ಉಡುಪಿ: ಇಡೀ ಉಡುಪಿ ಜಿಲ್ಲೆಯ ವಿರೋಧ ಪಕ್ಷಗಳ ಪ್ರತಿನಿಧಿಯಾಗಿ ಸದನದಲ್ಲಿ ಕೆಲಸ ಮಾಡುವ ಜವಾಬ್ದಾರಿಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಮತದಾರರು ಈ ಬಾರಿ ಬಿಜೆಪಿಯ ವಿ.ಸುನಿಲ್ ಕುಮಾರ್ ಅವರಿಗೆ ವಹಿಸಿಕೊಟ್ಟಿದ್ದಾರೆ. ಇದೇ ಕೆಲಸವನ್ನು ಕಳೆದ ಬಾರಿ ಕಾರ್ಕಳ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಎಚ್.ಗೋಪಾಲ ಭಂಡಾರಿಯವರ ಹೆಗಲಿಗೆ ಹಾಕಿದ್ದರು.
ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಈ ಐದರ ಪೈಕಿ ನಾಲ್ಕರಲ್ಲಿ ಕಳೆದ ಆಡಳಿತಾವಧಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜಯಿಯಾಗಿದ್ದರೆ, ಕಾರ್ಕಳದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದರು. ಕಾರ್ಕಳದಲ್ಲಿ ಕಾಂಗ್ರೆಸ್ ನ ಗೋಪಾಲ ಭಂಡಾರಿ ಜಯ ಸಾಧಿಸಿದ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಈ ಸಲ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯಿಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದು, ಕಾರ್ಕಳದಲ್ಲಿ ವಿರೋಧಿ ಬಿಜೆಪಿ ಅಭ್ಯರ್ಥಿ ವಿಜಯಿಯಾಗಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಕಿಶೋರ್ ಕುಮಾರ್ ಹಾಗೂ ಕಾಪು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ವಸಂತ ವಿ.ಸಾಲಿಯಾನ್ ಸಹಿತ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್, ಬಿಎಸ್ಪಿ, ಎಸ್ ಡಿಪಿಐ, ಬಿಎಸ್ಪಿ, ಜೆಡಿಯು, ಸಿಪಿಐಎಂ ಪಕ್ಷಗಳ ಮತ್ತು ಪಕ್ಷೇತರರು ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದಾರೆ. ಜಿಲ್ಲೆಯ ಯಾವುದೇ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷಕ್ಕಾಗಲೀ, ಬಿಜೆಪಿಗಾಗಲೀ ಇತರರ ಸ್ಪರ್ಧೆಯಿಂದಾಗಿ ಸೋಲುಂಟಾಗಿಲ್ಲ. ಉಡುಪಿಯಲ್ಲಿ ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್, ಬೈಂದೂರಿನಲ್ಲಿ ಕಾಂಗ್ರೆಸ್ ನ ಗೋಪಾಲ ಪೂಜಾರಿ, ಕುಂದಾಪುರದಲ್ಲಿ ಪಕ್ಷೇತರ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಪುವಿನಲ್ಲಿ ಕಾಂಗ್ರೆಸ್ ನ ವಿನಯ ಕುಮಾರ್ ಸೊರಕೆ ಹಾಗೂ ಕಾರ್ಕಳದಲ್ಲಿ ಬಿಜೆಪಿಯ ಸುನಿಲ್ ಕುಮಾರ್ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಗೆದ್ದ ಅಭ್ಯರ್ಥಿಗಳ ಎದುರು ನೇರವಾಗಿ ಪ್ರತಿಸ್ಪರ್ಧೆ ನೀಡಿ ಸೋಲುಂಡ ಅಭ್ಯರ್ಥಿಗಳಿಗೆ ಸೋಲಿಗೆ ಮೂರನೇ ಪಕ್ಷದ ಅಥವಾ ಪಕ್ಷೇತರ ಅಭ್ಯರ್ಥಿಯ ಸ್ಪರ್ಧೆಯೇ ಕಾರಣ ಅಲ್ಲದಿರುವುದು ಈ ಸಲದ ವಿಶೇಷಗಳಲ್ಲಿ ಒಂದು. ಕಾಪುವಿನಲ್ಲಿ ಮಾಜಿ ಸಚಿವ, ಜೆಡಿಎಸ್ ಅಭ್ಯರ್ಥಿ ವಸಂತ ಸಾಲಿಯಾನ್ ಹಾಗೂ ಎಸ್ ಡಿಪಿಐನ ಅಬ್ದುಲ್ ಹಕೀಂ ಇವರ ಸ್ಪರ್ಧೆಯಿಂದಾಗಿ ಕಾಂಗ್ರೆಸ್ ನ ವಿನಯ ಕುಮಾರ್ ಸೊರಕೆ ಸೋಲಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಈ ಅಂದಾಜು ಸುಳ್ಳಾಗಿದೆ. ಸಾಲ್ಯಾನ್ 4,327 ಮತ್ತು ಅಬ್ದುಲ್ ಹಕೀಂ 2,171 ಮತಗಳನ್ನು ಪಡೆದಿದ್ದಾರೆ. ಆದರೂ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೊರಕೆ ಸೋಲಲಿಲ್ಲ. ಬದಲಾಗಿ 1,855 ಮತಗಳ ಅಂತರದಿಂದ ಗೆದ್ದಿದ್ದಾರೆ.
ಉಡುಪಿಯಲ್ಲಿ ಎಸ್ ಡಿಪಿಐ ಬೆಂಬಲದೊಂದಿಗೆ ಸ್ಪರ್ಧಿಸಿದ ಬಿಎಸ್ಪಿಯ ವಿ.ಮಂಜುನಾಥ್ ಪಡೆದ ಮತ ಕೇವಲ 986. ದಸಂಸದ ಮೂರು ಬಣಗಳು, ಸಮತಾ ಸೈನಿಕ ದಳ ಮಂಜುನಾಥರಿಗೆ ಬೆಂಬಲ ವ್ಯಕ್ತಪಡಿಸಿತ್ತು. ಈ ಸಂಘಟನೆಗಳಿಗೆ ಸೇರಿದ ಸದಸ್ಯರ, ಕುಟುಂಬದವರ ಮತಗಳು ಮತ್ತು ಎಸ್ ಡಿಪಿಐ ಸದಸ್ಯರ ಹಾಗೂ ಇವರ ಕುಟುಂಬದವರ ಮತಗಳೇ ಬಿಎಸ್ಪಿ ಅಭ್ಯರ್ಥಿಗೆ ಲಭಿಸಿಲ್ಲ ಎನ್ನುವುದು ಈ ಫಲಿತಾಂಶದಿಂದ ಸ್ಪಷ್ಟವಾಗುವ ಅಂಶ.
- sunil1
- haladi 11
- gopal pujari 3












