಪ್ರಮೋದ್ ಜೊತೆಗೆ ಸಹಕರಿಸಲಿದೆ. ಮಾತ್ರವಲ್ಲ, ಮುಂಬರುವ ಲೋಕಸಭ ಚುನಾವಣೆಯಲ್ಲಿ ದಲಿತ ಸಮುದಾಯ ಕಾಂಗ್ರೆಸ್ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಲಿದೆ ಎಂದು ದಲಿತರ ನಿಯೋಗ ಕೆಪಿಸಿಸಿ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟಿತು. ಕೆಪಿಸಿಸಿ ಅಧ್ಯಕ್ಷರು ನಿಯೋಗದ ಜೊತೆಗೆ ಸಕರಾತ್ಮಕವಾಗಿ ಸ್ಪಂದಿಸಿತು ಎಂದು ಮಾಹಿತಿ ಮೂಲಗಳು ತಿಳಿಸಿವೆ.

ಉಡುಪಿ: ಇಲ್ಲಿನ ಪ್ರತಿಷ್ಟಿತ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದ ವಿಶ್ವ ವಲ್ಲಭ ತೀರ್ಥ ಸ್ವಾಮೀಜಿಯವರ ಪೂರ್ವಾಶ್ರಮದ ಅಪ್ರಾಪ್ತ ಪ್ರಾಯದ ಸಹೋದರ ತ್ರಿವಿಕ್ರಮ ತಂತ್ರಿ (17) ಸಾವಿಗೆ ಮಾರಣಾಂತಿಕ ಹಲ್ಲೆಯೇ ಕಾರಣವೆಂದು ಶಂಕಿಸಲಾಗಿದೆ. ಉಡುಪಿ ರಥಬೀದಿ ಪಕ್ಕದಲ್ಲೇ ಇರುವ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದ ತ್ರಿವಿಕ್ರಮ, ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಐದು ವಿಭಾಗಗಳಲ್ಲಿ ಅನುತ್ತೀರ್ಣನಾಗಿದ್ದ. ಈ ಫಲಿತಾಂಶದಿಂದ ಸಿಟ್ಟುಗೊಂಡವರು ಎ.9 ರಂದು ರಾತ್ರಿ ತ್ರಿವಿಕ್ರಮನನ್ನು ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಮಾರಣಾಂತಿಕ ಹಲ್ಲೆ ನಡೆಸಿದರೆಂದು ಸಂಶಯ ವ್ಯಕ್ತಪಡಿಸಲಾಗಿದೆ.
ಹಲ್ಲೆ ನಡೆಸುತ್ತಿರುವಾಗ ತಮ್ಮ ನೋವಿನಿಂದ ಬೊಬ್ಬೆ ಹೊಡೆಯುತಿದ್ದನೆಂದು, ಬಳಿಕ ಯಾರೋ ಒಂದಿಬ್ಬರು ವ್ಯಕ್ತಿಗಳು ಮಧ್ಯ ಪ್ರವೇಶ ಮಾಡಿ ತಡೆದರೆಂದು ಹೇಳಲಾಗಿದೆ. ಕಾಲಿನಿಂದ ತುಳಿಯುತ್ತಿರುವಾಗ ಅಕಸ್ಮಾತ್ತಾಗಿ ಒಂದು ಪೆಟ್ಟು ತ್ರಿವಿಕ್ರಮನ ಕಿಡ್ನಿಗೆ ಬಿತ್ತೆಂದೂ, ಇದರ ಪರಿಣಾಮವಾಗಿ ತ್ರಿವಿಕ್ರಮ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದನೆಂದೂ ಹೇಳಲಾಗಿದೆ.
ಮಾರಣಾಂತಿಕವಾಗಿ ಗಾಯಗೊಂಡಿದ್ದ ತ್ರಿವಿಕ್ರಮನನ್ನು ರಾತ್ರಿಯೇ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪ್ರಯೋಜನವಾಗಲಿಲ್ಲ. ತ್ರಿವಿಕ್ರಮ ಅಷ್ಟರಲ್ಲಿಯೇ ಮೃತಪಟ್ಟಿದ್ದನೆನ್ನಲಾಗಿದೆ. ಬಳಿಕ ಆಸ್ಪತ್ರೆ ಅಧಿಕೃತರಿಗೆ ಪ್ರಭಾವ ಬೀರಿ ತ್ರಿವಿಕ್ರಮನಿಗೆ ಜಾಂಡೀಸ್ ಎಂದು ನಕಲಿ ದಾಖಲಾತಿಗಳನ್ನು ತಯಾರಿಸಲಾಯಿತು ಎಂದು ತಿಳಿದುಬಂದಿದೆ.
ಕಾನೂನು ಪ್ರಕ್ರೀಯೆಯಲ್ಲಿ ಇದೊಂದು ಕೊಲೆ ಕೃತ್ಯವಾಗಿದ್ದು, ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಪೊಲೀಸರಿಗೆ ಮಾಹಿತಿ ನೀಡದೆ, ಮರಣೋತ್ತರ ಪರೀಕ್ಷೆಯನ್ನೂ ನಡೆಸದೆ, ಮರುದಿನ ಬೆಳಕು ಹರಿಯುವ ಮೊದಲೇ ಅಂತ್ಯ ಸಂಸ್ಕಾರ ನಡೆಸಲಾಯಿತು ಎಂದು ಹೆಸರು ತಿಳಿಸಲಿಚ್ಚಿಸದ ಮಾಹಿತಿ ಮೂಲಗಳು ತಿಳಿಸಿವೆ.
ತ್ರಿವಿಕ್ರಮ ಎಸ್ಎಸ್ಎಲ್ಸಿಯಲ್ಲಿ 56 ಶೇಕಡಾ ಅಂಕಗಳನ್ನಷ್ಟೇ ಪಡೆದಿದ್ದ. ಆದರೂ ಮನೆಯವರು ಈತನನ್ನು ಮ್ಯಾನೇಜ್ಮೆಂಟ್ ಕೋಟಾದಲ್ಲಿ ವಿದ್ಯೋದಯ ಪಿಯು ಕಾಲೇಜಿಗೆ ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದರು ಎಂದು ತಿಳಿದುಬಂದಿದೆ.
ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ತ್ರಿವಿಕ್ರಮ ಸಹಿತ ಐವರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಐದು ವಿಭಾಗಗಳಲ್ಲಿ ಅನುತ್ತೀರ್ಣನಾಗಿದ್ದರೂ ತ್ರಿವಿಕ್ರಮ ನೊಂದುಕೊಳ್ಳದೆ ಎಂದಿನಂತೆ ಲವಲವಿಕೆಯಿಂದಲೇ ಇದ್ದ. ಇತರ ವಿದ್ಯಾರ್ಥಿಗಳೊಂದಿಗೆ ಸಹಜವಾಗಿ ಬೆರೆಯುತ್ತಿದ್ದ. ಸ್ನೇಹಜೀವಿ ವ್ಯಕ್ತಿತ್ವದ ತ್ರಿವಿಕ್ರಮ, ಪಠ್ಯೇತರ ಕಲಾ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ಎಂದು ತ್ರಿವಿಕ್ರಮನನ್ನು ಹತ್ತಿರದಿಂದ ಬಲ್ಲ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಪಾಡಿಗಾರು ಶ್ರೀನಿವಾಸ ತಂತ್ರಿಗಳಿಗೆ ಮೂವರು ಮಕ್ಕಳು. ಮಾದ್ವೇಶ, ವಿಶ್ವ ವಲ್ಲಭ ಹಾಗೂ ತ್ರಿವಿಕ್ರಮ. ಇವರಲ್ಲಿ ಮಾಧ್ವೇಶ ದತ್ತು ಪುತ್ರನಾಗಿದ್ದಾನೆ.
ಶತ್ರು ಸಂಹಾರ ಯಾಗ ?: ಸರ್ವ ಸಂಗ ಪರಿತ್ಯಾಗಿಗಳಾದ ಸನ್ಯಾಸಿಗಳಿಗೆ ಶತ್ರಯಗಳಿಲ್ಲ, ಇರಬಾರದು. ಆದರೆ, ವಿಶ್ವ ವಲ್ಲಭ ತೀರ್ಥ ಸ್ವಾಮೀಜಿ ಇತ್ತೀಚೆಗೆ ಶತ್ರು ಸಂಹಾರ ಯಾಗ ಮಾಡಿಸಲು ಮುಂದಾಗಿದ್ದರು ಎಂದು ಹೇಳಲಾಗಿದೆ.

ಉಡುಪಿ: ಕಲ್ಯಾಣಪುರ ಸಮೀಪದ ನೇಜಾರು ಬಳಿ ಇಕ್ಬಾಲ್ ಎಂಬಾತನಿಗೆ 20 ಕ್ಕೂ ಅಧಿಕ ಮಂದಿ ಇದ್ದ ಸಂಘ ಪರಿವಾರದ ಕಾರ್ಯಕರ್ತರ ತಂಡವೊಂದು ಎ.2 ರಂದು ರಾತ್ರಿ ಗಂಟೆ 11.30 ರ ಸುಮಾರಿಗೆ ಹಲ್ಲೆ ನಡೆಸಿದ್ದು, ಪೊಲೀಸರು ಲಘು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು. ಇದೇ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಕೆಲವರು ನೇಜಾರು ಪರಿಸರದಲ್ಲಿನ ಜಾಮೀಯ ಮಸೀದಿಗೆ ಕಲ್ಲೆಸೆದು ಹಾನಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಮಕಿತರನ್ನು ಮಲ್ಪೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಿರ್ಧಿಷ್ಟ ಕಾರಣವೊಂದಕ್ಕೆ ಸಂಬಂಧಪಟ್ಟಂತೆ ಪ್ರತಿಕರವಾಗಿ ಸಂಘ ಪರಿವಾರದ 20 ರಿಂದ 25 ಮಂದಿಯಷ್ಟಿದ್ದ ಕಾರ್ಯಕರ್ತರು ಸಮಾನ ಉದ್ಧೇಶದಿಂದ ಅಕ್ರಮ ಕೂಟ ಸೇರಿಕೊಂಡು ಮೊದಲಿಗೆ ಇಕ್ಬಾಲ್ ಎಂಬಾತನ ಮೇಲೆ ದಾಳಿ ನಡೆಸಿದರು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸುವಲ್ಲಿ
ಯಶಸ್ವಿಯಾದರೆನ್ನಲಾಗಿದೆ.
ಇಲ್ಲಿಂದ ಚದುರಿ ಹೋದ ಕಾರ್ಯಕರ್ತರಲ್ಲಿ ಕೆಲವರು ಬೈಕ್ನಲ್ಲಿ ಮಸೀದಿ ಬಳಿ ಬಂದು ಕಲ್ಲೆಸೆದು ಕಿಟಿಕಿ ಗಾಜುಗಳನ್ನು ಹಾನಿ ಮಾಡಿದರೆನ್ನಲಾಗಿದೆ. ಈ ಸಂದರ್ಭದಲ್ಲಿ ಮಸೀದಿಯೊಳಗೆ ಮೂವರು ಧರ್ಮಗುರುಗಳು ಇದ್ದರೆನ್ನಲಾಗಿದೆ. ಒಳಗಿದ್ದ ಧರ್ಮಗುರುಗಳು ಮಸೀದಿಗೆ ಕಲ್ಲು ಬೀಳುತ್ತಿರುವ ಶಬ್ದ ಕೇಳಿ ಹೊರಗಡ ಬಂದಾಗ ದುಷ್ಕರ್ಮಿಗಳು ಸ್ಥಳದಿಂದ ಬೈಕ್ನಲ್ಲಿ ಪರಾರಿಯಾದರು ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಠಾಣೆಯ ಪೊಲೀಸರು ಸ್ಥಳೀಯ ಜನಪ್ರತಿನಿಧಿಯೋರ್ವನ ಸಹಿತ ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ಉಡುಪಿ: ನಾಡಿನ ಪ್ರಸಿದ್ಧ ಮಠಾಧಿಪತಿಯೊಬ್ಬರ ಬಗ್ಗೆಯೂ ಕೆಲವು ಸಮಯದ ಹಿಂದೆ ಸಿಡಿಯೊಂದು ತಯಾರಾಗಿತ್ತು. ಅದು ಮೊದಲೇ ಗೊತ್ತಾಯಿತು. ಈಗ ಸಿಡಿ ತಯಾರು ಮಾಡಿದವರು ಜೈಲಲ್ಲಿದ್ದಾರೆ. ಉಡುಪಿಯ ಸಿಡಿ ಪ್ರಕರಣ ನಂಬಲಸಾಧ್ಯ. ಸತ್ಯಾ ಸತ್ಯ ಪರಿಶೀಲನೆ ಮಾಡದೆ, ತನಿಖೆಯಾಗದೆ ಇದನ್ನು ಯಾರೂ ಒಪ್ಪಿಕೊಳ್ಳಲಾಗದು, ಒಪ್ಪಿಕೊಳ್ಳಬಾರದು ವಿಕೃತ ಸಿಡಿ ತಯಾರಿಸಿ ವ್ಯಕ್ತಿತ್ವವನ್ನು ತೇಜೋವಧೆ ಮಾಡಬಾರದು. ಇದು ಖಂಡನಾರ್ಹ. ಸಿಡಿ ಪ್ರಕರಣದ ಬಗ್ಗೆ ತನಿಖೆಯಾಗಿ, ಇದನ್ನು ತಯಾರು ಮಾಡಿದ ತಪ್ಪಿತಸ್ಥರಿಗೆ
ಶಿಕ್ಷೆಯಾಗಬೇಕು ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು. ಉಡುಪಿಯ ಪ್ರಜಾಪ್ರಭುತ್ವ ಸಂರಕ್ಷಣಾ ವೇದಿಕೆಯು ಎ.2 ರಂದು ಸಂಜೆ ಚಿತ್ತರಂಜನ್ ಸರ್ಕಲಲ್ಲಿ ಆಯೋಜಸಿದ ‘ಪ್ರಜಾಪ್ರಭುತ್ವದ ಮಾನ ಉಳಿಸಿ ಬೃಹತ್ ನಾಗರಿಕ ಸಮಾವೇಶ’ ದಲ್ಲಿ ಸ್ವಾಮೀಜಿ ಮಾತನಾಡುತ್ತಿದ್ದರು.
ಮೊಬೈಲ್, ಟಿವಿ, ಸಿಡಿ ಮೊದಲಾದ ವಿಜ್ಞಾನ-ತಂತ್ರಜ್ಞಾನದ ಸಾಧನಗಳನ್ನು
ದುರುಪಯೋಗಪಡಿಸಲಾಗುತ್ತಿದೆ. ಸಂಸ್ಕೃತಿಗೆ ವಿರುದ್ಧವಾಗಿ ವಿಕೃತಿ ಮತ್ತು
ಅನಿಷ್ಟಗಳನ್ನು ಬೆಳೆಸಲಾಗುತ್ತಿದೆ. ಇಂಥದ್ದಕ್ಕೆಲ್ಲಾ ಕಡಿವಾಣ ಹಾಕಬೇಕೆಂದು ಪೇಜಾವರ ಸ್ವಾಮೀಜಿ ತಿಳಿಸಿದರು.
ಸಮಾವೇಶದಲ್ಲಿ ಮಾತನಾಡಿದ ಹೊಸ್ಮಾರಿನ ವಿಖ್ಯಾತನಂದ ಸ್ವಾಮೀಜಿಯವರು,
ಸ್ವಾರ್ಥಕ್ಕಾಗಿ, ಯಾವುದಾದರೊಮದು ನೆಪ ಮುಂದಿಟ್ಟು ವ್ಯಕ್ತಿಯ ತೇಜೋವಧೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಚುನಾವಣಾ ರಾಜಕೀಯ ಅರಾಜಕತೆಯತ್ತ ಸಾಗುತ್ತಿದೆ. ಪ್ರಜಾಪ್ರಭುತ್ವ ಮತ್ತು ಚುನಾವಣಾ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಂಡವರು ಸಿಡಿ ಕೃತ್ಯ ನಡೆಸಿದ್ದಾರೆಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದರು. ರಘುಪತಿ ಭಟ್ಟರಿಗೆ ನೈತಿಕ ಬೆಂಬಲ ಘೋಷಿಸಿದ ಕಸಾಪ ಮಾಜಿ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನರೂರು, ಸಿಡಿ ಪ್ರಕರಣದ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಮಾನಹಾನಿ ಮಾಡುವುದು ಎಷ್ಟು ಮಾತ್ರಕ್ಕೂ ಸಲ್ಲದು, ಖಂಡನೀಯ. ತನಗೂ, ಈ ಸಿಡಿಗೂ ಯಾವುದೇ ಸಂಬಂಧ ಇಲ್ಲವೆಂದು ಘೋಷಿಸುವ ಮೌಲಿಕ, ಪ್ರಮಾಣಿಕ ರಾಜಕಾರಣವನ್ನೂ ವಿರೋಧ ಪಕ್ಷಗಳು ಮಾಡಿಲ್ಲ. ಗೆಲ್ಲೋದಕ್ಕಾಗಿ ಏನೂ ಮಾಡಲು ಇವರು ಹೇಸರು ಎಂಬುದಕ್ಕೆ ಇದುವೇ ಸಾಕ್ಷಿ ಎಮದು ಸಾಮಾಜಿಕ ಕಾರ್ಯಕರ್ತರಾದ ಜ್ಞಾನ ವಸಂತ ಶೆಟ್ಟಿ ಹೇಳಿದರು. ಹೀನಾಯವಾದ ರಾಜಕೀಯ ನಡೆಸಿ ಗೆದ್ದರೆ, ಹೀಗೆ ಗೆದ್ದವರನ್ನು ನಮ್ಮ ಜನಪ್ರತಿನಿಧಿ ಎಂದು ಒಪ್ಪಲು ಸಾಧ್ಯವೇ ಇಲ್ಲವೆಂದು ಅವರು ಸ್ಪಷ್ಟಪಡಿಸಿದರು. ಶಾಸಕ ರಘುಪತಿ ಭಟ್ಟರನ್ನು ಪ್ರಜಾತಾಂತ್ರಿಕವಾಗಿ ಎದುರಿಸಲಾಗದವರು ತೇಜೋವಧೆ ಮಾಡುವಂಥ ಹೀನಾಯ ತಂತ್ರವನ್ನು ನಡೆಸಿದ್ದಾರೆ. ಈ ಹಿಂದೆಯೂ ರಘುಪತಿ ಭಟ್ಟರಿಗೆ ಸಂಬಂಧಿಸಿದಂತೆ ಎರಡು ಮೂರು ಬಾರಿ ನೋವಿನ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವ ಕೆಲಸವನ್ನು
ಮಾಡಿದ್ದಾರೆ. ಇದು ಪ್ರಜಾತಂತ್ರದ ಸಮಾಧಿ. ಇದು ನಾಗರಿಕ ಸಮಾಜಕ್ಕೆ ಮಾಡಿದ ಅವಮಾನ ಎಂದು ಪ್ರಜಾಪ್ರಭುತ್ವ ಸಂರಕ್ಷಣಾ ವೇದಿಕೆಯ ವಾಸುದೇವ ಭಟ್ ಹೇಳಿದರು.
ಸಿಡಿ ತಂತ್ರಗಾರಿಕೆಯನ್ನೇ ಮುಂದುವರಿಸಿದರೆ ಪತ್ರಿಕೆಗಳಲ್ಲಿ ಸಿಡಿ ಪ್ರಕರಣಗಳ ವರದಿಗಳೇ ತುಂಬುವ ಸ್ಥಿತಿ ಉಂಟಾಗಬಹುದು. ಟಿವಿಗಳಲ್ಲಿ ಇದನ್ನೇ ದಿನವಿಡೀ ಪ್ರಸಾರ ಮಾಡುವ ಪರಿಸ್ಥಿತಿ ಸೃಷ್ಟಿಯಾಗಬಹುದು. ಇದೆಲ್ಲಾ ಬೇಕಿತ್ತಾ ಎಂದು ವಾಸುದೇವ ಭಟ್ ಪ್ರಶ್ನಿಸಿದರು.
ಒತ್ತಡದಿಂದಾಗಿ ಭಾಗವಹಿಸದ ಕ್ರೈಸ್ತ ಧರ್ಮಗುರುಗಳು: ಸಮಾವೇಶಕ್ಕೆ ಎಂಟು ಮಂದಿ ಕ್ರೈಸ್ತ ಧರ್ಮಗುರುಗಳನ್ನು ಆಹ್ವಾನಿಸಲಾಗಿತ್ತು. ಸೋಮವಾರ ಸಂಜೆವರೆಗೂ ಅವರು ಭಾಗವಹಿಸುವುದು ಎಂದೇ ಇತ್ತು. ಬಳಿಕ ಕರೆ ಮಾಡಿದ ಧರ್ಮಗುರುಗಳು, ಸಮಾವೇಶದಲ್ಲಿ ಭಾಗವಹಿಸದಂತೆ ತಮ್ಮ ಮೇಲೆ ಭಾರೀ ಒತ್ತಡ ಬರುತ್ತಿದೆ. ಕ್ಷಮಿಸಬೇಕು, ನಮಗೆ ಸಮಾವೇಶಕ್ಕೆ ಬರಲಾಗುತ್ತಿಲ್ಲ ಎಂದು ಹೇಳಿ ಕ್ಷಮೆಯಾಚಿಸಿದರು. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಸಮಾವೇಶ ಸಂಘಟಕರದ ವಾಸುದೇವ ಭಟ್ ಬಹಿರಂಗಪಡಿಸಿದರು. ಬಾಲಾಜಿ ರಾಘವೇಂದ್ರ ಆಚಾರ್ಯ, ಗೋಕುಲದಾಸ್, ರಬೀಂದ್ರ ನಾಯಕ್, ಬಾಲಕೃಷ್ಣ ಹೆಗ್ಡೆ, ದೇವದಾಸ್, ಹಿರಿಯಣ್ಣ, ರಾಮ ಕಾಂಚನ್, ರಂಜನ್ ಕಲ್ಕೂರ ಮೊದಲಾದವರು ಸಮಾವೇಶದಲ್ಲಿ ಉಪಸ್ಥಿತರಿದ್ದರು.

ಉಡುಪಿ: ಐದರ ಹರೆಯದ ಮಗನನ್ನು ಕಳೆದ 37 ದಿನಗಳ ಹಿಂದೆ ಅಪಹರಣ ಮಾಡಿ
ದಿಗ್ಭಂಧನದಲ್ಲಿರಿಸಿದ ಪ್ರಕರಣದ ಆರೋಪಿ ಪಣಿಯಾಡಿ ಯಮುನಾ ನಿಲಯದ ನಿವಾಸಿ, ಟ್ಯಾಕ್ಸಿ ಚಾಲಕ ಸುರೇಶ್ ನಾಯ್ಕನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಉಡುಪಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು, ಅಪ್ರಾಪ್ತ ಪ್ರಾಯದ ಬಾಲಕನ ಅಭಿಪ್ರಾಯದಂತೆ ಅತನನ್ನು ತಂದೆಯ ತಮ್ಮನೊಂದಿಗೆ ಕಳುಹಿಸಿಕೊಟ್ಟಿರುವ ವಿದ್ಯಾಮಾನ ಇಂದು ಸಂಜೆ ನಡೆದಿದೆ. ಈ ತೀರ್ಪಿನಿಂದಾಗಿ ತಾಯಿ ಸಂಗೀತಾಳ ರೋಧನ ಮುಗಿಲು ಮುಟ್ಟಿದೆ. ಉಡುಪಿ ನಗರ ಠಾಣೆಯ ಪೊಲೀಸರು ಸುರೇಶ್ ನಾಯ್ಕನನ್ನು ಶುಕ್ರವಾರ ಬೆಳಗ್ಗೆ
ಬಂಧಿಸಿದ್ದರು. ಸುರೇಶ್ ನಾಯ್ಕ ಕಳೆದ 37 ದಿನಗಳಿಂದ ದಿಗ್ಭಂದನದಲ್ಲಿರಿಸಿದ್ದ ಐದರ ಹರೆಯದ ಬಾಲಕನನ್ನೂ ವಶಕ್ಕೆ ಪಡೆದುಕೊಂಡಿದ್ದರು. ಸಂಜೆ ಉಡುಪಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಧೀಶರು ತಂದೆ ಸುರೇಶ್ ನಾಯ್ಕ ಹಾಗೂ ತಾಯಿ ಸಂಗೀತಾಳ ಸಮಕ್ಷಮ ಮಗನಲ್ಲಿ ಯಾರ ಜೊತೆ ಹೋಗುವುದಾಗಿ ಕೇಳಿದಾಗ ಮಗು ತಂದೆ ಜೊತೆ ಹೋಗುವುದಾಗಿ ಹೇಳಿದ್ದಾನೆ. ಬಳಿಕ ನ್ಯಾಯಾಧೀಶರು, ತಂದೆಯನ್ನು ಜೈಲಿಗೆ ಹಾಕುವುದಾಗಿ ತಿಳಿಸಿ, ಯಾರ ಜೊತೆ ಹೋಗುವುದಾಗಿ ಮತ್ತೆ ಪ್ರಶ್ನಿಸಿದಾಗ, ಮಗು ಚಿಕ್ಕಪ್ಪನ ಜೊತೆ ಹೋಗುವುದಾಗಿ ಉತ್ತರಿಸಿದ್ದಾನೆ. ಕಳೆದ 37 ದಿನಗಳಿಂದ ತಂದೆಯ ದಿಗ್ಭಂದನದಲ್ಲಿದ್ದ ಮಗನ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ನ್ಯಾಯಾಧೀಶರು, ಮಗನನ್ನು ತಂದೆಯ ತಮ್ಮನಿಗೆ ಒಪ್ಪಿಸಿ ಆದೇಶ ನೀಡಿದ್ದಾರೆ. 2012 ರ ಡಿಸೆಂಬರ್ 11 ರಂದು ಸಂಜೆ ಸುರೇಶ್ ನಾಯ್ಕ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದ. ಗಂಡನ ದೌರ್ಜನ್ಯದಿಂದಾಗಿ ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಗೀತಾ ನೀಡಿದ ಹೇಳಿಕೆಯ ಪ್ರಕಾರ, ಸುರೇಶ್ ನಾಯ್ಕ ಹಾಗೂ ಈತನ ತಾಯಿ ಶ್ರೀಮತಿ ಪ್ರೇಮಾ ಎಂಬವರ ವಿರುದ್ಧ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದರು. ಡಿ.12 ರಂದು ಸುರೇಶ್ ನಾಯ್ಕ ಹಾಗೂ ಪ್ರೇಮಾರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು ಆರೋಪಿಗಳಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದರು. ಡಿ.12 ರಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭದಲ್ಲಿ ತಾಯಿ ಸಂಗೀತಾ, ತನ್ನ ಮಗನನ್ನು ಗಂಡ ತನ್ನ ಮೇಲೆ ಹಲ್ಲೆ ನಡೆಸುತ್ತಿರುವಾಗ ಗಂಡನ ಮಿತ್ರ ಸಲೀಂ ಎಂಬಾತ ಬಲವಂತವಾಗಿ ಮನೆಯಿಂದ ಕರೆದೊಯ್ದಿದ್ದಾನೆ ಎಂಬುದಾಗಿ ನೀಡಿದ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳದೆ ಸಂಗೀತಾಳಿಗೆ ಅನ್ಯಾಯ ಮಾಡಿದ್ದರು. ಬಳಿಕ ಮಧ್ಯ ಪ್ರವೇಶ ಮಾಡಿದ ಸಾಂತ್ವನ ಮಹಿಳಾ ಸಹಾಯವಾಣಿಯ ಅಧಿಕೃತರು, ಸಂಗೀತಾಳ ಹೇಳಿಕೆಯನ್ನು ದಾಖಲಿಸಿ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಗೆ ದೂರು ನೀಡಿದ್ದರು.
ಮಕ್ಕಳ ಕಲ್ಯಾಣ ಸಮಿತಿಯು ಡಿ.22 ರಂದು ಸುರೇಶ್ ನಾಯ್ಕನಿಗೆ ಸಮನ್ಸ್ ಹೊರಡಿಸಿ, ಡಿ.29 ರಂದು ಮಗುವನ್ನು ಸಮಿತಿ ಮುಂದೆ ಹಾಜರುಪಡಿಸುವಂತೆ ಆದೇಶಿಸಿದ್ದರು. ಸುರೇಶ್ ಈ ಆದೇಶವನ್ನು ಕಡೆಗಣಿಸಿದ ಕಾರಣ, ಡಿ.29 ರಂದು ಸಮಿತಿಯು ಬಾಲಕನ ಸಹಿತ ಸುರೇಶ್ ನಾಯ್ಕನನ್ನು 2013 ರ ಜ. 5 ರಂದು ಸಮಿತಿ ಮುಂದೆ ಹಾಜರುಪಡಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಬಾಡಿ ವಾರೆಂಟ್ ಹೊರಡಿಸಿದ್ದರು.
ಈ ನಡುವೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ ಅವರು ತಾಯಿ ಸಮಗೀತಾ ಹಾಗೂ ಅಪ್ರಾಪ್ತ ಪ್ರಾಯದ ಮಗುವಿನ ಪರವಾಗಿ ಮಧ್ಯಪ್ರವೇಶ ಮಾಡಿ ಪೊಲೀಸರಿಗೆ ಬಿಸಿ ಮುಟ್ಟಿಸಿದ ಹಿನ್ನೆಲೆಯಲ್ಲಿ, ಜ.2 ರಂದು ಉಡುಪಿ ನಗರ ಠಾಣೆಯ ಪೊಲೀಸರು ಸುರೇಶ್ ನಾಯ್ಕ ಹಾಗೂ ಸಲೀಂ ವಿರುದ್ಧ ಅಪಹರಣ ಪ್ರಕರಣ
ದಾಖಲಿಸಿಕೊಂಡಿದ್ದರು. ಸಲೀಂನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು ಆರೋಪಿ ಸಲೀಂಗೆ ಜಾಮೀನು ನೀಡಿ
ಆದೇಶಿಸಿದ್ದರು.
ಸಿಡಬ್ಲ್ಯುಸಿ ಬಾಡಿ ವಾರೆಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡ ಕಾರಣ ಸ್ವತಹ ಪೊಲೀಸರೇ ಆರೋಪಿ ಸುರೇಶನನ್ನು ಹುಡುಕಾಡಿದ್ದರು ಮತ್ತು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದರು. ಸುರೇಶ್ ತನ್ನ ಮನೆಗೆ ಬೀಗ ಹಾಕಿದ್ದು, ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ಹೇಳಿಕೊಂಡಿದ್ದರು. ಇದೀಗ ಶುಕ್ರವಾರ ಬೆಳಗ್ಗೆ ಆರೋಪಿ ಸುರೇಶನನ್ನು ಬಂಧಿಸಿರುವ ಪೊಲೀಸರು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು ಸುರೇಶನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಕಳೆದ 37 ದಿನಗಳಿಂದ ಆರೋಪಿಯ ದಿಗ್ಭಂದನದಲ್ಲಿದ್ದ ಅಪ್ರಾಪ್ತ ಪ್ರಾಯದ ಬಾಲಕನ ಮಾತಿನಂತೆ ಬಾಲಕನನ್ನು ತಂದೆಯ ತಮ್ಮನೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಬೆಳವಣಿಗೆಯಿಂದ ತಾಯಿ ಸಂಗೀತಾ ದಿಕ್ಕು ತೋಚದವಂತಳಾಗಿದ್ದಾಳೆ. ವರದಿ: ಶ್ರೀರಾಮ ದಿವಾಣ.

ಉಡುಪಿ: ಮಡೆಸ್ನಾನ ಮತ್ತು ಪಂಕ್ತಿಭೇದದ ವಿರುದ್ಧ ಸಿಪಿಐಎಂ ರಾಜ್ಯ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಜನಾಂದೋಲದ ಅಂಗವಾಗಿ ಇಂದು ಸಂಜೆ ಉಡುಪಿ ಶ್ರೀಕೃಷ್ಣ ದೇಗುಲ ಸಮೀಪದ ಎಸ್ಎಂಎಸ್ಪಿ ಕಾಲೇಜು ಪಕ್ಕ ನಡೆದ ಪ್ರತಿಭಟನಾ ಪ್ರದರ್ಶನದ ಮೇಲೆ ಪೊಲೀಸರು ಅಪ್ರಚೋದಿತರಾಗಿ ಲಾಠಿಚಾರ್ಜ್ ಮಾಡಿದ್ದು, ಇದರಿಂದಾಗಿ ನಾಲ್ವರು ಪೊಲೀಸರು ಹಾಗೂ ಹತ್ತಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಪಕ್ಷದ ಮುಖಂಡರ ಸಹಿತ 200 ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಮತ್ತು ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ವರಲಕ್ಷ್ಮಿ , ಎಸ್ಎಫ್ಐ ದ.ಕ.ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಮಿಥುನ್ ರಾಜ್ ಕುತ್ತಾರ್, ಡಿವೈಎಫ್ಐ ಮುಖಂಡರುಗಳಾದ ಮೈಸೂರಿನ ಸೋಮಶೇಖರ್, ದ.ಕ.ಜಿಲ್ಲೆಯ ಕಿನ್ಯಾದ ಹಂಝ, ಬೆಳ್ತಂಗಡಿಯ ಪ್ರಶಾಂತ್, ಮೈಸೂರಿನ ಮೋಹನ್ ಕುಮಾರ್, ಬೆಂಗಳೂರು ಗೋವಿಂದರಾಜ ನಗರದ ಎನ್.ಪ್ರತಾಪ್ ಸಿಂಹ, ಜನವಾದಿ ಮಹಿಳಾ ಸಂಘಟನೆಯ ನಾಯಕಿಯರಾದ ಬೆಳ್ತಂಗಡಿಯ ರೋಹಿಣಿ, ಬೆಳ್ತಂಗಡಿ ತಾಲೂಕು ಪದ್ಮುಂಜದ ಕು.ಈಶ್ವರಿ, ಮಣಿಪಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸದಾನಂದ ತಿಪ್ಪಣ್ಣನವರ್, ಉಡುಪಿ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಅಮಾನುಲ್ಲಾ, ಹೆಬ್ರಿ ಎಎನ್ಎಸ್ ಕಾನ್ಸ್ಟೇಬಲ್ ಯೋಗೀಶ್, ಉಡುಪಿ ನಗರ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಸುಕನ್ಯಾ ಹಾಗೂ ತಾತ್ಕಾಲಿಕ ಪೊಲೀಸ್ ಬಸ್ ಆಗಿ ಕಾರ್ಯನಿರ್ವಹಿಸಿದ ಖಾಸಗಿ ಬಸ್ ಎಕೆಎಂಎಸ್ ಚಾಲಕ ದುರ್ಗಪ್ಪ ಗಾಯಗೊಂಡಿದ್ದಾರೆ. ಗಾಯಾಳಯಗಳ ಪೈಕಿ ವರಲಕ್ಷ್ಮಿ ಅವರು ಗಂಭೀರ ಸ್ಥಿತಿಯಲ್ಲಿದ್ದು, ಇವರನ್ನು
ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ವೈದ್ಯರ ನಿರ್ಲಕ್ಷದಿಂದ ರೋಸಿಹೋದ ಪಕ್ಷದ ನಾಯಕರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಿ ಒಳರೋಗಿಯಾಗಿ ದಾಖಲಿಸಿದರು.
ಮಿಥುನ್ ರಾಜ್, ಸೋಮಶೇಖರ್, ಹಂಝ, ಪ್ರಶಾಂತ್, ಮೋಹನ್ ಕುಮಾರ್, ಪ್ರತಾಪಸಿಂಹ, ರೋಹಿಣಿ ಹಾಗೂ ಈಶ್ವರಿ ಇವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಇವರು
ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ನಿತಿನ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. ಉಳಿದವರೆಲ್ಲರೂ ಸಣ್ಣಪುಟ್ಟ ಗಾಯಕ್ಕೆ ಒಳಗಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸಿಪಿಐಎಂ ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ, ಪಕ್ಷದ ರಾಜ್ಯ ಮುಖಂಡರುಗಳಾದ ಜಿ.ಎನ್.ನಾಗರಾಜ್, ವಿ.ಜೆ.ಕೆ.ನಾಯರ್, ಮಾರುತಿ ಮಾನ್ಪಡೆ, ಬಯ್ಯಾ ರೆಡ್ಡಿ, ನಿತ್ಯಾನಂದ ಸ್ವಾಮಿ, ಬಿ.ಮಾಧವ, ಕೆ.ಆರ್.ಶ್ರೀಯಾನ್, ಎಸ್.ಪ್ರಸನ್ನ ಕುಮಾರ್, ಬಸವರಾಜ್, ಬಿ.ಎಂ.ಭಟ್, ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಕೆ. ಎನ್.ಉಮೇಶ್, ಭರತ್ ರಾಜ್, ಮೂಡಬಿದ್ರೆ ಪುರಸಭೆ ಉಪಾಧ್ಯಕ್ಷೆ ರಮಣಿ, ಮಂಗಳೂರು ಕಾರ್ಪೊರೇಟರ್ ಜಯಂತಿ ಬಿ.ಶೆಟ್ಟಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಸಹಿತ 200 ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂದಿಸಿದ್ದಾರೆ. ಬಂಧಿತರನ್ನು ನಗರದ ಶಾಂತಿ ನಗರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಗೆ ಸೇರಿದ ಚಂದು ಮೈದಾನದಲ್ಲಿ ಇರಿಸಲಾಗಿದೆ. ರಾತ್ರಿ 10 ಗಂಟೆಯಾದರೂ ಇವರನ್ನು ಬಿಡುಗಡೆಗೊಳಿಸಲಾಗಿಲ್ಲ. ಇವರ ವಿರುದ್ಧ ಜಾಮೀನು ರಹಿತ ಕಲಂಗಳಡಿಯಲ್ಲಿ ಮೊಕದ್ದಮೆ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಸಿಪಿಐಎಂ, ಡಿವೈಎಫ್ಐ, ಎಸ್ಎಫ್ಐ, ಜನವಾದಿ ಮಹಿಳಾ ಸಂಘಟನೆ, ಸಿಐಟಿಯು ಮೊದಲಾದ ಸಂಘಟನೆಗಳಿಗೆ ಸೇರಿದ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾ
ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಇವರಲ್ಲಿ ಕೆಲವೇ ಕೆಲವು ಬೆರಳೆಣಿಕೆ ಮಂದಿ ಪೊಲೀಸರು ತಡೆಗೋಡೆಯಾಗಿ ಇರಿಸಿದ್ದ ಬ್ಯಾರಿಕೆಡ್ಗಳನ್ನು ಏರಿದ್ದರು. ಈ ಸ್ಥಳದಲ್ಲಿ 30 ರಷ್ಟು ಪ್ರತಿಭಟನಾಕಾರರಷ್ಟೇ ಇದ್ದರು. ಪೊಲೀಸ್ ಅಧಿಕಾರಿಗಳು ಪ್ರಬುದ್ಧತೆ ಮತ್ತು ಪಕ್ವತೆಯಿಂದ ನಡೆದುಕೊಳ್ಳುತ್ತಿದ್ದರೆ ಇವರನ್ನು ಹಿಡಿದು ಬಸ್ನೊಳಗಡೆ ಎತ್ತಿಕೊಂಡು ಹೋಗಿ ಹಾಕುವುದು ದೊಡ್ಡ ಕೆಲಸವೇನೂ ಆಗಿರಲಿಲ್ಲ. ಆದರೆ ಇಷ್ಟಕ್ಕೇ ವಿಚಲಿತರಾದ ಉಡುಪಿ ನಗರ ಸರ್ಕಲ್ ಇನ್ಸ್ಪೆಕ್ಟರ್ ಮಾರುತಿ ನಾಯಕ್ ಹಾಗೂ ಇತರ ಕೆಲವು ಮಂದಿ ಪೊಲೀಸರು ವಿನಾ ಕಾರಣ ದುಡುಕುವ ಮೂಲಕ ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದರು. ಇದರಿಂದಾಗಿ ಸ್ಥಳದಲ್ಲಿ ಸ್ವಲ್ಪ ಕಾಲ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಯಿತು.
ಪ್ರತಿಭಟನೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇವರಲ್ಲಿ ಹೆಚ್ಚಿನವರೂ ಸ್ಥಳದಿಂದ ಚದುರಿಹೋದರು. ಬ್ಯಾರಿಕೇಡ್ ಪಕ್ಕ ಇದ್ದ ಕು.ಈಶ್ವರಿ, ವರಲಕ್ಷ್ಮಿ ಸಹಿತ ಕೆಲವರು ಗಂಭೀರವಾಗಿ ಗಾಯಗೊಂಡರು. ಪೊಲೀಸರೊಂದಿಗೆ ಜನವಾದಿ ಮಹೀಳಾ ಸಂಘಟನೆಯ ನಾಯಕಿ ಲಕ್ಷ್ಮಿ ಸಹಿತ ಕೆಲವು ಮಂದಿ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿದರು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಬಲವಂತವಾಗಿ ಬಂಧಿಸಿ ಬಸ್ನೊಳಗೆ ಕುಳ್ಳಿರಿಸಿದ ಬಳಿಕವೂ ಕೆಲವು ಮಂದಿ ಪೊಲೀಸರು ಹರಗಡೆಯಿಂದ ಬಸ್ ನೊಳಗಿದ್ದ ಪ್ರತಿಭಟನಾಕಾರರ ವಿರುದ್ಧ ಲಾಠಿ ಬೀಸಿ ಅತಿರೇಕದಿಂದ ವತರ್ಿಸಿದ್ದೂ ಹಲವರ ಆಕ್ರೋಶಕ್ಕೆ ಕಾರಣವಾಯಿತು.
ಲಾಠಿಚಾರ್ಜ್ ನಡೆದ ಸ್ಥಳದಿಂದ ಪ್ರತಿಭಟನಾಕಾರರು ಚದುರಿದ ಬಳಿಕ ಕುಂದಾಪುರ ಉಪ ವಿಭಾಗದ ಸಹಾಯಕ ಕಮಿಷನರ್ ಸದಾಶಿವ ಪ್ರಭು ಘಟನಾ ಸ್ಥಳಕ್ಕೆ ಭೇಟಿ ನೀಡಿ
ವೀಕ್ಷಿಸಿದರಲ್ಲದೆ, ಇನ್ ಚಾರ್ಜ್ ತಹಶಿಲ್ದಾರ್ ಜಗನ್ನಾಥ ರಾವ್ ಹಾಗೂ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಉಡುಪಿ ಡಿವೈಎಸ್ಪಿ ಡಾ.ಪ್ರಭುದೇವ ಬಿ.ಮಾಣೆ, ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ಮಾರುತಿ ನಾಯಕ್, ಸದಾನಂದ ತಿಪ್ಪಣ್ಣನವರ್, ಪ್ರವೀಣ್ ಎಚ್.ನಾಯಕ್ ಮೊದಲಾದರು ಬಂದೋಬಸ್ತ್ ಹೊಣೆ ಹೊತ್ತುಕೊಂಡಿದ್ದರು.
ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವ ಮೊದಲು ಅಜ್ಜರಕಾಡಿನಲ್ಲಿ ಬಹಿರಂಗ ಸಭೆ ನಡೆಸಿದ ಪ್ರತಿಭಟನಾಕಾರರು, ಬಳಿಕ ಹಳೆ ತಾಲೂಕು ಕಚೇರಿ, ಕೋರ್ಟ್ ರಸ್ತೆ, ಕವಿ ಮುದ್ದಣ ಮಾರ್ಗವಾಗಿ ಕೃಷ್ಣ ಮಠಕ್ಕೆ ಹೋಗುವ ಕನಕದಾಸ ರಸ್ತೆ ವರೆಗೆ ಪಂಕ್ತಿಭೇದ ಮತ್ತು ಮಡೆಸ್ನಾದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ಚಿತ್ರಗಳು: ಶ್ರೀರಾಮ ದಿವಾಣ.

ಉಡುಪಿ: ಮಡೆಸ್ನಾನ ಮತ್ತು ಪಂಕ್ತಿ ಭೇದದ ವಿರುದ್ಧ ಜನಾಂದೋಲನದ ಅಂಗವಾಗಿ ಸಿಪಿಐಎಂ ರಾಜ್ಯ ಸಮಿತಿ ಉಡುಪಿಯಲ್ಲಿ ಇಂದು ಸಂಜೆ ನಡೆಸಿದ ಶ್ರೀಕೃಷ್ಣ ದೇಗುಲಕ್ಕೆ ಮುತ್ತಿಗೆ ಕಾರ್ಯಕ್ರಮದಲ್ಲಿ ಪೊಲೀಸರು ನಡೆಸಿದ ಅಪ್ರಚೊದಿತ ಲಾಠಿಚಾರ್ಜ್ ನಿಂದಾಗಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಮತ್ತು ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ಕಾಮ್ರೇಡ್ ವರಲಕ್ಷ್ಮಿ ಸಹಿತ 10 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ವರಲಕ್ಷ್ಮಿ ಅವರನ್ನು ಗಂಭೀರ ಸ್ಥಿತಿಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ದ.ಕ.ಜಿಲ್ಲಾ ಡಿವೈಎಫ್ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಉಳಿದ ಗಾಯಾಳುಗಳಾದ ಮೈಸೂರಿನ ಡಿವೈಎಫ್ಐ ಮುಖಂಡ ಸೋಮಶೇಖರ್, ಮಹೇಶ್ ಕುಮಾರ್, ಬೆಳ್ತಂಗಡಿ ತಾಲೂಕು ಪದ್ಮುಂಜದ ಕು.ಈಶ್ವರಿ, ಬೆಳ್ತಂಗಡಿಯ ಪ್ರಶಾಂತ್, ರೋಹಿಣಿ, ದ.ಕ.ಜಿಲ್ಲಾ ಎಸ್ಎಫ್ಐ ನಾಯಕ ಮಿಥುನ್ ರಾಜ್ ಕುತ್ತಾರ್, ದ.ಕ.ಜಿಲ್ಲೆ ಕಿನ್ಯಾದ ಹಂಝ ಹಾಗೂ ಬೆಂಗಳೂರು ಗೋವಿಂದರಾಜ ನಗರದ ಎನ್.ಪ್ರತಾಪ ಸಿಂಹ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
ಘಟನೆಯಲ್ಲಿ ಮಣಿಪಾಲ ಇನ್ಸ್ ಪೆಕ್ಟರ್ ಸದಾನಂದ ತಿಪ್ಪಣ್ಣನವರ್, ಹೆಬ್ರಿ ಎಎನ್ಎಸ್ ಕಾನ್ಸ್ಟೇಬಲ್ ಯೋಗೀಶ್, ಉಡುಪಿ ನಗರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಸುಕನ್ಯಾ, ಉಡುಪಿ ಟ್ರಾಫಿಕ್ ಇನ್ಸ್ ಪೆಕ್ಟರ್ ಅಮಾನುಲ್ಲಾ, ಪ್ರತಿಭಟನಾ ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಖಾಸಗಿ ಬಸ್ ನ ಎಕೆಎಂಎಸ್ ಬಸ್ ಚಾಲಕ ದುರ್ಗಪ್ಪ ಹಾಗೂ ನಿರ್ವಾಹಕ ಮುಹಮ್ಮದ್ ಹನೀಫ್ ಇವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.
ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸುವ ಯಾವುದೇ ಗಂಭೀರ ಪರಿಸ್ಥಿತಿಯೂ ಸೃಷ್ಟಿಯಾಗಿರಲಿಲ್ಲ. ಪ್ರತಿಭಟನಾಕಾರರಲ್ಲಿ ಕೆಲವೇ ಕೆಲವೇ ಮಂದಿ ಪೊಲೀಸರು ತಡೆಗೋಡೆಯಾಗಿ ಇರಿಸಿದ್ದ ಬ್ಯಾರಿಕೇಡ್ ಮೇಲೆ ಹತ್ತಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ಉಡುಪಿ ನಗರದ ಪೊಲೀಸ್ ಅಧಿಕಾರಿಯೊಬ್ಬರು ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾಗಿ ಅಪಕ್ವತನ ಪ್ರದರ್ಶಿಸುವ ಮೂಲಕ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದರು. ಇದರಿಂದಾಗಿ ಪ್ರತಿಭಟನಾ ಸ್ಥಳದಲ್ಲಿ ಸಂಘರ್ಷಮಯ ವಾತಾವರಣ ಉಂಟಾಯಿತು.
ಲಾಠಿಚಾರ್ಜ್ ಮೂಲಕ 800 ಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸಿದ ಪೊಲೀಸರು, 200 ಕ್ಕೂ ಅಧಿಕ ಮಂದಿಯನ್ನು ಬಂಧಿಸಿ, ನಗರದ ಶಾಂತಿ ನಗರದ ಬಳಿ ಇರುವ ಡಿಎಆರ್ ಮೈದಾನದಲ್ಲಿ ಇರಿಸಿದ್ದಾರೆ. ಬಂಧಿತರಲ್ಲಿ ಪಕ್ಷದ ರಾಜ್ಯ ಮುಖಂಡರುಗಳಾದ ಜಿ.ವಿ.ಶ್ರೀರಾಮ ರೆಡ್ಡಿ, ಜಿ.ಎನ್.ನಾಗರಾಜ್, ಬಯ್ಯಾ ರೆಡ್ಡಿ, ಬಸವರಾಜ್, ಮಾರುತಿ ಮಾನ್ಪಡೆ, ಕೆ.ಆರ್.ಶ್ರೀಯಾನ್, ಎಸ್.ಪ್ರಸನ್ನ ಕುಮಾರ್, ಬಿ.ಮಾಧವ, ನಿತ್ಯಾನಂದ ಸ್ವಾಮಿ, ವಿ.ಜೆ.ಕೆ.ನಾಯರ್, ಕೆ.ಶಂಕರ್, ಜನವಾದಿ ಮಹಿಳಾ ಸಂಗಟನೆಯ ಲಕ್ಷ್ಮಿ, ಬಿ.ಎಂ.ಭಟ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಮೊದಲಾದವರು ಸೇರಿದ್ದಾರೆ.
ಚಿತ್ರಗಳು: ಶ್ರೀರಾಮ ದಿವಾಣ.

ಉಡುಪಿ: ಉಡುಪಿಯ 20 ಮಂದಿ ಮಂಗಳಮುಖಿಯರಿಗೆ ಮಂಗಳೂರಿನ ಮಂಗಳಮುಖಿಯರ ರಾಣಿ 120 ಜನರ ತಂಡದಿಂದ ಹಿಗ್ಗಾಮುಗ್ಗ ಥಳಿಸಿದ ಪ್ರಕರಣ ಬೊಮ್ಮರಬೆಟ್ಟು ಗ್ರಾಮದ ಪಂಚನಬೆಟ್ಟು ಎಂಬಲ್ಲಿ ಆದಿತ್ಯವಾರ ಮಧ್ಯಾಹ್ನ ಸಂಭವಿಸಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮೂವರು ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಮೈಸೂರಿನ ಕಾವೇರಿ (31), ಉಡುಪಿಯ ಪ್ರಿಯಾ (22) ಹಾಗೂ ಡೈಮಂಡ್ (22) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲದೆ, ಕಾರ್ಕಳದ ಲಾವಣ್ಯ, ಉಡುಪಿಯ ಶಕೀಲಾ, ಕಟಪಾಡಿಯ ಮಾಲಾ ಸಹಿತ ಒಟ್ಟು 20 ಮಂದಿ ಗಾಯಗೊಂಡಿದ್ದಾರೆ. ಮಂಗಳೂರಿನ ಮಂಗಳಮುಖಿಯರ ನಾಯಕಿ ರಾಣಿ ಈ ಹಲ್ಲೆ ಪ್ರಕರಣದ ಸೂತ್ರಧಾರಿಣಿ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ರಾಣಿಯ ಜೊತೆಗೆ, ಬಳ್ಳಾರಿ, ಹುಬ್ಬಳ್ಳಿ, ಗಂಗಾವತಿ, ಆಂದ್ರ ಪ್ರದೇಶ ರಾಜ್ಯದ ಗುಂತಕಲ್, ಅನಂತಪುರ ಮೊದಲಾದೆಡೆಗಳ ಪ್ರಕಾಶ್ ಯಾನೆ ಶ್ರೀನಿಧಿ, ಝರೀನಾ, ಚಂದ್ರಕಲಾ, ಕುಮಾರಿ, ಚಾಂದಿನಿ, ನೇತ್ರಾ, ಸ್ವಪ್ನ, ಇಂತು ಯಾನೆ ಇಂತಿಯಾಝ್, ಖಾಸೀಂ ಬಿ, ಸುರೇಖಾ, ಸಂಧ್ಯಾ, ನಕ್ಷತ್ರಾ, ಶ್ರುತಿ, ರಮ್ಯಾ, ಗೋಪಿ, ಸೂರಿ ಸಹಿತ 120 ಜನರ ತಂಡ ಮೆಣಸಿನ ಪುಡಿ, ಹಾಕಿ ಸ್ಟಿಕ್, ಮರದ ದೊಣ್ಣೆ, ಕಲ್ಲು ಮುಂತಾದವುಗಳಿಂದ ತಮ್ಮ ಮೇಲೆ ಅಟ್ಟಾಡಿಸಿಕೊಂಡು ಹೋಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದಾಗಿ ಗಾಯಾಳುಗಳು ತಿಳಿಸಿದ್ದಾರೆ.
ಗಾಯಾಳುಗಳಾದ ಕಾವೇರಿ, ಪ್ರಿಯಾ ಹಾಗೂ ಡೈಮಂಡ್ ಈ ಹಿಂದೆ ಮಂಗಳೂರಿನ ಮಂಗಳಮುಖಿಯರ ನಾಯಕಿ ರಾಣಿ ಗ್ರೂಪ್ ನಲ್ಲಿದ್ದವರಾಗಿದ್ದಾರೆ. ಇವರು ಪ್ರತಿಯೊಬ್ಬರೂ ತಿಂಗಳಿಗೆ ತಲಾ 15 ಸಾವಿರ ರು. ಗಳಂತೆ ರಾಣಿಗೆ ಮಾಮೂಲಿ ಸಂದಾಯ ಮಡಬೇಕಾಗಿತ್ತು. ಈ ವರ್ಷದಿಂದ ದೀಪಾವಳಿಯ ಸಲುವಾಗಿ ಹೆಚ್ಚುವರಿಯಾಗಿ ಮತ್ತೆ 15 ಸಾವಿರ ಮಾಮೂಲಿ ಕೊಡಬೇಕಾಗಿತ್ತು. ಇದರಿಂದಾಗಿ ನೊಂದ ಮೂವರು ಮಂಗಳಮುಖಿಯರು ಇನ್ನೂ ಕೆಲವರ ಜೊತೆಗೆ ರಾಣಿ ಗ್ರೂಪ್ ತೊರೆದು ಉಡುಪಿಯ ಖಾಜಲ್ ಗ್ರೂಪ್ ಗೆ ಸೇರ್ಪಡೆಯಾಗಿದ್ದರು ಎನ್ನಲಾಗಿದೆ.
ರಾಣಿಯ ಗ್ರೂಪ್ ತೊರೆದು ಖಾಜಲ್ ಗ್ರೂಪ್ ಗೆ ಸೇರಿದ್ದಕ್ಕೆ ಧ್ವೇಷದಿಂದ ರಾಣಿ ತಮ್ಮ ಮೇಲೆ ವಿವಿಧ ಊರುಗಳಿಗೆ ಸೇರಿದ ನೂರಕ್ಕೂ ಅಧಿಕ ಜನರನ್ನು ಸೇರಿಸಿ ಈ ಹಲ್ಲೆ ಕೃತ್ಯ ನಡೆಸಿದ್ದಾರೆ. ಪಂಚನಬೆಟ್ಟುವಿನಲ್ಲಿ ತಾವಿರುವ ಬಡಿಗೆ ಮನೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿ, ಕಾರ್ಯಕ್ರಮಕ್ಕೆಂದು ಹೋದ ಮೇಲೆ ಏಕಾಏಕಿ ಈ ರೀತಿಯಾಗಿ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳುಗಳು ದೂರಿದ್ದಾರೆ.
ಮಂಗಳೂರು ನಗರವನ್ನು ತನ್ನ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿರುವ ರಾಣಿ, ಪಣಂಬೂರು ಬೀಚ್ ಮೊದಲಾದೆಡೆಗಳಲ್ಲಿ ಗಂಡಸರಿಗೆ ಹೆಣ್ಮಕ್ಕಳ ಡ್ರೆಸ್ ತೊಡಿಸಿ ಹಣ ವಸೂಲಿ ಮಾಡುವ ದಂಧೆ ನಡೆಸುತ್ತಿದ್ದಾಳೆ. ಬಳ್ಳಾರಿಯಲ್ಲಿ ಹಣ ವಸೂಲಿ ಮಾಡಿಸಲು ಉಡುಪಿಯಿಂದಲೂ ಏಳು ಮಂದಿ ಗಂಡಸರನ್ನು ಖಾಸಗಿ ಬಸ್ ನಲ್ಲಿ ಕಳಿಸಿಕೊಡುತ್ತಿದ್ದಾಳೆ. ಉಡುಪಿಯಲ್ಲಿ ಬಸ್ ಹತ್ತುವಾಗ ಗಂಡಸರಾಗಿರುವ ಇವರು, ದಾರಿ ಮಧ್ಯೆ ಬಸ್ ನಲ್ಲಿಯೇ ಹೆಣ್ಮಕ್ಕಳ ಡ್ರೆಸ್ ಧರಿಸುತ್ತಾರೆ. ರಾಣಿಗೆ ಇದೀಗ ಇದೊಂದು ದಂಧೆ ಎಂದು ಗಾಯಾಳುಗಳು ಗಂಭೀರ ಆರೋಪ ಮಾಡಿದ್ದಾರೆ.
ಘಟನೆ ನಡೆದ ಬೊಮ್ಮರಬೆಟ್ಟು ಗ್ರಾಮದ ಪಂಚನಬೆಟ್ಟು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದೆ. ಆದಿತ್ಯವಾರ ಮಧ್ಯಾಹ್ನ ಸಾರ್ವಜನಿಕವಾಗಿ ಎಲ್ಲರೆದುರೇ ಅಟ್ಟಾಡಿಸಿಕೊಂಡು ಹೋಗಿ 120 ಜನರ ತಂಡ 20 ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರಾದರೂ, ಹಿರಿಯಡ್ಕ ಠಾಣೆಯ ಪೊಲೀಸರು ಹಲ್ಲೆಕೋರರ ಪಕ್ಷಪಾತಿಗಳಾಗಿ ವರ್ತಿಸಿದ್ದು, ಆರೋಪಿಗಳಿಗೆ ಇಂದ್ರಾಳಿ ರೈಲ್ವೆ ನಿಲ್ದಾಣದಿಂದ ರೈಲಿನಲ್ಲಿ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದೆ ಎಂದೂ ಆರೋಪಿಸಲಾಗಿದೆ.
ಆರೋಪಿಗಳು ರೈಲಿನಲ್ಲಿ ಬಂದು ಇಂದ್ರಾಳಿಯಲ್ಲಿ ಇಳಿದವರು ನಾಲ್ಕೈದು ಬಾಡಿಗೆ ಟ್ಯಾಕ್ಸಿಗಳಲ್ಲಿ ಪಂಚನಬೆಟ್ಟುವಿಗೆ ಬಂದು ಹಲ್ಲೆ ನಡೆಸಿ ಪೊಲೀಸರ ಸಹಾಯದೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆದಿತ್ಯವಾರ ಮಧ್ಯಾಹ್ನ ಪೆಟ್ಟುತಿಂದ ಗಾಯಾಳುಗಳು ಸಂಜೆಯೇ ಆಸ್ಪತ್ರೆಗೆ ಬಂದು ಒಳರೋಗಿಗಳಾಗಿ ದಾಖಲಾಗಿದ್ದರೂ, ಸೋಮವಾರ ರಾತ್ರಿಯವರೆಗೂ ಹಿರಿಯಡ್ಕ ಠಾಣೆಯ ಪೊಲೀಸರು ಆಸ್ಪತ್ರೆಗೆ ಬಂದು ಗಾಯಾಳುಗಳ ಹೇಳಿಕೆ ದಾಖಲಿಸಿ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸುವ ಪ್ರಾಥಮಿಕ ಕರ್ತವ್ಯವನ್ನು ನಿರ್ವಹಿಸದೆ ಕರ್ತವ್ಯ ಲೋಪವೆಸಗಿದ್ದಾರೆ ಎನ್ನಲಾಗಿದೆ.

ಉಡುಪಿ: ನಾಗರೀಕ ಪೊಲೀಸರು ಸಮಾಜದ ಕಟ್ಟಕಡೆಯ ಜನರಿಗೆ ಹಾಗೂ ನೋವು ಅನುಭವಿಸಿದವರಿಗೆ ಮಾನವೀಯ ಅಂಥಃಕರಣದಿಂದ ಸೇವೆ ಸಲ್ಲಿಸಬೇಕು. ಮಾನವೀಯ ಅಂಥಃಕರಣವಿಲ್ಲದ ಸೇವೆ ಸೇವೆಯೇ ಅಲ್ಲ. ಸ್ಥಳೀಯ ಸಂಸ್ಕೃತಿಯನ್ನು ತಿಳಿದುಕೊಂಡು ಸಾರ್ವಜನಿಕ ಸಂವೇದನೆಯೊಂದಿಗೆ ಸಮಾಜಮುಖಿ ಸೇವೆ ಪೊಲೀಸರಿಂದ ಸಮಾಜಕ್ಕೆ ಸಲ್ಲಲಿ ಎಂದು ಬೆಂಗಳೂರಿನ ಪೊಲೀಸ್ ತರಬೇತಿ ವಿಭಾಗದ ಪೊಲೀಸ್ ಮಹಾ ನಿರೀಕ್ಷಕರಾದ ಡಾ.ಎಸ್.ಪರಶಿವಮೂರ್ತಿ ಕರೆ ನೀಡಿದ್ದಾರೆ. ಉಡುಪಿ ಚಂದು ಮೈದಾನದಲ್ಲಿ ಇಂದು ಸಂಜೆ ನಡೆದ ಉಡುಪಿ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ 8 ನೇ ತಂಡದ ನಿರ್ಗಮನ ಪಥ ಸಂಚಲನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ವೃತ್ತಿಯಲ್ಲಿ ತಾವು ಕೆಳ ಹಂತದವರೆಂಬ ಕೀಳರಿಮೆಯಾಗಲಿ, ತಾತ್ಸಾರವಾಗಲಿ ಬೇಡ. ಆತ್ಮ ವಿಶ್ವಾಸದೊಂದಿಗೆ ಕಾನೂನನ್ನು ಜಾರಿಗೊಳಿಸುವ ಕರ್ತವ್ಯವನ್ನು ಪಾಲಿಸಬೇಕು. ಕೂಪಮಂಡೂಕತನ ಬೇಡ. ವೃತ್ತಿಪರ ಮನೋಭಾವ ಇರಲಿ. ಕುವೆಂಪು ಹೇಳಿದಂತೆ ವಿಶ್ವ ಮಾನವರಾಗಬೇಕು ಎಂದು ಡಾ.ಪರಶಿವಮೂರ್ತಿ ಹೇಳಿದರು.
ಅವಧೂತರ್ಯಾರೂ ಇಲ್ಲಿ ಇಲ್ಲವಾದರೂ, ಕರ್ಚು ಕಡಿಮೆ ಮಾಡಿ. ಮಿತಿ ಮೀರಿದ ಆಸೆಯಾಗಲಿ, ಅತಿಯಾದ ಕರ್ಚಾಗಲಿ ಬೇಡವೆಂದು ತಿಳಸಿದ ನೀಡಿದ ಡಾ.ಪರಶಿವಮೂರ್ತಿ, ಒಂದು ಅಥವಾ ಎರಡು ಮಕ್ಕಳ ಚಿಕ್ಕ, ಚೊಕ್ಕ, ಸರಳ ಕುಟುಂಬ ಜೀವನಕ್ಕೆ ಸಲಹೆ ನೀಡಿದರು.
ಪೊಲೀಸ್ ತರಬೇತಿ ಶಾಲೆ ಯಾವ ಇಂಟರ್ ನ್ಯಾಷನಲ್ ಶಾಲೆಗಳಿಗೂ ಕಡಿಮೆಯದಲ್ಲ ಎಂದು ಸ್ಪಷ್ಟಪಡಿಸಿದ ಪರಶಿವಮೂರ್ತಿ, ಜಾಗತೀಕವಾಗಿ ಎಲ್ಲವೂ ಬದಲಾವಣೆಯಾಗುತ್ತಿರುವ ಕಾಲಘಟ್ಟದಲ್ಲಿ ನಾಗರೀಕ ಪೊಲೀಸರು ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಸರ್ವಸನ್ನದ್ಧರಾಗಿರಬೇಕು ಎಂದು ಸೂಚಿಸಿದರು.
ಸಮಾರಂಭದಲ್ಲಿ ಪ್ರಶಿಕ್ಷಣಾರ್ಥಿಗಳ ಗೌರವ ರಕ್ಷೆ ಸ್ವೀಕರಿಸಿದ ಡಾ.ಪರಶಿವಮೂರ್ತಿಯವರು ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ನಡೆಸಿದರು. ಸಾಧಕ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ, ಅಭಿನಂದಿಸಿದರು. ಹಾವೇರಿ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಸೇರಿದ 89 ಪ್ರಶಿಕ್ಷಣಾರ್ಥಿಗಳು ಇದೇ ಸಂದರ್ಭದಲ್ಲಿ ನಿರ್ಗಮನ ಪಥ ಸಂಚಲನ ನಡೆಸಿದರು.
ಉಡುಪಿ ಡಿವೈಎಸ್ಪಿ ಡಾ.ಪ್ರಭುದೇವ ಬಿ.ಮಾನೆ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ಪಶ್ಚಿಮ ವಲಯದ ಐಜಿಪಿ ಸಿ.ಎಚ್.ಪ್ರತಾಪ್ ರೆಡ್ಡಿ, ಉಡುಪಿ ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಶಗಿರುವ ದ.ಕ.ಜಿಲ್ಲಾ ಎಸ್ಪಿ ಅಭಿಷೇಕ್ ಗೋಯಲ್, ಕಾರ್ಕಳ ಡಿವೈಎಸ್ಪಿ ಜಯಂತ್ ವಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವರದಿ-ಚಿತ್ರ: ಶ್ರೀರಾಮ ದಿವಾಣ.

ಉಡುಪಿ: ಭಾಷಾ ನೀತಿಗೆ ಸಂಬಂಧಿಸಿದಂತೆ, ಕನ್ನಡ ಮಾತೃ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರಕಾರವು ಸುಪ್ರೀಂ ಕೋರ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸುತ್ತಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯದ ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಮತ್ತು ಮುಜರಾಯಿ ಸಚಿವರೂ ಆದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ ನಡೆದ 57 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯೋತ್ಸವ ಸಂದೇಶ ನೀಡುವ ಮೊದಲು ಸಚಿವರು ಗೌರವ ರಕ್ಷೆ ಸ್ವೀಕರಿಸಿದರು. ಪಥ ಸಂಚಲನ ವೀಕ್ಷಿಸಿದರು. ವಿವಿಧ ಕ್ಷೇತ್ರಗಳ 25 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸಮ್ಮಾನಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಶಾಸಕ ಕೆ.ರಘುಪತಿ ಭಟ್, ಜಿ.ಪಂ.ಪ್ರಭಾರ ಅಧ್ಯಕ್ಷ ಉಪೇಂದ್ರ ನಾಯಕ್, ತಾ.ಪಂ.ಅಧ್ಯಕ್ಷೆ ಶ್ರೀಮತಿ ಗೌರಿ ಪೂಜಾರಿ, ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಅಪರ ಜಿಲ್ಲಾಧಿಕಾರಿ ಕುಮಾರ್, ಡಿವೈಎಸ್ಪಿ ಡಾ.ಪ್ರಭುದೇವ ಬಿ.ಮಾನೆ, ಜಿ.ಪಂ. ಸಿಇಓ ಎಸ್.ಎ.ಪ್ರಭಾಕರ ಶರ್ಮ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಚಿತ್ರಗಳು: ಶ್ರೀರಾಮ ದಿವಾಣ.