Posts Tagged ‘udupi chanel’

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾ.18 ರಂದು ನಡೆಯಲಿದ್ದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಕಾರ್ಕಳದ ಮಾಜಿ ಶಾಸಕ ವಿ.ಸುನಿಲ್ ಕುಮಾರ್ ಗೆಲುವಿಗಾಗಿ ಉದಯವಾಣಿ ಪತ್ರಿಕೆಗೆ ಹಣ ಕೊಟ್ಟು ಬಿಜೆಪಿ ಪರವಾದ ಸುದ್ದಿ ಪ್ರಕಟವಾಗುವಂತೆ ಮಾಡಿದ (ಕಾಸಿಗಾಗಿ ಸುದ್ದಿ) ಬಿಜೆಪಿ ವಿರುದ್ದ ಕಾಂಗ್ರೆಸ್ ಪಕ್ಷ ಚುನಾವಣಾಧಿಕಾರಿಯವರಿಗೆ ಮಾ.14 ರಂದು ದೂರು ನೀಡಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರ ಚುನಾವಣಾ ಏಜೆಂಟ್ ಆಗಿರುವ ವಕೀಲ ವಿಜಯ ಹೆಗ್ಡೆ ಅವರು ಬುಧವಾರ ಸಂಜೆ ಚುನಾವಣಾ ಅಧಿಕಾರಿಗಳಾದ ಡಾ.ಎಂ.ಟಿ.ರೇಜು ಅವರನ್ನು ಭೇಟಿಯಾಗಿ ಬಿಜೆಪಿ ವಿರುದ್ದ ದೂರು ಸಲ್ಲಿಸಿದ್ದಾರೆ.
ವಾಸ್ತವವಾಗಿ ಕಾಂಗ್ರೆಸ್ ಪಕ್ಷ ಉದಯವಾಣಿ ಪತ್ರಿಕೆಯ ವಿರುದ್ದ ದೂರು ನೀಡಬೇಕಾಗಿತ್ತು. ಲಕ್ಷಾಂತರ ರು. ಹಣ ಪಡೆದುಕೊಂಡು ಜಾಹೀರಾತಿನ ಬದಲಾಗಿ ಬಿಜೆಪಿ ಪರವಾಗಿ ಸುದ್ದಿ ಪ್ರಕಟಿಸುವ ಮೂಲಕ ುದಯವಾಣಿ ಪತ್ರಿಕೆ ಅಪರಾಧ ಎಸಗಿತ್ತು.
ಈ ರೀತಿಯಾಗಿ ಹಣ ಪಡೆದು ಜಾಹೀರಾತಿನ ಬದಲು ಸುದ್ದಿ ರೂಪದಲ್ಲಿ ಒಂದು ಪಕ್ಷದ ಪರವಾಗಿ ಸುದ್ದಿ ಪ್ರಕಟಿಸುವ ಮೂಲಕ ಉದಯವಾಣಿ ದಿನ ಪತ್ರಿಕೆಯು ಓದುಗರಿಗೆ, ಚುನಾವಣಾ ಆಯೋಗಕ್ಕೆ, ಸರಕಾರಕ್ಕೆ, ಪತ್ರಿಕಾ ಕ್ಷೇತ್ರಕ್ಕೆ ಅಪಚಾರವೆಸಗಿತ್ತು.
ಆದರೆ, ಉದಯವಾಣಿ ವಿರುದ್ದ ದೂರು ನೀಡಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಉದಯವಾಣಿಯಲ್ಲಿ ತಮ್ಮ ಹೆಸರು, ಸುದ್ದಿ, ಫೋಟೋ ಯಾವುದೂ ಪ್ರಕಟವಾಗದೇ ಇರಬಹುದೆಂ ಭಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಬಿಜೆಪಿ ವಿರುದ್ದ ದೂರು ನೀಡಿ ಕೈತೊಳೆದುಕೊಂಡಿದ್ದಾರೆ. ವರದಿ: ಶ್ರೀರಾಮ ದಿವಾಣ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಮರು ಚುನಾವಣೆಯ ಪ್ರಚಾರ ಕಾರ್ಯಕ್ರಮ ನಡೆಯುತ್ತಿರುವಂತೆಯೇ ಮಣಿಪಾಲದಿಂದ ಪ್ರಕಟವಾಗುತ್ತಿರುವ ‘ಉದಯವಾಣಿ’ ದಿನ ಪತ್ರಿಕೆಯು ಮೂರನೇ ದಿನವಾದ ಇಂದೂ (ಮಾ.14) ಸಹ ಕಾಸಿಗಾಗಿ ಸುದ್ದಿ ಪ್ರಕಟಿಸಿದೆ.
ಮಾ.14 ರ ುದಯವಾಣಿಯ 12 ನೇ ಪುಟದಲ್ಲಿ ‘ಮೀನುಗಾರರಿಗೆ ರಾಜ್ಯ ಸರಕಾರದ ಬಂಪರ್ ಕೊಡುಗೆ’ ಎಂಬ ಶಿರ್ಷಿಕೆಯಡಿಯಲ್ಲಿ ಬಿಜೆಪಿ ಪರವಾದ ವಿಶೇಷ ಬರಹವನ್ನು ಪ್ರಕಟಿಸಿ ಪತ್ರಿಕಾರಂಗಕ್ಕೆ ಕಳಂಕ ಹಚ್ಚಿದೆ. ಈ ಬರಹದೊಂದಿಗೆ ಮೀನುಗಾರಿಕಾ ನಿಗಮದ ಅಧ್ಯಕ್ಷರ ಹಾಗೂ ಮೀನುಗಾರಿಕಾ ಫಡರೇಶನಿನ ಅಧ್ಯಕ್ಷರ ಅಭಿಪ್ರಾಯಗಳನ್ನೂ ಪ್ರಕಟಿಸಿದೆ. ಇವರಿಬ್ಬರೂ ಬಿಜೆಪಿ ನಾಯಕರೂ ಹೌದು.
ಕಳೆದ ಮೂರ್ನಾಲ್ಕು ದಿನಗಳಿಂದ ಉದಯವಾಣಿಯ 12 ನೇ ಪುಟದಲ್ಲಿ ಪ್ರತಿದಿನವೂ ಬಿಜೆಪಿ ಪರವಾದ ವಿಶೇಷ ಲೇಖನಗಳು ಪ್ರಕಟವಾಗುತ್ತಿದ್ದು, ಇವುಗಳನ್ನು ಸಂಬಂಧಪಟ್ಟವರಿಂದ ಹಣ ಪಡೆದುಕೊಂಡು ಜಾಹೀರಾತಿನ ಬದಲಾಗಿ ಲೇಖನದ ರೂಪದಲ್ಲಿ ಉದಯವಾಣಿ ಪ್ರಕಟಿಸುತ್ತಿದೆ.
ಬಿಜೆಪಿ ಮತ್ತು ಉದಯವಾಣಿ ಈ ಮೂಲಕ ಚುನಾವಣಾ ಆಯೋಗ, ಚುನಾವಣಾ ವೀಕ್ಷಕರು, ಸರಕಾರವನ್ನು ವಂಚಿಸುತ್ತಿದೆ. ಚುನಾವಣಾಧಿಕಾರಿಗಳು, ಚುನಾವಣಾ ವೀಕ್ಷಕರು ಮತ್ತು ಕಾಂಗ್ರೆಸ್ ನಾಯಕರಾಗಲೀ, ಜೆಡಿಎಸ್ ನಾಯಕರಾಗಲೀ ಕಾಸಿಗಾಗಿ ಸುದ್ದಿಯ ವಿರುದ್ದ ಸಂಬಂಧಪಟ್ಟವರಿಗೆ ಇನ್ನೂ ಸಹ ದೂರು ನೀಡದೇ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾ.18 ರಂದು ನಡೆಯಲಿರುವ ಮರು ಚುನಾವಣೆಯ ಪ್ರಕ್ರೀಯೆಯಲ್ಲಿ ಒಂದೆರಡು ಪತ್ರಿಕೆಗಳು ಮತ್ತು ಒಂದೆರಡು ಖಾಸಗಿ ಟಿವಿ ಛಾನೆಲ್ ಗಳು ಪ್ರಮುಖ ರಾಜಕೀಯ ಪಕ್ಷಗಳಿಂದ ಜಾಹೀರಾತಿನ ಬದಲಾಗಿ ಕಾಸು ಪಡೆದು ಕಾಸು ಪಡೆದ ಪಕ್ಷಗಳ ಪರವಾಗಿ ಸುದ್ದಿಗಳನ್ನು ಪ್ರಕಟ ಮಾಡುವ ಪ್ರಕರಣ ಇಂದೂ ಮುಂದುವರಿದಿದೆ.
ಈ ಹಗರಣವನ್ನು www.udupibits.com ಮಾ.12 ರಂದು ವರದಿ ಮಾಡುವ ಮೂಲಕ ಬಹಿರಂಗಗೊಳಿಸಿತ್ತು. ಮಾ.13 ರ ಉದಯವಾಣಿಯಲ್ಲೂ ಒಂದು ವರದಿ ಪ್ರಕಟವಾಗಿದ್ದು, ಈ ವರದಿ ಕಾಸು ಪಡೆದು ಪ್ರಕಟಿಸಿದ ಸುದ್ದಿಯಾಗಿರಬಹುದೇ ಎಂಬ ಸಂಶಯ ಉದ್ಭವಿಸಿದೆ.
ಮಂಗಳವಾರದ ಉದಯವಾಣಿಯ 12 ನೇ ಪುಟದಲ್ಲಿ ಪ್ರಕಟವಾದ ‘ಡಾ.ಆಚಾರ್ಯರ ಅಭಿವೃದ್ದಿ ಕೊಡುಗೆಗಳೇ ಬಿಜೆಪಿಗೆ ಶ್ರೀರಕ್ಷೆ’ ಎಂಬ ವರದಿ ಸಂಪೂರ್ಣವಾಗಿ ಬಿಜೆಪಿ ಪರವಾಗಿದ್ದು, ಕಾಸಿಗಾಗಿ ಬರೆದ ವರದಿಯಂತಿದೆ ಎಂದು ಯಾರು ಬೇಕಾದರೂ ಹೇಳಬಹುದು.
ಇಂತಹ ಬಿಜೆಪಿ ಪರವಾದ ವರದಿಗಳು ಉದಯವಾಣಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಪ್ರಕಟವಾಗುತ್ತಿದೆ.
ನಿರ್ಧಿಷ್ಟವಾಗಿ ಸ್ಥಳೀಯ ಎರಡು ಖಾಸಿ ಛಾನೆಲ್ ಗಳಲ್ಲೂ ಸುದ್ದಿಯ ಹೆಸರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪರವಾಗಿ ಪ್ರಚಾರ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಚುನಾವಣಾ ಆಯೋಗ ಮತ್ತು ವೀಕ್ಷಕರು ಇದರ ಕಡೆಗೆ ಗಮನಹರಿಸದಿರುವುದು ಸಂಶಯಗಳಿಗೆ ಕಾರಣವಾಗಿದೆ. ವರದಿ: ಶ್ರೀರಾಮ ದಿವಾಣ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾ.18 ರಂದು ನಡೆಯಲಿರುವ ಮರು ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವಂತೆಯೇ ಕೆಲವು ಪತ್ರಿಕೆಗಳಿಗೆ ಮತ್ತು ಖಾಸಗಿ ಟಿವಿ ಛಾನೆಲ್ ಗಳಿಗೆ ಕಾಸು ಕೊಟ್ಟು ತಮ್ಮ ಪರವಾಗಿ ಸುದ್ದಿಯನ್ನು ಬರೆಸಿಕೊಳ್ಳುತ್ತಿದ್ದಾರೆಯೇ ಎಂಬ ಸಂಶಯ ವ್ಯಕ್ತವಾಗಿದೆ.
ಕೆಲವು ದಿನಪತ್ರಿಕೆಗಳಲ್ಲಿ, ವಾರ ಪತ್ರಿಕೆಗಳಲ್ಲಿ, ಕೆಲವು ಟಿವಿ ಛಾನೆಲ್ ಗಳಲ್ಲಿ ಒಂದೆರಡು ಪ್ರಮುಖ ರಾಜಕೀಯ ಪಕ್ಷಗಳ ಪರವಾದ ಸುದ್ದಿಗಳು ಈಗಾಗಲೇ ಪ್ರಕಟವಾಗಿವೆ, ಪ್ರಸಾರವಾಗಿವೆ. ಆಗುತ್ತಲೇ ಇದೆ. ಒಂದೆರಡು ವಾರ ಪತ್ರಿಕೆಗಳು ಈಗಾಗಲೇ ಯಾರು ಗೆಲ್ಲಬಹುದೆಂಬುದನ್ನು ಬಹಿರಂಗಪಡಿಸಿವೆ. ಯಾರು ಗೆಲ್ಲಬೇಕೆಂದೂ ಫರ್ಮಾನು ಹೊರಡಿಸಿವೆ. ಕೆಲವು ಖಾಸಗಿ ಟಿವಿ ಛಾನೆಲ್ ಗಳು ನ್ಯೂಸ್ ಹೆಸರಲ್ಲಿ ಅಭ್ಯರ್ಥಿಗಳ ಚುನಾವಣಾ ವೇದಿಕೆಯೂ ಆಗುತ್ತಿರುವುದನ್ನು ಸ್ಪಷ್ಪವಾಗಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಭಾಷಣಗಳನ್ನು ಕಾಲು ಗಂಟೆ, ಅರ್ಧ ಗಂಟೆ ಕಾಲ ಪ್ರಸಾರ ಮಾಡುತ್ತಿವೆ.
ಪತ್ರಿಕೆಗಳಲ್ಲಿ ಪ್ರಕಟವಾಗುವ ಕೆಲವು ವರದಿಗಳು, ವಿಶೇಷ ವರದಿಗಳು, ಲೇಖನಗಳು, ಟಿವಿ ಛಾನೆಲ್ ಗಳಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವುಗಳೆಲ್ಲ ಸುದ್ದಿ ರೂಪದಲ್ಲಿರುವ ಜಾಹೀರಾತುಗಳು ಎಂಬ ಸತ್ಯ ಖಚಿತವಾಗುತ್ತದೆ.
ಮಾ. 12 ರ ಉದಯವಾಣಿಯಲ್ಲಿ ‘ಶ್ರೀ ಕ್ಷೇತ್ರ ಕಚ್ಚೂರಿನ ಅಭಿವೃದ್ದಿ: ರಾಜ್ಯ ಸರಕಾರದಿಂದ 2 ಕೋ.ರೂ. ಮಿಕ್ಕಿ ಅನುದಾನ’ ಎಂಬ ಬರಹ ಪ್ರಕಟವಾಗಿದೆ. ಇದನ್ನು ವರದಿ ಎಂದು ಹೇಳಲು ಸಾಧ್ಯವಿಲ್ಲ. ವರದಿಗೆ ಬೇಕಾದ ಡೇಟ್ ಲೈನ್ ಈ ಬರಹಕ್ಕಿಲ್ಲ. ಇದನ್ನು ಲೇಖನ ಎನ್ನಬಹುದು. ಆದರೆ, ಈ ಲೇಖನ ಬರೆದವರ ಹೆಸರು ಇದರಲ್ಲಿಲ್ಲ. ಕಚ್ಚೂರು ಕ್ಷೇತ್ರದಲ್ಲಿ ಈಗ ಬ್ರಹ್ಮಕಲಶವಾಗಲೀ, ಜೀರ್ಣೋದ್ದಾರವಾಗಲೀ, ವಾರ್ಷೀಕ ಉತ್ಸವವಾಗಲೀ ಇಲ್ಲ. ಯಾವ ಕಾರ್ಯಕ್ರಮಗಳೂ ಇಲ್ಲದಿರುವಾಗ ಬಿಜೆಪಿ ಪರವಾದ, (ಲೇಖನದಲ್ಲಿ ಆನಂದ ಮಟಪಾಡಿ, ಸಮಾಜ ಸೇವಕರು ಎಂಬವರ ಅಭಿಪ್ರಾಯವನ್ನೂ ಪ್ರಕಟಿಸಲಾಗಿದೆ. ಇವರು ಬಿಜೆಪಿ ಜಿಲ್ಲಾ ಸಮಿತಿಯ ಪದಾಧಿಕಾರಿ ಎನ್ನುವುದನ್ನು ಲೇಖನದಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ) ಲೇಖನವನ್ನು ಚುನಾವಣಾ ಸಂದರ್ಭದಲ್ಲಿ ಪ್ರಕಟಿಸಿರುವುದು ಕಾಸಿಗಾಗಿ ಸುದ್ದಿ ಅಲ್ಲದೇ ಮತ್ತೇನು ?
ಚುನಾವಣಾ ವೀಕ್ಷಕರು ಕಳೆದ ಒಂದು ವಾರದ ಎಲ್ಲಾ ದಿನ, ವಾರ ಪತ್ರಿಕೆಗಳನ್ನು, ಖಾಸಗಿ ಟಿವಿ ಛಾನೆಲ್ ಗಳ ಎಲ್ಲಾ ಸುದ್ದಿಗಳನ್ನೂ ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕಾಗಿದೆ. ಸರಕಾರಿ ಅಧಿಕಾರಿಗಳು, ಸಾರ್ವಜನಿರು ಇವುಗಳನ್ನೆಲ್ಲ ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದೇ ಆದಲ್ಲಿ ಕಾಸಿಗಾಗಿ ಸುದ್ದಿ ಪ್ರಕರಣ ಬಯಾಲಾಗಲಿದೆ. ವರದಿ: ಶ್ರೀರಾಮ ದಿವಾಣ.