Posts Tagged ‘kpcc’

ಉಡುಪಿ: ರಾಜ್ಯದ ಬಿಜೆಪಿ ಸರಕಾರದ ದುರಾಚಾರದಿಂದ ಬೇಸತ್ತ ಮತದಾರ ಒಗ್ಗಟ್ಟಿನಿಂದ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಗೆ ಮತ ನೀಡಿದ್ದಾನೆ. ಮತದಾರ ನೀಡಿದ ತೀರ್ಪಿನ್ನು ಸ್ವಾಗತಿಸುತ್ತೇವೆ. ಆದರೆ, ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಜೆಡಿಎಸ್ ವಿರುದ್ದ ಬಹಳಷ್ಟು ಅಪಪ್ರಚಾರ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಪೂರಕವಾದ ಬೆಳವಣಿಗೆಯಲ್ಲ ಎಂದು ಜೆಡಿಎಸ್ ರಾಜ್ಯ ನಾಯಕ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.
ಉಡುಪಿಯ ಖಾಸಗಿ ಹೋಟೇಲೊಂದರಲ್ಲಿ ಮಾ.26 ರಂದು ನಡೆಸಿದ ಮಾದ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಈ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಲ್ಲ. ರಾಜ್ಯದಲ್ಲಿ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಹೇಳಿದ ಮಹೇಂದ್ರ ಅವರು, ಜೆಡಿಎಸ್ ನ ಸೋಲಿಗೆ ಯಾರೂ ಹೊಣೆಯಲ್ಲ. ಸೋಲಿನ ಬಗ್ಗೆ ಅವಲೋಕನ ಮಾಡಿಕೊಂಡು ವಿಧಾನಸಭಾ ಚುನಾವಣೆಗಾಗಿ ಪಕ್ಷವನ್ನು ಸಂಘಟಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮಹಾ ಪ್ರಧಾನ ಕಾರ್ಯದರ್ಶಿ ಲೂಯಿಸ್ ಲೋಬೋ, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಕೆಂಚನೂರು ಶಾಲಿನಿ ಶೆಟ್ಟಿ, ಯುವ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಹಾಗೂ ರಿಝ್ವಾನ್ ಉಪಸ್ಥಿತರಿದ್ದರು.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾಗಿದ್ದ ಡಿ.ವಿ.ಸದಾನಂದ ಗೌಡ ಅವರು ಅನಿರೀಕ್ಷಿತ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾದ ಹಿನ್ನಲೆಯಲ್ಲಿ, ಅವರ ರಾಜೀನಾಮೆಯಿಂದಾಗಿ ತೆರವಾದ ಲೋಕಸಭಾ ಕ್ಷೇತ್ರಕ್ಕೆ ಮಾ.18 ರಂದು ಚುನಾವಣೆ ನಡೆದು, ಮಾ.21 ರಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ನ ಜಯಪ್ರಕಾಸ್ ಹೆಗ್ಡೆಯವರು ಬಿಜೆಪಿಯ ಸುನಿಲ್ ಕುಮಾರ್ ಅವರನ್ನು 45, 724 ಮತಗಳ ಭಾರೀ ಅಂತರದಿಂದ ಸೋಲಿಸುವ ಮೂಲಕ ಜಯದ ಪ್ರಕಾಶ ಮೂಡಿಸಿದ್ದಾರೆ.
ಕಾಂಗ್ರೆಸ್ ನಾಯಕರು ಹೈಕಮಾಂಡ್ ನ ಕಟ್ಟುನಿಟ್ಟಿನ ಾದೇಶ ಮತ್ತು ಎಚ್ಚರಿಕೆಯಿಂದಾಗಿ ಐಕ್ಯತೆಯಿಂದ ಕೆಲಸ ಮಾಡಿದ್ದು ಮತ್ತು ರಾಜ್ಯದ ಬಿಜೆಪಿ ಸರಕಾರದ ವಿಫಲತೆ, ದುರಾಡಳಿತ, ಹಗರಣಗಳ ಸರಮಾಲೆ, ಬಿಜೆಪಿ ಪಕ್ಷದೊಳಗಿನ ಗೊಂದಲ, ಭಿನ್ನಮತ, ಒಡಕು ಇತ್ಯಾದಿಗಳೆಲ್ಲವೂ ಕಾಂಗ್ರೆಸ್ ನ ಗೆಲುವು ಮತ್ತು ಬಿಜೆಪಿ ಸೋಲಿಗೆ ಕಾರಣವಾಯಿತು.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಇವುಗಳಲ್ಲಿ 4 ಉಡುಪಿ ಜಿಲ್ಲೆಯಲ್ಲಿ ಮತ್ತು 4 ಚಿಕ್ಕಮಗಳೂರು ಜಿಲ್ಲೆಯಲ್ಲಿ ಇವೆ. ಚಿಕ್ಕಮಗಳೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯ ಸುನಿಲ್ ಕುಮಾರ್ ಕಾಂಗ್ರೆಸ್ ನ ಜಯಪ್ರಕಾಸ್ ಹೆಗ್ಡೆಯವರಿಗಿಂತ ಅಧಿಕ ಮತ ಪಡೆದಿದ್ದಾರೆ. ಉಳಿದಂತೆ ಶೃಂಗೇರಿ, ಮೂಡಿಗೆರೆ ಮತ್ತು ತರಿಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಸ್ತುತ ಬಿಜೆಪಿಯವರೇ ಶಾಸಕರಾಗಿದ್ದಾಗಲೂ ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆಯವರು ಬಿಜೆಪಿ ಅಭ್ಯರ್ಥಿಗಿಂತ ಅಧಿಕ ಮತ ಪಡೆದಿದ್ದಾರೆ.
ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಕಳದಲ್ಲಿ ಮಾತ್ರ ಕಾಂಗ್ರೆಸ್ ನ ಗೋಪಾಲ ಭಂಡಾರಿಯವರು ಶಾಸಕರಾಗಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿಗಿಂತ ಹೆಚ್ಚು ಮತ ಪಡೆದಿದ್ದಾರೆ. ಉಳಿದಂತೆ ಬಿಜೆಪಿಯವರೇ ಶಾಸಕರಾಗಿರುವ ಕುಂದಾಪುರ, ಕಾಪು ಮತ್ತು ಉಡುಪಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿರುವುದು ಬಿಜೆಪಿಯ ಎದೆಯಲ್ಲಿ ನಡುಕ ಹುಟ್ಟಿಸಿದೆಯಾದರೆ, ಕಾಂಗ್ರೆಸ್ ನಾಯಕರ ಮನದಲ್ಲಿ ಹೊಸ ಕನಸು ಚಿಗುರಿಸಿದೆ. ಇದು ಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗುವ ಸಾಧ್ಯತೆಯೂ ಇಲ್ಲದಿಲ್ಲ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಯ ವಿ.ಸುನಿಲ್ ಕುಮಾರ್ ಅವರನ್ನು 45,724 ಮತಗಳ ಭಾರೀ ಅಂತರದಿಂದ ಸೋಲಿಸುವ ಮೂಲಕ ವಿಜಯದುಂಧುಬಿ ಮೊಳಗಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆಯವರು 3,98,723 ಮತಗಳನ್ನು ಪಡೆದರೆ, ಸುನಿಲ್ ಕುಮಾರ್ ಅವರು 3,52,999 ಮತಗಳನ್ನು ಪಡೆದು ಪರಾಭವಗೊಂಡರು. ಜೆಡಿಎಸ್ ನ ೆಸ್.ಎಲ್.ಭೋಜೇಗೌಡ ಅವರಿಗೆ, 72,080 ಮತಗಳು, ಸಂಯುಕ್ತ ಜನತಾದಳದ ಕೆ.ಭರತ್ ಅವರಿಗೆ 4,945 ಮತಗಳು, ಪ್ರಜಾಪ್ರಭುತ್ವದ ಪ್ರಜಾಕ್ರಾಂತಿ ಪಕ್ಷದ ಹುಣಸೂರು ಕೆ.ಚಂದ್ರಶೇಖರ್ ಅವರಿಗೆ 3,640 ಮತಗಳು, ಪಕ್ಷೇತರ ಅಭ್ಯರ್ಥಿಗಳಾದ ಅಸಾದುಲ್ಲಾ ಕಟಪಾಡಿ ಅವರಿಗೆ 1,491 ಮತಗಳು, ಕೆ.ಜಯಪ್ರಕಾಶ್ ಹೆಗ್ಡೆ ಕೊಕ್ಕರ್ಣೆ ಅವರಿಗೆ 1,755 ಮತಗಳು, ದೀಪಕ್ ರಾಜೇಶ್ ಕುವೆಲ್ಲೊ ಅವರಿಗೆ 1,429 ಮತಗಳು, ರಿಯಾಜ್ ಅಹಮ್ಮದ್ ಅವರಿಗೆ 921 ಮತಗಳು, ವೆಂಕಟೇಶ್ ಎನ್. ಅವರಿಗೆ 1,064 ಮತಗಳು, ಶ್ರೀಧರ ಪೇದೆಮನೆ ಅವರಿಗೆ 1,377 ಮತಗಳು, ಶ್ರೀನಿವಾಸ ಪೂಜಾರಿ ಅವರಿಗೆ 3,293 ಮತಗಳು, ಎಚ್.ಸುರೇಶ್ ಪೂಜಾರಿ ಅವರಿಗೆ 2,177 ಮತಗಳು ಹಾಗೂ ಹರಿ ಶ್ಯಾನುಭೋಗ್ ಕಟೀಲ್ ಅವರಿಗೆ 6,930 ಮತಗಳು ಲಭಿಸಿವೆ.
ಕಳೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಜಯ ಸಾಧಿಸಿ ಸಂಸತ್ ಸದಸ್ಯರಾದ ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಮಾ.18 ರಂದು ಮರು ಚುನಾವಣೆ ನಡೆದಿತ್ತು. ಮಾ.21 ರಂದು ಉಡುಪಿಯ ಕುಂಜಿಬೆಟ್ಟು ಶಾಲೆಯಲ್ಲಿ ಮತ ಎಣಿಕೆ ನಡೆಯಿತು.
ಆಡಳಿತಾರೂಢ ಬಿಜೆಪಿಯ ಕೈಲಿದ್ದ ಕ್ಷೇತ್ರ ಬಿಜೆಪಿ ಕಳೆದುಕೊಳ್ಳುವ ಮೂಲಕ ರಾಜ್ಯ ಬಿಜೆಪಿಗೆ ಮುಖಭಂಗವಾಗಿದೆ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಇಂದು (ಮಾ.18) ನಡೆದ ಮರು ಮತದಾನದಲ್ಲಿ ಒಟ್ಟು 60 ಶೇಕಡಾ ಮತದಾನವಾಗಿದೆ.
ಚುನಾವಣಾ ವಿಶೇಷಗಳು
-ಮೂಡಬೆಟ್ಟು ವಾರ್ಡ್ ನ ಆದಿ ಉಡುಪಿಯ 117 ನೇ ಮತಗಟ್ಟೆಯಲ್ಲಿ ಮತ್ತು ಪೆರ್ಡೂರು ಬಳಿಯ 25 ನೇ ಮತಗಟ್ಟೆಯಲ್ಲಿ ಬೆಳಗ್ಗೆ ಮತದಾನ ಪ್ರಕ್ರೀಯೆ ಆರಂಭವಾಗುತ್ತಿದ್ದಂತೆಯೇ ಇಲೆಕ್ಟ್ರೋನಿಕ್ಸ್ ಮತ ಯಂತ್ರ ಕೈ ಕೊಟ್ಟ ಕಾರಣ ಮತದಾರರು ಸರತಿ ಸಾಲಿನಲ್ಲಿ ಕೆಲವು ಗಂಟೆಗಳ ಕಾಲ ನಿಲ್ಲಬೇಕಾಗಿಬಂತು.
- ಅಲೆವೂರು ಗ್ರಾಮದ ಪ್ರಗತಿ ನಗರದಲ್ಲಿ ವಾಸವಿದ್ದ ವಲಸೆ ಕಾರ್ಮೀಕರು ಮತದಾನ ಮಾಡಲೆಂದು ಅಲೆವೂರು ನೆಹರೂ ಹೈಸ್ಕೂಲಿನ ಮತಗಟ್ಟೆಗೆ ಬಂದಾಗ ಇವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವೆನ್ನುವುದು ಬಹಿರಂಗಗೊಂಡಿತು. ವಿಷಯ ತಿಳಿದ ನೂರಕ್ಕೂ ಅಧಿಕ ಮಂದಿ ವಲಸೆ ಕಾರ್ಮೀಕರು ಮತಗಟ್ಟೆ ಎದುರು ಪ್ರತಿಭನೆ ನಡೆಸಿದರು.
- ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಶಾತಿಯುತ ಮತದಾನ ನಡೆಯಿತು. ಇಲ್ಲೆಲ್ಲಾ ಎಎನ್ಎಫ್ ಮತ್ತು ಬಿಎಸ್ಎಫ್ ಪಡೆಗಳ ಬಿಗಿ ಪಹರೆ ಏರ್ಪಡಿಸಲಾಗಿತ್ತು. ಸೀತಾನದಿ ಮತಗಟ್ಟೆಯಲ್ಲಿ ಮತದಾನ ಮಾಡಿದ ವ್ಯಕ್ತಿಯೋರ್ವ ಮಾಧ್ಯಮದವರ ಜೊತೆ ಮಾತನಾಡುತ್ತಾ ಹೇಳಿದ್ದು ಹೀಗೆ: ನಾನು ಕಳೆದ ಹಲವು ವರ್ಷಗಳಿಂದ ಮತದಾನ ಮಾಡುತ್ತಿದ್ದೇನೆ. ಆದರೆ, ಇಷ್ಟರವರೆಗೆ ಹೀಗಾಗಿರಲಿಲ್ಲ. ಮತಗಟ್ಟೆಗೆ ಹೋಗಿ ಮತ ಹಾಕಲು ಭಯವಾಯಿತು. ಪೋಲೀಸರ ಮಾತು, ಆದೇಶಗಳು, ಒರಟುತನ ಇತ್ಯಾದಿಗಳು ಭಯವನ್ನು ಹುಟ್ಟಿಸುತ್ತದೆ.
-ಜಿಲ್ಲೆಯ ಹಲವು ಕಡೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಜಕೀಯ ಪಕ್ಷಗಳು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಗಘಿಸಿ ತಮ್ಮ ತಮ್ಮ ಪಕ್ಷಗಳ ಬೂತ್ ಗಳನ್ನು ಹಾಕಿದ್ದರು.
-ಬೂತ್ ಗಳಲ್ಲಿ ಒಂದು ಬಾವುಟ ಮಾತ್ರ ಹಾಕಲು ಅವಕಾಶ ಇತ್ತು. ಆದರೆ, ಹಲವೆಡೆ 2,3,4 ಬಾವುಟಗಳನ್ನು ಪಕ್ಷಗಳು ಬೂತ್ ಗೆ ಹಾಕಿದ್ದರು. ಸಣ್ಣ ಶಾಮಿಯಾನ ಹಾಕಬೇಕಾದಲ್ಲಿ ದೊಡ್ಡ ಶಾಮಿಯಾನ ಹಾಕಲಾಗಿತ್ತು. ಒಂದೆರಡು ಕುರ್ಚಿಗಳನ್ನು ಇರಿಸಲು ಮಾತ್ರ ಅವಕಾಶವಿತ್ತು. ಆದರೆ, ಇಲ್ಲೂ ಸಹ ಹಲವು ಕುರ್ಚಿಗಳನ್ನು ಇರಿಸಲಾಗಿತ್ತು.
-ಬಹುತೇಕ ಕಡೆಗಳಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ವಾಹನಗಳ ಮೂಲಕ ಅವರವರ ಮನೆಗಳಿಂದ ಕರೆದುಕೊಂಡು ಬಂದು ಓಟು ಹಾಕಿಸುತ್ತಿದ್ದರು. ನೀತಿ ಸಂಹಿತೆ ಪ್ರಕಾರ ಹೀಗೆ ಮಾಡುವುದು ನಿಷೇಧಿತ.
-ಮತಗಟ್ಟೆಯ ಹೊರಗಡೆ ಅಂಟಿಸಲಾಗಿದ್ದ ನೋಟೀಸ್ ನಲ್ಲಿ ಓಟಿನ ಕಾಗದವನ್ನು ಮತಪೆಟ್ಟಿಗೆಯಲ್ಲಿ ಹಾಕಬೇಕು, ಹೊರಗಡೆ ಎಲ್ಲಿಗೂ ತೆಗೆದುಕೊಂಡು ಹೋಗಬಾರದು ಎಂಬ ಸೂಚನೆ ಇತ್ತು. ಇದೀಗ ನಡೆಯುತ್ತಿರುವ ಮತದಾನದಲ್ಲಿ ಮತ ಪೆಟ್ಟಿಗೆ ಇಲ್ಲ. ಮತಯಂತ್ರಗಳು ಬಂದಿವೆ ಎಂಬುದು ಚುನಾವಣಾ ಆಯೋಗಕ್ಕೆ ತಿಳಿದಿದೆಯಾದರೂ ಮತ್ತೆ ಮತ್ತೆ ತಪ್ಪು ಮಾಹಿತಿಯನ್ನೇ ಪ್ರಕಟಿಸಿ ವಿತರಿಸುತ್ತಾರೆವ ಎನ್ನುವುದು ಅಧೀಕಾರಿಗಳ ಬೇಜವಾಬ್ದಾರಿ ೆನ್ನುವುದಕ್ಕೆ ಸಾಕ್ಷಿಯಾಗಿದೆ. ಚಿತ್ರಗಳು: ಶ್ರೀರಾಮ ದಿವಾಣ.

ಉಡುಪಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ 80 ಕೇಸುಗಳಿವೆ. ಇವುಗಳಲ್ಲಿ ಕೇವಲ 8 ಕೇಸುಗಳು ಮಾತ್ರ ಎಫ್ಐಆರ್ ಆಗಿವೆ. ಉಳಿದವುಗಳು ಇನ್ನಷ್ಟೇ ಆಗಬೇಕಾಗಿವೆ. ಈ ಎಲ್ಲಾ ಪ್ರಕರಣಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾಗಲು ಪ್ರಯತ್ನ ಪಡುತ್ತಿದ್ದಾರೆ. ಅದಕ್ಕಾಗಿ ಸದಾನಂದ ಗೌಡರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಆರೋಪಿಸಿದ್ದಾರೆ.
ಉಡುಪಿಯ ಕಾಂಗ್ರೆಸ್ ಭವನದಲ್ಲಿ ಮಾ.12 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಸರಕಾರ ಹೆಸರಿಗೆ ಮಾತ್ರ ಇದೆ. ಯಾವ ಅಧಿಕಾರಿಗಳೂ ಮುಖ್ಯಮಂತ್ರಿಗಳು ಹೇಳಿದಂತೆ ಕೇಳುತ್ತಿಲ್ಲ. ಸಚಿವ ಸಂಪುಟದ ಸದಸ್ಯರು ಸಹ ಸಿಎಂ ಹೇಳಿದಂತೆ ಕೇಳುತ್ತಿಲ್ಲ. ಇವರ ಅಸಹಕಾರ ಮುಂದುವರಿದಿದೆ. ಇದರಿಂದಾಗಿ ರಾಜ್ಯದ ಅಭಿವೃದ್ದಿ ಆಗುತ್ತಿಲ್ಲ. ಅಧಿಕಾರದಿಂದ ದಾಹದಿಂದಲೇ ಸರಕಾರ ಕುಸಿದುಬೀಳಲಿದೆ. ಬಿಜೆಪಿಗೆ ಭವಿಷ್ಯವಿಲ್ಲ ಎಂದು ರಾಯರೆಡ್ಡಿ ಹೇಳಿದರು.

ಬಿಜೆಪಿ ಸರಕಾರ ಬೋಗಸ್ ಬಜೆಟ್ ಮಂಡಿಸಿ ಜನರನ್ನು ದಾರಿ ತಪ್ಪಿಸಿದೆ. ರಾಜ್ಯದ ಆದಾಯ, ಕರ್ಚು, ವೆಚ್ಚ, ಸಾಲ ಇತ್ಯಾದಿಗಳ ಬಗ್ಗೆ ಸರಕಾರ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ ಬಸವರಾಜ ರಾಯರೆಡ್ಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗುತ್ತೆ, ಮೆಟ್ರೋ ಆಗುತ್ತೆ. ಆದರೆ, ಕುಡಿಯುವ ನೀರು, ಆಶ್ರಯ ಮನೆಗಳು ಇತ್ಯಾದಿಗಳು ಮಾತ್ರ ಆಗಲ್ಲ. ಇಲ್ಲಿ ಭ್ರಷ್ಟಾಚಾರಕ್ಕಾಗಿ ಅಭಿವೃದ್ದಿ ಆಗುತ್ತೆ, ಅಭಿವೃದ್ದಿಗಾಗಿ ಅಭಿವೃದ್ದಿ ಆಗುತ್ತಿಲ್ಲ ಎಂದು ತಿಳಿಸಿದರು.

ರಾಜ್ಯದ 123 ತಾಲೂಕುಗಳಲ್ಲಿ ತೀವ್ರ ಬರಗಾಲ ಬಂದಿದೆ. ಆದರೆ, ಮುಖ್ಯಮಂತ್ರಿಗಳಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಬರಗಾಲ ಪೀಡಿತ ಸ್ಥಳಗಳಿಗೆ ಭೇಟಿಕೊಡುವುದಾಗಲೀ, ಅಧಿಕಾರಿಗಳ ಜೊತೆಗೆ ಮಾತುಕತೆಯಾಗಲೀ ನಡೆಸುತ್ತಿಲ್ಲ. ಜಿಲ್ಲಾಡಳಿತಕ್ಕೆ ಹಣ ಬಿಡುಗಡೆ ಸಹ ಮಾಡುತ್ತಿಲ್ಲ. ಬರಗಾಲವನ್ನು ನಿರ್ವಹಿಸಲು ಬಿಜೆಪಿ ಸರಕಾರ ವಿಫಲವಾಗಿದೆ ಎಂದು ರಾಯರೆಡ್ಡಿ ಅಪಾದಿಸಿರು.

ಸಚಿವರು, ಶಾಸಕರು ಒಂದೊಂದು ಸಲ ಒಂದೊಂದು ರೀತಿ ಮಾತನಾಡುತ್ತಾರೆ. ಮುಖ್ಯಮಂತ್ರಿ ವಿರುದ್ದ ಸಹಿ ಸಂಗ್ರಹ ಸಹ ನಡೆಯುತ್ತಿದೆ. ಈ ಹಂತದಲ್ಲಿ ಮುಖ್ಯಮಂತ್ರಿ ಸದಾನಂದ ಗೌಡರು ಬಿಜೆಪಿ ಪಕ್ಷದೊಳಗೆ ಶಾಸಕಾಂಗ ಪಕ್ಷ ಸದಸ್ಯರ ಸಭೆ ಕರೆದು ಅಲ್ಲಿ ಬಹುಮತ ಸಾಬೀತುಪಡಿಸುವ ಅಗತ್ಯವಿದೆ. ಬಹುಮತ ಇದ್ದಲ್ಲಿ ಬಜೆಟ್ ಮಂಡಿಸಲಿ, ಇಲ್ಲದಿದ್ದರೆ ಕುರ್ಚಿ ಬಿಟ್ಟು ಕೆಳಗಿಳಿದು ಹೋಗಲಿ ಎಂದು ರಾಯರೆಡ್ಡಿ ಒತ್ತಾಯಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಶಾಸಕ ಯು.ಟಿ.ಖಾದರ್, ಪಕ್ಷದ ಮುಖಂಡರುಗಳಾದ ಫಾರುಕ್ ಉಳ್ಳಾಲ, ಮಮತಾ ಗಟ್ಟಿ, ಸಂತೋಷ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಎನ್.ಎಸ್.ಖರೀಂ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ಉಡುಪಿ- ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ.ಜಯಪ್ರಕಾಶ್ ಹೆಗ್ಡೆ ಅವರ ಪರವಾಗಿ ಮತ ಯಾಚಿಸಲು ಮಾ.8 ರಂದು ಉಡುಪಿಗೆ ಆಗಮಿಸಿದ ಕಾಂಗ್ರೆಸ್ ನಾಯಕರುಗಳಾದ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಮಂತ್ರಿ ಎಂ.ವೀರಪ್ಪ ಮೊಯಿಲಿ, ಮಾಜಿ ಸಚಿವರೂ, ಮಾಜಿ ಕೆಪಿಸಿಸಿ ಅಧ್ಯಕ್ಷರೂ ಆದ ಆರ್.ವಿ.ದೇಶಪಾಂಡೆ ಹಾಗೂ ಕಾಂಗ್ರೆಸ್ ಸೇವಾದಳದ ರಾಜ್ಯಾಧ್ಯಕ್ಷರಾದ ಭೀಮಾ ಶಂಕರ್ ಮಾಧ್ಯಮಗೋಷ್ಟಗಳನ್ನು ನಡೆಸಿದರು.
ಸಿದ್ದರಾಮಯ್ಯ ಜೊತೆಗೆ ದ.ಕ.ಜಿಲ್ಲಾ ಕಾಂಗ್ರೆಸ್ ನ ನಾಯಕರುಗಳಾದ ಪಿ.ವಿ.ಮೋಹನ್, ಮೊಯಿದೀನ್ ಬಾವಾ, ಟಿ.ಕೆ.ಸುಧೀರ್, ರಾಜ್ಯಸಭಾ ಸದಸ್ಯ ಸೀಲಂ, ಕೆಪಿಸಿಸಿ ಕಾರ್ಯದರ್ಶಿ ಬೋಸ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.
ವೀರಪ್ಪ ಮೊಯಿಲಿ ಜೊತೆಗೆ ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವಾ, ಮಾಜಿ ಸಚಿವ ಚಿಕ್ಕ ಬಳ್ಳಾಪುರದ ಕೃಷ್ಣಪ್ಪ, ಚಿಕ್ಕ ಬಳ್ಳಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.
ಭೀಮಾ ಶಂಕರ್ ಜೊತೆಗೆ ಕಾಂಗ್ರೆಸ್ ಸೇವಾದಳದ ಮೈಸೂರು ವಿಭಾಗೀಯ ಸಂಚಾಲಕರಾದ ಹಾಸನದ ಗೋಪಾಲೇ ಗೌಡ, ರಾಜ್ಯ ಕಾರ್ಯದರ್ಶಿ ಕೆ.ಬಿ.ವಿನಾಯಕ ಮೂರ್ತಿ, ಸುಜಾತಾ ಉಳ್ಳಾಲ್, ಪ್ರಕಾಶ್ ಮೈಸೂರು, ಅಶೋಕ್ ಕುಮಾರ್ ಕೊಡವೂರು ಉಪಸ್ಥಿತರಿದ್ದರು.
ಚುನಾವಣಾ ಪ್ರಕ್ರೀಯೆ ಆರಂಭವಾದ ಬಲಳಿಕ ಒಂದೇ ದಿನ ಒಂದೇ ಪಕ್ಷದ ನಾಲ್ಕು ಮಾಧ್ಯಮಗೋಷ್ಟಿಗಳು ನಡೆದುದು ಇದೇ ಮೊದಲ ಬಾರಿಯಾಗಿದೆ. ಚಿತ್ರಗಳು: ಶ್ರೀರಾಮ ದಿವಾಣ.

ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರೂ, ಮಾಜಿ ಸಚಿವರೂ ಆದ ಡಾ.ಜಿ.ಪರಮೇಶ್ವರ್ ಅವರು ಮಾ.8 ರಂದು ಉಡುಪಿ- ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರ ಪರವಾಗಿ ಉಡುಪಿ ಜಿಲ್ಲೆಯ ವಿವಿಧೆಡೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಬೆಳಗ್ಗೆ ಬಾರ್ಕೂರಿನ ಕಚ್ಚೂರು ಶ್ರೀ ಮಾಲ್ತಿದೇವಿ ದೇವಾಲಯಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದ ಪರಮೇಶ್ವರ್ ಅವರು ಬಳಿಕ ಬ್ರಹ್ಮಾವರ, ನೇಜಾರು, ಸಂತೆಕಟ್ಟೆ, ಕೆಮ್ಮಣ್ಣು, ನಿಟ್ಟೂರು, ಕೊಡಂಕೂರು, ಮೂಡುಬೆಟ್ಟು- ಮಧ್ವ ನಗರ, ಕೊಡವೂರು ಮೊದಲಾದೆಡಗಳಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಮನೆ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ನಿಟ್ಟೂರಿನಿಂದ ಕೊಡಂಕೂರು ಮಾರ್ಗವಾಗಿ ಮದ್ವನಗರದ ವರೆಗೆ ರೋಡ್ ಶೋ ನಡೆಸಿದರು. ರೋಡ್ ಶೋ ಮೊದಲು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್ ಮಧ್ವರಾಜ್ ಅವರು ಪರಮೇಶ್ವರ್ ಅವರನ್ನು ಹಾರ ಹಾಕಿ ಸ್ವಾಗತಿಸಿದರೆ, ಕೊಡಂಕೂರಿನಲ್ಲಿ ಕಾಂಗ್ರೆಸ್ ಸೇವಾದಳದ ಸದಸ್ಯರು ಗೌರವ ವಂದನೆ ಸಲ್ಲಿಸಿದರು. ಕೊಡಂಕೂರು ಶ್ರೀ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಪರಮೇಶ್ವರ್ ಜೊತೆಗೆ ಪ್ರಮೋದ್ ಮಧ್ವರಾಜ್, ಅಶೊಕ್ ಕುಮಾರ್ ಕೊಡವೂರು, ಕೆ.ಜನಾರ್ದನ ಭಂಡಾರ್ಕರ್, ಗಣೇಶ್ ನೆರ್ಗಿ, ಸದಾಶಿವ ಕೋಟ್ಯಾನ್, ಯುವರಾಜ್ ಪುತ್ತೂರು, ಮಲ್ಲಿಕಾ ಅಶೋಕ್, ಮಲ್ಲಿಕಾ ಪೂಜಾರಿ, ಮುರಳಿ ಶೆಟ್ಟಿ, ಯತೀಶ್ ಕರ್ಕೇರ, ಮಿಥುನ್ ಅಮೀನ್, ದಿವಾಕರ ಕುಂದರ್ ಮೊದಲಾದವರು ಇದ್ದರು.
ಮಾ.9 ರಂದು ಕುಂದಾಪುರ ತಾಲೂಕಿನಲ್ಲಿ ಡಾ.ಪರಮೇಶ್ವರ್ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಚಿತ್ರಗಳು: ಶ್ರೀರಾಮ ದಿವಾಣ.

ಉಡುಪಿ: ರಾಜ್ಯದ ಬಿಜೆಪಿ ಸರಕಾರದ ಭ್ರಷ್ಟಾಚಾರದ ಹಗರಣಗಳನ್ನು ನೋಡಿ ನೋಡಿ ಮತದಾರರು ಬೇಸತ್ತಿದ್ದಾರೆ. ಬೇಸತ್ತ ಮತದಾರರು ಕಾಂಗ್ರೆಸ್ ನತ್ತ ಒಲವು ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಭಾರೀ ಅಂತರದಿಂದ ಈ ಬಾರಿ ಜಯ ಸಾಧಿಸಲಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ, ಕಿರು ತೆರೆ ನಟ, ವಿಶ್ವಕರ್ಮ ಸಮಾಜದ ಮುಂದಾಳು ಕೆ.ಪಿ.ನಂಜುಂಡಿ ಅವರು ತಿಳಿಸಿದ್ದಾರೆ.
ಮಾ.7 ರಂದು ಸಂಜೆ ಶ್ರೀ ಕ್ಷೇತ್ರ ಮಂದರ್ತಿಗೆ ಭೇಟಿ ನೀಡಿದ ಬಳಿಕ ಮಂದರ್ತಿಗೆ ಸಮೀಪದ ಕಲ್ಲು ಮಹಾಲಿಂಗೇಶ್ವರ ದೇವಾಲಯದ ಬಳಿಯ ಪ್ರಭಾಕರ ಆಚಾರ್ಯ ಅವರ ಮನೆಯಂಗಳದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ನಂಜುಂಡಿ ಮಾತನಾಡುತ್ತಿದ್ದರು.
ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಕಿಶೋರ್ ಕುಮಾರ್ ಶೆಟ್ಟಿ, ನಾಗರಾಜ ಆಚಾರ್ಯ, ದಯಾನಂದ ಆಚಾರ್ಯ, ಮಂದರ್ತಿ ಜನಾರ್ದನ ರಾವ್, ಉಪೇಂದ್ರ ಆಚಾರ್ಯ, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರ ಪುತ್ರ ನಿಶಾಂತ್ ಹೆಗ್ಡೆ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾದ ಒಂದು ಪ್ರಕರಣವನ್ನು ಹೈಕೋರ್ಟ್ ರದ್ದು ಪಡಿಸಿದ ಏಕೈಕ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬೀಗುವ ಅಗತ್ಯವೇನೂ ಇಲ್ಲ. ಯಡಿಯೂರಪ್ಪನವರ ಮೇಲೆ ಮತ್ತು ಇವ ಕುಟುಂಬದವರ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ. ಡಿ ನೋಟಿಫಿಕೇಶನ್ ಪ್ರಕರಣಗಳಲ್ಲಿ ಯಡಿಯೂರಪ್ಪನವರು ಸಿಕ್ಕಿಬೀಳುವುದು ಗ್ಯಾರಂಟಿ ಎಂದು ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರು ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾ.7 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಒಂದು ಪಕ್ಷ ಯಡಿಯೂರಪ್ಪನವರು ಎಲ್ಲಾ ಪ್ರಕರಣಗಳಲ್ಲಿ ಆರೋಪಮುಕ್ತರಾದರು ಕಾಂಗ್ರೆಸ್ ಗೆ ಅವರು ಬೇಡ ಎಂದು ತಿಳಿಸಿದರು.
ಈ ಹಿಂದಿನ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ ಎಂಬ ಆರೋಪಗಳೂ ಇವೆ. ಈ ಬಾರಿಯ ಚುನಾವಣೆಯಲ್ಲಿಯೂ ಒಂದಿಬ್ಬರು ಪಕ್ಷ ನಾಯಕರು ಸಕ್ರಿಯವಾಗಿ ಕಾಣುತ್ತಿಲ್ಲ. ಇದು ಅಭ್ಯರ್ಥಿಯ ಸೋಲಿಗೆ ಕಾರಣವಾಗಬಹುದೇ ಎಂದು ಉಡುಪಿಬಿಟ್ಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜನಾರ್ದನ ಪೂಜಾರಿಯವರು, ಈ ಬಾರಿ ಪಕ್ಷದ ಅಭ್ಯರ್ಥಿಗೆ ಪಕ್ಷದ ನಾಯಕರೇ ಮೋಸ ಮಾಡಿದಲ್ಲಿ, ಮೋಸ ಮಾಡಿದ ವ್ಯಕ್ತಿಯ ಕಥೆ ಮುಗಿದಂತೆಯೇ. ಮುಂದೆ ಅಂತಹ ವ್ಯಕ್ತಿಗೆ ಕಾಂಗ್ರೆಸ್ ನಲ್ಲಿ ಭವಿಷ್ಯವಿಲ್ಲ. ಹೈಕಮಾಂಡ್ ಈ ಬಾರಿಯ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಹರಿಕೃಷ್ಣ ಬಂಟ್ವಾಳ ಹಾಗೂ ಎಂ.ಎ.ಗಫೂರ್ ಉಪಸ್ಥಿತರಿದ್ದರು.

ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ, ಕಿರು ತೆರೆ ನಟ, ವಿಶ್ವಕರ್ಮ ಸಮಾಜದ ಮುಂದಾಳು ಕೆ.ಪಿ.ನಂಜುಂಡಿ ಅವರು ಮಾ.7 ರಂದು ಹೆಗ್ಗುಂಜೆ ಗ್ರಾಮದ ಮಂದರ್ತಿ ಪರಿಸರದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರಿಗೆ ಮತ ನೀಡುವಂತೆ ಮತದಾರರನ್ನು ವಿನಂತಿಸಿದರು.
ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಕಿಶೋರ್ ಕುಮಾರ್ ಶೆಟ್ಟಿ, ಪ್ರಭಾಕರ ಆಚಾರ್ಯ, ನಾಗರಾಜ ಆಚಾರ್ಯ, ಉಪೇಂದ್ರ ಆಚಾರ್ಯ, ದಯಾನಂದ ಆಚಾರ್ಯ ಮೊದಲಾದವರು ಈ ಸಂದರ್ಭದಲ್ಲಿ ನಂಜುಂಡಿ ಜೊತೆ ಇದ್ದರು. ಚಿತ್ರಗಳು: ಶ್ರೀರಾಮ ದಿವಾಣ.