Posts Tagged ‘jayaprakash hegde’

ಉಡುಪಿ: ಅಕ್ಟೋಬರ್ 1 ರಂದು ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಉಡುಪಿ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಆ ದಿನದ ಕಾರ್ಯಕ್ರಮಗಳ ಬಗ್ಗೆ ಕೆಲವೊಂದು ಗೊಂದಲ ನಿರ್ಮಾಣವಾಗಿರುವುದು ಮತ್ತು ಉಡುಪಿ ಶಾಸಕ ರಘುಪತಿ ಭಟ್ ಬಗ್ಗೆ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷರಾದ ಎ.ಜಿ.ಕೊಡ್ಗಿ ಅಸಮಾಧಾನಗೊಂಡಿರುವುದು ಬಹಿರಂಗಕ್ಕೆ ಬಂದಿದೆ.
ಇಂದು ಬೆಳಗ್ಗೆ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಎ.ಜಿ.ಕೊಡ್ಗಿ ನಡೆಸಿದ
ಮಾಧ್ಯಮಗೋಷ್ಟಿಯಲ್ಲಿ ಈ ವಿಷಯ ಬೆಳಕಿಗೆ ಬಂತು.
ಅಕ್ಟೋಬರ್ ಒಂದರಂದು ಮುಖ್ಯಮಂತ್ರಿಗಳಿಗೆ ಬೇರೆ ಕಾರ್ಯಕ್ರಮ ನಿಗದಿಯಾಗಿತ್ತು. ನಮ್ಮ ಉಡುಪಿಯ ಕಾರ್ಯಕ್ರಮಗಳಿಗೆ ಅವರು ಮೊದಲು ಒಪ್ಪಿಗೆ ನೀಡಿರಲಿಲ್ಲ. ತಾನು ಒತ್ತಡ ಹಾಕಿದ ಬಳಿಕ ಅವರ ನಿಗದಿತ ಕಾರ್ಯಕ್ರಮವನ್ನು ಮುಂದೂಡಿ, ಉಡುಪಿ ಕಾರ್ಯಕ್ರಮಗಳಿಗೆ ಒಪ್ಪಿಗೆ ನೀಡಿದರು. ಆ ಕಾರ್ಯಕ್ರಮದ ಪ್ರಕಾರ ಬೆಳಗ್ಗೆ ಮುಖ್ಯಮಂತ್ರಿಗಳು ನೇರವಾಗಿ
ಅಮಾಸೆಬೈಲುವಿಗೆ ಆಗಮಿಸಿ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಸಮಾರಂಭಗಳಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ಇದೀಗ ಶಾಸಕ ಭಟ್ ಅವರಿಂದಾಗಿ ಶೆಟ್ಟರ್ ಅವರ ಬೆಳಗ್ಗಿನ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದೆ. ಮೊದಲಿಗೆ ಉಡುಪಿಯಲ್ಲಿ ಖಾಸಗಿ
ಕಾರ್ಯಕ್ರಮವೊಂದರಲ್ಲಿ ಶೆಟ್ಟರ್ ಅವರು ಭಾಗವಹಿಸಬೇಕಾಗಿದೆ. ಇದರಿಂದಾಗಿ
ಗೊಂದಲವುಂಟಾಗಿದೆ ಎಂದು ಕೊಡ್ಗಿ ಹೇಳಿಕೊಂಡರು.
ಜಗದೀಶ್ ಶೆಟ್ಟರ್ ಅವರು ಬಜಪೆಯಿಂದ ರಸ್ತೆ ಮೂಲಕ ಉಡುಪಿಗೆ ಆಗಮಿಸುತ್ತಾರೋ, ಹೆಲಿಕಾಫ್ಟರ್ ಮೂಲಕ ಆಗಮಿಸುತ್ತಾರೋ ಎನ್ನುವುದು ಸ್ಪಷ್ಟವಾಗಬೇಕಾಗಿದೆ. ಬೆಳಗ್ಗೆ 9 ಗಂಟೆಗೆ ಉಡುಪಿ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ
ಅಮಾಸೆಬೈಲುವಿಗೆ ಯಾವುದರ ಮೂಲಕ ಆಗಮಿಸುತ್ತಾರೆ ಎನ್ನುವುದೂ ಇನ್ನಷ್ಟೇ
ಸ್ಪಷ್ಟವಾಗಬೇಕಾಗಿದೆ. ಅಮಾಸೆಬೈಲು ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ಎಂದು ನಿರ್ಧರಿಸಲಾಗಿದೆ. ಉಡುಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ 10 ಗಂಟೆಗೆ ಅಮಾಸೆಬೂಲು ಕಾರ್ಯಕ್ರಮಕ್ಕೆ ಆಗಮಿಸಲು ಸಿಎಂ ಅವರಿಗೆ ಕಷ್ಟ ಎಂದು ಕೊಡ್ಗಿ ಆತಂಕ
ವ್ಯಕ್ತಪಡಿಸಿದರು.
ಅಮಾಸೆಬೈಲಿನಲ್ಲಿ ನಡೆಯುವುದು ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಪೋಲೀಸ್ ಇಲಾಖೆ ಮತ್ತು ಗ್ರಾ.ಪಂ.ಗಳ ಕಾರ್ಯಕ್ರಮ. 9 ಗಂಟೆಗೆ ಉಡುಪಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸಿಎಂ ಅವರೇನೋ ಅಮಾಸೆಬೈಲ್ ಗೆ ಹೆಲಿಕಾಫ್ಟರ್ ನಲ್ಲಿ
ಬಂದಿಳಿಯಬಹುದು. ಆದರೆ, ಇದೇ ಸಮಯಕ್ಕೆ ಅಧಿಕಾರಿಗಳು ಅಮಾಸೆಬೈಲಿಗೆ ಆಗಮಿಸಲು ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಉದ್ಭವಿಸಿವೆ ಎಂದು ಕೊಡ್ಗಿ ಕಳವಳ ವ್ಯಕ್ತಪಡಿಸಿದರು. ಸಿಎಂ ಉಡುಪಿಗೆ ಆಗಮಿಸುವಾಗ ಜಿಲ್ಲಾಡಳಿತದ ಅಧಿಕಾರಿಗಳು ಉಡುಪಿಯಲ್ಲಿ ಅವರ ಜೊತೆ ಇರಲೇ ಬೇಕಾಗುತ್ತದೆ. 9 ಗಂಟೆಗೆ ಉಡುಪಿಯಲ್ಲಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸಿಎಂ ಏನೋ ಹೆಲಿಕಾಫ್ಟರ್ ನಲ್ಲಿ ತಡವಾಗಿ ಅಮಾಸೆಬೈಲಿಗೆ ಆಗಮಿಸಿ
ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದು. ಆದರೆ, ಇದೇ ಸಮಯಕ್ಕೆ ಡಿಸಿ, ಜಿ.ಪಂ.ಸಿಇಓ, ಎಸ್ ಪಿ ಮೊದಲಾದವರು ಅಮಾಸೆಬೈಲಿಗೆ ಆಗಮಿಸಲು ಸಾಧ್ಯವೇ ?, ಅಮಾಸೆಬೈಲಿನಲ್ಲಿ
ನಡೆಯುತ್ತಿರುವುದು ಜಿಲ್ಲಾಡಳಿತ, ಜಿ.ಪಂ., ಪೋಲೀಸ್ ಇಲಾಖೆಯದೇ ಕಾರ್ಯಕ್ರಮ ಅಲ್ಲವೇ ಎಂದು ಎ.ಜಿ.ಕೊಡ್ಗಿ ಪ್ರಶ್ನಿಸಿದರು.
ಉಡುಪಿ ಶಾಸಕರಾದ ರಘುಪತಿ ಭಟ್ ರವರು ಅ.1 ರಂದು ಬೆಳಗ್ಗೆ 9 ಗಂಟೆಗೆ ಉಡುಪಿ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುವಂತೆ
ಮಾಡಿರುವುದರಿಂದಾಗಿ ಗೊಂದಲವಾಗಬಹುದು ಎಂಬ ಬಗ್ಗೆ ಈಗಾಗಲೇ ತಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ನಿರ್ಮಾಣಗೊಂಡಿರುವ ಸಣ್ಣದೊಂದು ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಪಶ್ಚಿಮ ವಲಯದ ಐಜಿಪಿ ಅವರು ಸಿಎಂ ಜೊತೆಗೆ ಮಾತಾಡಲಿದ್ದಾರೆ ಎಂದು ಕೊಡ್ಗಿ ತಿಳಿಸಿದರು.
ಅ.1 ರಂದು ಅಮಾಸೆಬೈಲು ಗ್ರಾಮವನ್ನು ಸೋಲಾರ್ ಗ್ರಾಮವನ್ನಾಗಿ ಅನುಷ್ಠಾನಗೊಳಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಗ್ರಾಮವೊಂದನ್ನು ಸೋಲಾರ್ ಗ್ರಾಮವನ್ನಾಗಿ ಪರಿವರ್ತಿಸುವುದು ರಾಜ್ಯದಲ್ಲಿಯೇ ಪ್ರಥಮ ಎಂದು ಕೊಡ್ಗಿ
ಮಾದ್ಯಮಗೋಷ್ಟಿಯಲ್ಲಿ ತಿಳಿಸಿದರಲ್ಲದೆ, ಈ ಬಗ್ಗೆ ಮಾಹಿತರಿಯನ್ನು ನೀಡಿದರು.

ಉಡುಪಿ: ಇಲ್ಲಿಗೆ ಸಮೀಪದ ಉದ್ಯಾವರದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಇಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಸಂಸದ ಜಯಪ್ರಕಾಶ್ ಹೆಗ್ಡೆ ಸಂಘವನ್ನು ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲರಾದ ಡಾ. ಯು.ಎನ್.ಪ್ರಸಾದ್, ಉಪ ಪ್ರಾಂಶುಪಾಲರಾದ ಡಾ.ಕೆ.ರಾಮಚಂದ್ರ, ವಿದ್ಯಾರ್ಥಿ ನಾಯಕರು ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಉಡುಪಿ: ಇತರ ಧರ್ಮಗಳನ್ನು, ಧರ್ಮಗ್ರಂಥಗಳನ್ನು ಖಂಡಿಸಿ, ತಮ್ಮ ಧರ್ಮವನ್ನು, ಧರ್ಮಗ್ರಂಥ ಮಾತ್ರ ಶೇಷ್ಠ ಎಂದು ಮಂಡಿಸುವುದು ಧರ್ಮವಲ್ಲ. ಧರ್ಮ ಮತ್ತು ಎಲ್ಲಾ ಧರ್ಮಗಳ ಗ್ರಂಥಗಳೂ ಹೂಗುಚ್ಛ ಇದ್ದಂತೆ. ಇದನ್ನು ಅರಿತರೆ ಸಹ ಜೀವನ ಸಾಧ್ಯ. ಬದುಕು, ಇತರರನ್ನು ಬದುಕಗೊಡು ಎಂಬುದು ವಿಶ್ವ ಶಾಂತಿಯ ಸಂದೇಶ. ತ್ಯಾಗದ ಮಾತುಗಳು ಇದೀಗ ಎಲ್ಲಾ ಕಡೆಯಿಂದ ಕೇಳಿ ಬರುತ್ತಿದೆ. ಈ ತ್ಯಾಗ ಶಾಂತಿಗೆ ಬಳಕೆಯಾಗಬೇಕು. ‘ಕುರ್ಆನ್’ ಶಾಂತಿಯ ಸಂದೇಶ ನೀಡುವ ಗ್ರಂಥವಾಗಿದೆ. ಆದರೂ ಇಂದು ಮುಸ್ಲೀಮರ ಹೆಸರುಗಳು ಭಯೋತ್ಪಾದನೆಯಂಥ ಕೃತ್ಯಗಳಲ್ಲಿ ಕೇಳಿಬರುತ್ತಿರುವುದು ತನಗೆ ದಿಗ್ಭ್ರಮೆ ಮೂಡಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದರು. ಉಡುಪಿ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ, ಉಡುಪಿಯ ಫೋರಮ್ ಫಾರ್ ಹ್ಯುಮ್ಯಾನಿಟಿ ಆಶ್ರಯದಲ್ಲಿ ಇಂದು ಸಂಜೆ ನಡೆದ ಬೆಂಗಳೂರಿನ ಮಾಧ್ಯಮ ಪ್ರಕಾಶನ ಪ್ರಕಟಿಸಿದ ‘ಕುರ್ಆನ್’ ಗ್ರಂಥದ ಕನ್ನಡ ಅನುವಾದಿತ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ಹಿರಿಯ ಕವಿ ಪದ್ಮಶ್ರೀ, ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಕುರ್ಆನ್ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದ ‘ವಾರ್ತಾಭಾರತಿ’ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಕೃತಿ ಪರಿಚಯ ಮಾಡಿದರು. ಉಡುಪಿ ಶೋಕಮಾತಾ ಇಗರ್ಜಿಯ ಧರ್ಮಗುರುಗಳಾದ ರೆ.ಫಾ.ಫ್ರೆರ್ರಿಕ್ ಮಸ್ಕರೇನಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಲಯನ್ಸ್ ಜಿಲ್ಲೆ 317 ಸಿ ಜಿಲ್ಲಾ ಗವರ್ನರ್ ಡಾ.ಕೆ.ಮಧುಸೂದನ ಹೆಗ್ಡೆ, ಉದ್ಯಮಿ ಡಾ.ಜಿ.ಶಂಕರ್ ಹಾಗೂ ಫೋರಮ್ ಫಾರ್ ಹ್ಯುಮ್ಯಾನಿಟಿ ಸಂಚಾಲಕ ಮುಹಮ್ಮದ್ ಯಾಸೀನ್ ಮಲ್ಪೆ ಉಪಸ್ಥಿತರಿದ್ದರು. ಅಬ್ದುಲ್ ರಝಾಕ್ ಕಾರ್ಯಕ್ರಮ ನಿರ್ವಹಿಸಿದರು. ಅಬ್ದುಲ್ ರೆಹಮಾನ್ ಪರ್ಕಳ ಸ್ವಾಗತಿಸಿದರು.
ಕೃತಿ ಬಿಡುಗಡೆ ಸಮಾರಂಭದ ಬಳಿಕ ಈದ್ ಸೌಹಾರ್ದ ಕೂಟ ಮತ್ತು ಈದ್ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಕಾಂಗ್ರೆಸ್ ಮುಖಂಡ ಮಂಜುನಾಥ ಉದ್ಯಾವರ ಇನ್ನಿಲ್ ಲ

Posted: August 29, 2012 in Uncategorized
Tags: , , , , , , , , , , , , , , , , , , , , , , , , , , , , , , , , , , , , , , , , , , , , , , , , , , , , , , ,

ಉಡುಪಿ: ಏಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಅವರ ಆಪ್ತ ಕಾರ್ಯದರ್ಶಿ ಮತ್ತು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಉದ್ಯಾವರ (56) ಇಂದು ಮುಂಜಾನೆ ಗಂಟೆ 4.45 ಕ್ಕೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದೊಂದು ವರ್ಷದಿಂದ ಅನಾರೋಗ್ಯಕ್ಕೀಡಾಗಿದ್ದ ಮಂಜುನಾಥ್ ಅವರು, ಯಾವುದೇ ವೈದ್ಯಕೀಯ ಚಿಕಿತ್ಸೆಗೂ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ರಾಧಾ, ಮಗಳು ಕು.ಸರ್ವಮಂಗಳಾ, ಖ್ಯಾತ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಸಹಿತ ನಾಲ್ವರು ಸಹೋದರರು ಹಾಗೂ ಮೂವರು ಸಹೋದರಿಯರು ಮತ್ತು ಅಪಾರ ಬಂದು ಬಳಗವನ್ನು ಬಿಟ್ಟಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಆ.30 ರಂದು ಗಂಟೆ 11.30 ಕ್ಕೆ ಉದ್ಯಾವರ ಸಾರ್ವಜನಿಕ ಹಿಂದೂ ರುದ್ರಭೂಮಿ ಮುಕ್ತಧಾಮದಲ್ಲಿ ನಡೆಯಲಿದೆ. ಬೆಳಗ್ಗೆ ಗಂಟೆ ಹತ್ತರಿಂದ ಮರತದೇಹವನ್ನು ಸ್ಥಳೀಯ ಶಾಲಾ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಇದೇ ಸಮಯದಲ್ಲಿ ಶ್ರದ್ಧಾಂಜಲಿ ಸಭೆಯೂ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಕಟಣೆ ತಿಳಿಸಿದೆ. ಉದ್ಯಾವರ ಫ್ರೆಂಡ್ಸ್ ಸರ್ಕಲ್ ನ ಗೌರವ ಅಧ್ಯಕ್ಷರು, ಉದ್ಯಾವರ ಸಾರ್ವಜನಿಕ ಹಿಂದೂ ರುದ್ರಭೂಮಿ ಸಾರ್ವಜನಿಕ ಪ್ರತಿಷ್ಠಾನದ ಅಧ್ಯಕ್ಷರು, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಕೇದಾರ ಬ್ರಹ್ಮಲಿಂಗೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಗುಡ್ಡೆಯಂಗಡಿ ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರು, ಪಿತ್ರೋಡಿ ಮಹಾಕಾಳಿ ಶನೀಶ್ವರ ದೇವಾಲಯ ಅಭಿವೃದ್ದಿ ಸಮಿತಿ ಗೌರವ ಅಧ್ಯಕ್ಷರು ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಹೊಂದಿ ಜನಾನುರಾಗಿಯಾಗಿದ್ದವರು ಮಂಜುನಾಥ ಉದ್ಯಾವರ.
ಇವರ ನಿಧನಕ್ಕೆ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ, ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫೆರ್ನಾಂಡಿಸ್, ಬಿ.ಜನಾರ್ದನ ಪೂಜಾರಿ, ರಾಜ್ಯ ವಿಧಾನಸಭೆಯ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಅಭಯಚಂದ್ರ ಜೈನ್, ಏಐಸಿಸಿ ಕಾರ್ಯದರ್ಶಿ ವಿನಯಕುಮಾರ್ ಸೊರಕೆ, ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ಗೋಪಾಲ ಭಂಡಾರಿ, ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವ ವಸಂತ ಸಾಲ್ಯಾನ್, ಪ್ರಮೋದ್ ಮಧ್ವರಾಜ್, ಅಶೋಕ್ ಕುಮಾರ್ ಕೊಡವೂರು, ಬಿ.ನರಸಿಂಹ ಮೂರ್ತಿ, ಎಂ.ಎ.ಗಫೂರ್, ದಿನೇಶ್ ಪುತ್ರನ್ ಸಹಿತ ಹಲವರು ತೀವ್ರ ಸಂತಾಪ
ವ್ಯಕ್ತಪಡಿಸಿದ್ದಾರೆ.

ಉಡುಪಿ: ರಾಜ್ಯದ ಬಿಜೆಪಿ ಸರಕಾರದ ದುರಾಚಾರದಿಂದ ಬೇಸತ್ತ ಮತದಾರ ಒಗ್ಗಟ್ಟಿನಿಂದ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಗೆ ಮತ ನೀಡಿದ್ದಾನೆ. ಮತದಾರ ನೀಡಿದ ತೀರ್ಪಿನ್ನು ಸ್ವಾಗತಿಸುತ್ತೇವೆ. ಆದರೆ, ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಜೆಡಿಎಸ್ ವಿರುದ್ದ ಬಹಳಷ್ಟು ಅಪಪ್ರಚಾರ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಪೂರಕವಾದ ಬೆಳವಣಿಗೆಯಲ್ಲ ಎಂದು ಜೆಡಿಎಸ್ ರಾಜ್ಯ ನಾಯಕ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.
ಉಡುಪಿಯ ಖಾಸಗಿ ಹೋಟೇಲೊಂದರಲ್ಲಿ ಮಾ.26 ರಂದು ನಡೆಸಿದ ಮಾದ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಈ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಲ್ಲ. ರಾಜ್ಯದಲ್ಲಿ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಹೇಳಿದ ಮಹೇಂದ್ರ ಅವರು, ಜೆಡಿಎಸ್ ನ ಸೋಲಿಗೆ ಯಾರೂ ಹೊಣೆಯಲ್ಲ. ಸೋಲಿನ ಬಗ್ಗೆ ಅವಲೋಕನ ಮಾಡಿಕೊಂಡು ವಿಧಾನಸಭಾ ಚುನಾವಣೆಗಾಗಿ ಪಕ್ಷವನ್ನು ಸಂಘಟಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮಹಾ ಪ್ರಧಾನ ಕಾರ್ಯದರ್ಶಿ ಲೂಯಿಸ್ ಲೋಬೋ, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಕೆಂಚನೂರು ಶಾಲಿನಿ ಶೆಟ್ಟಿ, ಯುವ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಹಾಗೂ ರಿಝ್ವಾನ್ ಉಪಸ್ಥಿತರಿದ್ದರು.

ಉಡುಪಿ: ಮತದಾರರ ಗೌರವ ಮತ್ತು ಘನತೆಗೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ ಮತದಾರರಿಗೆ ಸ್ಪಷ್ಟ ಭರವಸೆ ನೀಡಿದ ನೂತನ ಸಂಸದ ಕಾಂಗ್ರೆಸ್ ನ ಕೆ.ಜಯಪ್ರಕಾಶ್ ಹೆಗ್ಡೆಯವರು, ಮಾರ್ಚ್ 26 ರಂದು ಪ್ರಮಾಣ ವಚನ ಸ್ವೀಕರಿಸುವುದಾಗಿ ತಿಳಿಸಿದರಲ್ಲದೆ, 5 ವರ್ಷಗಳ ಅವಧಿಯಲ್ಲಿ ಮಾಡಬೇಕಾದುದದನ್ನು ಮುಂದಿನ 2 ವರ್ಷಗಳ ಅವಧಿಯಲ್ಲಿ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಆಶ್ವಾಸನೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಮಾ.25 ರಂದು ಉಡುಪಿಯ ಕಲ್ಸಂಕದಲ್ಲಿ ನಡೆದ ಮತದಾರರಿಗೆ ಕೃತಜ್ನತಾರ್ಪಣಾ ಸಮಾರಂಭದಲ್ಲಿ ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಕೃತಜ್ನತೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಮಂತ್ರಿ ಎಂ.ವೀರಪ್ಪ ಮೊಯಿಲಿ ಅವರು, ನೂರು ತಪ್ಪು ಮಾಡುವವರೆಗೆ ತಾಳ್ಮೆಯಿಂದ ಇದ್ದು ನೂರ ಒಂದನೇ ತಪ್ಪು ಮಾಡಿದಾಗ ಕೃಷ್ಣ ಸುದರ್ಶನ ಚಕ್ರ ಉಪಯೋಗಿಸಿ ಶಿಶುಪಾಲನನ್ನು ವಧಿಸಿದಂತೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರು ಮತದಾನವೆಂಬ ಸುದರ್ಶನ ಚಕ್ರ ಉಪಯೋಗಿಸಿ ಬಿಜೆಪಿಯನ್ನು ಸೋಲಿಸುವ ಮೂಲಕ ಶಿಕ್ಷೆ
ನೀಡಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರ ಮಂತ್ರಿ ಮುನಿಯಪ್ಪ, ಏಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಆಸ್ಕರ್ ಫೆರ್ನಾಂಡಿಸ್, ಮೇಜರ್ ವೇದಪ್ರಕಾಶ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಕೇಂದ್ರ ಮಂತ್ರಿ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯದರ್ಶಿಗಳಾದ ಕೆ.ಪಿ.ನಂಜುಂಡಿ, ಎಂ.ಎ.ಗಫೂರ್, ಮಾಜಿ ಸಂಸದೆ ತೇಜಸ್ವಿನಿ ಗೌಡ, ಶಾಸಕರುಗಳಾದ ಗೋಪಾಲ ಭಂಡಾರಿ, ಯು.ಟಿ.ಖಾದರ್, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ವಿಜಯಕುಮಾರ್ ಶೆಟ್ಟಿ, ಬಸವರಾಜ್, ಪಕ್ಷದ ಮುಖಂಡರುಗಳಾದ ಪ್ರಮೋದ್ ಮಧ್ವರಾಜ್, ನೀರೆ ಕರಷ್ಣ ಶೆಟ್ಟಿ, ಬಿರ್ತಿ ರಾಜೇಶ್ ಶೆಟ್ಟಿ, ಸುಧೀರ್ ಹೆಗ್ಡೆ, ಗಂಗಾಧರ ಸುವರ್ಣ, ವಂಡ್ಸೆ ಸಂಜೀವ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಮುರಳಿ ಶೆಟ್ಟಿ, ನಿಖಿಲ್, ಸರಳಾ ಕಾಂಚನ್, ಶ್ಯಾಮಲಾ ಭಂಡಾರಿ, ವೆರೋನಿಕಾ ಕರ್ನೇಲಿಯೋ, ಮೊಯಿದೀನ್ ಬಾವಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾಗಿದ್ದ ಡಿ.ವಿ.ಸದಾನಂದ ಗೌಡ ಅವರು ಅನಿರೀಕ್ಷಿತ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾದ ಹಿನ್ನಲೆಯಲ್ಲಿ, ಅವರ ರಾಜೀನಾಮೆಯಿಂದಾಗಿ ತೆರವಾದ ಲೋಕಸಭಾ ಕ್ಷೇತ್ರಕ್ಕೆ ಮಾ.18 ರಂದು ಚುನಾವಣೆ ನಡೆದು, ಮಾ.21 ರಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ನ ಜಯಪ್ರಕಾಸ್ ಹೆಗ್ಡೆಯವರು ಬಿಜೆಪಿಯ ಸುನಿಲ್ ಕುಮಾರ್ ಅವರನ್ನು 45, 724 ಮತಗಳ ಭಾರೀ ಅಂತರದಿಂದ ಸೋಲಿಸುವ ಮೂಲಕ ಜಯದ ಪ್ರಕಾಶ ಮೂಡಿಸಿದ್ದಾರೆ.
ಕಾಂಗ್ರೆಸ್ ನಾಯಕರು ಹೈಕಮಾಂಡ್ ನ ಕಟ್ಟುನಿಟ್ಟಿನ ಾದೇಶ ಮತ್ತು ಎಚ್ಚರಿಕೆಯಿಂದಾಗಿ ಐಕ್ಯತೆಯಿಂದ ಕೆಲಸ ಮಾಡಿದ್ದು ಮತ್ತು ರಾಜ್ಯದ ಬಿಜೆಪಿ ಸರಕಾರದ ವಿಫಲತೆ, ದುರಾಡಳಿತ, ಹಗರಣಗಳ ಸರಮಾಲೆ, ಬಿಜೆಪಿ ಪಕ್ಷದೊಳಗಿನ ಗೊಂದಲ, ಭಿನ್ನಮತ, ಒಡಕು ಇತ್ಯಾದಿಗಳೆಲ್ಲವೂ ಕಾಂಗ್ರೆಸ್ ನ ಗೆಲುವು ಮತ್ತು ಬಿಜೆಪಿ ಸೋಲಿಗೆ ಕಾರಣವಾಯಿತು.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಇವುಗಳಲ್ಲಿ 4 ಉಡುಪಿ ಜಿಲ್ಲೆಯಲ್ಲಿ ಮತ್ತು 4 ಚಿಕ್ಕಮಗಳೂರು ಜಿಲ್ಲೆಯಲ್ಲಿ ಇವೆ. ಚಿಕ್ಕಮಗಳೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯ ಸುನಿಲ್ ಕುಮಾರ್ ಕಾಂಗ್ರೆಸ್ ನ ಜಯಪ್ರಕಾಸ್ ಹೆಗ್ಡೆಯವರಿಗಿಂತ ಅಧಿಕ ಮತ ಪಡೆದಿದ್ದಾರೆ. ಉಳಿದಂತೆ ಶೃಂಗೇರಿ, ಮೂಡಿಗೆರೆ ಮತ್ತು ತರಿಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಸ್ತುತ ಬಿಜೆಪಿಯವರೇ ಶಾಸಕರಾಗಿದ್ದಾಗಲೂ ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆಯವರು ಬಿಜೆಪಿ ಅಭ್ಯರ್ಥಿಗಿಂತ ಅಧಿಕ ಮತ ಪಡೆದಿದ್ದಾರೆ.
ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಕಳದಲ್ಲಿ ಮಾತ್ರ ಕಾಂಗ್ರೆಸ್ ನ ಗೋಪಾಲ ಭಂಡಾರಿಯವರು ಶಾಸಕರಾಗಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿಗಿಂತ ಹೆಚ್ಚು ಮತ ಪಡೆದಿದ್ದಾರೆ. ಉಳಿದಂತೆ ಬಿಜೆಪಿಯವರೇ ಶಾಸಕರಾಗಿರುವ ಕುಂದಾಪುರ, ಕಾಪು ಮತ್ತು ಉಡುಪಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿರುವುದು ಬಿಜೆಪಿಯ ಎದೆಯಲ್ಲಿ ನಡುಕ ಹುಟ್ಟಿಸಿದೆಯಾದರೆ, ಕಾಂಗ್ರೆಸ್ ನಾಯಕರ ಮನದಲ್ಲಿ ಹೊಸ ಕನಸು ಚಿಗುರಿಸಿದೆ. ಇದು ಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗುವ ಸಾಧ್ಯತೆಯೂ ಇಲ್ಲದಿಲ್ಲ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಯ ವಿ.ಸುನಿಲ್ ಕುಮಾರ್ ಅವರನ್ನು 45,724 ಮತಗಳ ಭಾರೀ ಅಂತರದಿಂದ ಸೋಲಿಸುವ ಮೂಲಕ ವಿಜಯದುಂಧುಬಿ ಮೊಳಗಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆಯವರು 3,98,723 ಮತಗಳನ್ನು ಪಡೆದರೆ, ಸುನಿಲ್ ಕುಮಾರ್ ಅವರು 3,52,999 ಮತಗಳನ್ನು ಪಡೆದು ಪರಾಭವಗೊಂಡರು. ಜೆಡಿಎಸ್ ನ ೆಸ್.ಎಲ್.ಭೋಜೇಗೌಡ ಅವರಿಗೆ, 72,080 ಮತಗಳು, ಸಂಯುಕ್ತ ಜನತಾದಳದ ಕೆ.ಭರತ್ ಅವರಿಗೆ 4,945 ಮತಗಳು, ಪ್ರಜಾಪ್ರಭುತ್ವದ ಪ್ರಜಾಕ್ರಾಂತಿ ಪಕ್ಷದ ಹುಣಸೂರು ಕೆ.ಚಂದ್ರಶೇಖರ್ ಅವರಿಗೆ 3,640 ಮತಗಳು, ಪಕ್ಷೇತರ ಅಭ್ಯರ್ಥಿಗಳಾದ ಅಸಾದುಲ್ಲಾ ಕಟಪಾಡಿ ಅವರಿಗೆ 1,491 ಮತಗಳು, ಕೆ.ಜಯಪ್ರಕಾಶ್ ಹೆಗ್ಡೆ ಕೊಕ್ಕರ್ಣೆ ಅವರಿಗೆ 1,755 ಮತಗಳು, ದೀಪಕ್ ರಾಜೇಶ್ ಕುವೆಲ್ಲೊ ಅವರಿಗೆ 1,429 ಮತಗಳು, ರಿಯಾಜ್ ಅಹಮ್ಮದ್ ಅವರಿಗೆ 921 ಮತಗಳು, ವೆಂಕಟೇಶ್ ಎನ್. ಅವರಿಗೆ 1,064 ಮತಗಳು, ಶ್ರೀಧರ ಪೇದೆಮನೆ ಅವರಿಗೆ 1,377 ಮತಗಳು, ಶ್ರೀನಿವಾಸ ಪೂಜಾರಿ ಅವರಿಗೆ 3,293 ಮತಗಳು, ಎಚ್.ಸುರೇಶ್ ಪೂಜಾರಿ ಅವರಿಗೆ 2,177 ಮತಗಳು ಹಾಗೂ ಹರಿ ಶ್ಯಾನುಭೋಗ್ ಕಟೀಲ್ ಅವರಿಗೆ 6,930 ಮತಗಳು ಲಭಿಸಿವೆ.
ಕಳೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಜಯ ಸಾಧಿಸಿ ಸಂಸತ್ ಸದಸ್ಯರಾದ ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಮಾ.18 ರಂದು ಮರು ಚುನಾವಣೆ ನಡೆದಿತ್ತು. ಮಾ.21 ರಂದು ಉಡುಪಿಯ ಕುಂಜಿಬೆಟ್ಟು ಶಾಲೆಯಲ್ಲಿ ಮತ ಎಣಿಕೆ ನಡೆಯಿತು.
ಆಡಳಿತಾರೂಢ ಬಿಜೆಪಿಯ ಕೈಲಿದ್ದ ಕ್ಷೇತ್ರ ಬಿಜೆಪಿ ಕಳೆದುಕೊಳ್ಳುವ ಮೂಲಕ ರಾಜ್ಯ ಬಿಜೆಪಿಗೆ ಮುಖಭಂಗವಾಗಿದೆ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಇಂದು (ಮಾ.18) ನಡೆದ ಮರು ಮತದಾನದಲ್ಲಿ ಒಟ್ಟು 60 ಶೇಕಡಾ ಮತದಾನವಾಗಿದೆ.
ಚುನಾವಣಾ ವಿಶೇಷಗಳು
-ಮೂಡಬೆಟ್ಟು ವಾರ್ಡ್ ನ ಆದಿ ಉಡುಪಿಯ 117 ನೇ ಮತಗಟ್ಟೆಯಲ್ಲಿ ಮತ್ತು ಪೆರ್ಡೂರು ಬಳಿಯ 25 ನೇ ಮತಗಟ್ಟೆಯಲ್ಲಿ ಬೆಳಗ್ಗೆ ಮತದಾನ ಪ್ರಕ್ರೀಯೆ ಆರಂಭವಾಗುತ್ತಿದ್ದಂತೆಯೇ ಇಲೆಕ್ಟ್ರೋನಿಕ್ಸ್ ಮತ ಯಂತ್ರ ಕೈ ಕೊಟ್ಟ ಕಾರಣ ಮತದಾರರು ಸರತಿ ಸಾಲಿನಲ್ಲಿ ಕೆಲವು ಗಂಟೆಗಳ ಕಾಲ ನಿಲ್ಲಬೇಕಾಗಿಬಂತು.
- ಅಲೆವೂರು ಗ್ರಾಮದ ಪ್ರಗತಿ ನಗರದಲ್ಲಿ ವಾಸವಿದ್ದ ವಲಸೆ ಕಾರ್ಮೀಕರು ಮತದಾನ ಮಾಡಲೆಂದು ಅಲೆವೂರು ನೆಹರೂ ಹೈಸ್ಕೂಲಿನ ಮತಗಟ್ಟೆಗೆ ಬಂದಾಗ ಇವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವೆನ್ನುವುದು ಬಹಿರಂಗಗೊಂಡಿತು. ವಿಷಯ ತಿಳಿದ ನೂರಕ್ಕೂ ಅಧಿಕ ಮಂದಿ ವಲಸೆ ಕಾರ್ಮೀಕರು ಮತಗಟ್ಟೆ ಎದುರು ಪ್ರತಿಭನೆ ನಡೆಸಿದರು.
- ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಶಾತಿಯುತ ಮತದಾನ ನಡೆಯಿತು. ಇಲ್ಲೆಲ್ಲಾ ಎಎನ್ಎಫ್ ಮತ್ತು ಬಿಎಸ್ಎಫ್ ಪಡೆಗಳ ಬಿಗಿ ಪಹರೆ ಏರ್ಪಡಿಸಲಾಗಿತ್ತು. ಸೀತಾನದಿ ಮತಗಟ್ಟೆಯಲ್ಲಿ ಮತದಾನ ಮಾಡಿದ ವ್ಯಕ್ತಿಯೋರ್ವ ಮಾಧ್ಯಮದವರ ಜೊತೆ ಮಾತನಾಡುತ್ತಾ ಹೇಳಿದ್ದು ಹೀಗೆ: ನಾನು ಕಳೆದ ಹಲವು ವರ್ಷಗಳಿಂದ ಮತದಾನ ಮಾಡುತ್ತಿದ್ದೇನೆ. ಆದರೆ, ಇಷ್ಟರವರೆಗೆ ಹೀಗಾಗಿರಲಿಲ್ಲ. ಮತಗಟ್ಟೆಗೆ ಹೋಗಿ ಮತ ಹಾಕಲು ಭಯವಾಯಿತು. ಪೋಲೀಸರ ಮಾತು, ಆದೇಶಗಳು, ಒರಟುತನ ಇತ್ಯಾದಿಗಳು ಭಯವನ್ನು ಹುಟ್ಟಿಸುತ್ತದೆ.
-ಜಿಲ್ಲೆಯ ಹಲವು ಕಡೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಜಕೀಯ ಪಕ್ಷಗಳು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಗಘಿಸಿ ತಮ್ಮ ತಮ್ಮ ಪಕ್ಷಗಳ ಬೂತ್ ಗಳನ್ನು ಹಾಕಿದ್ದರು.
-ಬೂತ್ ಗಳಲ್ಲಿ ಒಂದು ಬಾವುಟ ಮಾತ್ರ ಹಾಕಲು ಅವಕಾಶ ಇತ್ತು. ಆದರೆ, ಹಲವೆಡೆ 2,3,4 ಬಾವುಟಗಳನ್ನು ಪಕ್ಷಗಳು ಬೂತ್ ಗೆ ಹಾಕಿದ್ದರು. ಸಣ್ಣ ಶಾಮಿಯಾನ ಹಾಕಬೇಕಾದಲ್ಲಿ ದೊಡ್ಡ ಶಾಮಿಯಾನ ಹಾಕಲಾಗಿತ್ತು. ಒಂದೆರಡು ಕುರ್ಚಿಗಳನ್ನು ಇರಿಸಲು ಮಾತ್ರ ಅವಕಾಶವಿತ್ತು. ಆದರೆ, ಇಲ್ಲೂ ಸಹ ಹಲವು ಕುರ್ಚಿಗಳನ್ನು ಇರಿಸಲಾಗಿತ್ತು.
-ಬಹುತೇಕ ಕಡೆಗಳಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ವಾಹನಗಳ ಮೂಲಕ ಅವರವರ ಮನೆಗಳಿಂದ ಕರೆದುಕೊಂಡು ಬಂದು ಓಟು ಹಾಕಿಸುತ್ತಿದ್ದರು. ನೀತಿ ಸಂಹಿತೆ ಪ್ರಕಾರ ಹೀಗೆ ಮಾಡುವುದು ನಿಷೇಧಿತ.
-ಮತಗಟ್ಟೆಯ ಹೊರಗಡೆ ಅಂಟಿಸಲಾಗಿದ್ದ ನೋಟೀಸ್ ನಲ್ಲಿ ಓಟಿನ ಕಾಗದವನ್ನು ಮತಪೆಟ್ಟಿಗೆಯಲ್ಲಿ ಹಾಕಬೇಕು, ಹೊರಗಡೆ ಎಲ್ಲಿಗೂ ತೆಗೆದುಕೊಂಡು ಹೋಗಬಾರದು ಎಂಬ ಸೂಚನೆ ಇತ್ತು. ಇದೀಗ ನಡೆಯುತ್ತಿರುವ ಮತದಾನದಲ್ಲಿ ಮತ ಪೆಟ್ಟಿಗೆ ಇಲ್ಲ. ಮತಯಂತ್ರಗಳು ಬಂದಿವೆ ಎಂಬುದು ಚುನಾವಣಾ ಆಯೋಗಕ್ಕೆ ತಿಳಿದಿದೆಯಾದರೂ ಮತ್ತೆ ಮತ್ತೆ ತಪ್ಪು ಮಾಹಿತಿಯನ್ನೇ ಪ್ರಕಟಿಸಿ ವಿತರಿಸುತ್ತಾರೆವ ಎನ್ನುವುದು ಅಧೀಕಾರಿಗಳ ಬೇಜವಾಬ್ದಾರಿ ೆನ್ನುವುದಕ್ಕೆ ಸಾಕ್ಷಿಯಾಗಿದೆ. ಚಿತ್ರಗಳು: ಶ್ರೀರಾಮ ದಿವಾಣ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಮತದಾನದ ದಿನವಾದ ಇಂದು ಮತ್ತು ನಿನ್ನೆ ಸಹ ಮಣಿಪಾಲದಿಂದ ಪ್ರಕಟವಾಗುವ ಪ್ರತಿಷ್ಟಿತ ‘ಉದಯವಾಣಿ’ ದಿನಪತ್ರಿಕೆಯು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಕಾಸಿಗಾಗಿ ಸುದ್ದಿ ಪ್ರಕಟಿಸಿ ಪತ್ರಿಕಾಧರ್ಮಕ್ಕೆ ಅಪಚಾರವೆಸಗಿದೆ.
ಮಾ.18 ರ ಉದಯವಾಣಿಯ ಪುಟ 12 ರಲ್ಲಿ ‘ಸುನಿಲ್ ಕುಮಾರ್ ಗೆ ಎಲ್ಲೆಡೆ ಭಾರೀ ಬೆಂಬಲ’ ಎಂಬ ಸುದ್ದಿಯನ್ನು ಪ್ರಕಟಿಸಿದೆ. ಈ ಸುದ್ದಿ ಕಾಸು ಪಡೆದುಕೊಂಡು ಪ್ರಕಟಿಸಿದ ಸುದ್ದಿ ಎನ್ನುವುದನ್ನು ಯಾರು ಬೇಕಾದರೂ ಹೇಳಬಹುದು.
ಮಾ.17 ರ ಉದಯವಾಣಿಯಲ್ಲಿ ಕಾಂಗ್ರೆಸ್ ನಿಂದ ಕಾಸು ಪಡೆದುಕೊಂಡು ಪ್ರಕಟಿಸಿದ ಎರಡು ಸುದ್ದಿಗಳಿವೆ. ಒಂದು, ‘ಜಯಪ್ರಕಾಸ್ ಹೆಗ್ಡೆ ಪರ ಜನಬೆಂಬಲದ ಮಹಾಪೂರ’, ಇನ್ನೊಂದು, ‘ಕಾಂಗ್ರೆಸ್ ಸರಕಾರದ ಅಭಿವೃದ್ದಿ ಕಾರ್ಯಕ್ರಮ ನಮಗೆ ಶ್ರೀರಕ್ಷೆ. – ಆಸ್ಕರ್ ಫೆರ್ನಾಂಡಿಸ್’.
ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಗೆಲುವಿಗಾಗಿ, ಅಧಿಕಾರಕ್ಕಾಗಿ ಅನೈತಿಕ ಮಾರ್ಗ ಹಿಡಿದಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ? ಈ ಎರಡೂ ರಾಜಕೀಯ ಪಕ್ಷಗಳು ದಿನ ಪತ್ರಿಕೆಗಳಿಗೆ ಮತ್ತು ವಾರ ಪತ್ರಿಕೆಗಳಿಗೆ ಹಾಗೂ ಸ್ಥಳೀಯ ಕೆಲವು ಖಾಸಗಿ ಟಿವಿ ಛಾನೆಲ್ ಗಳಿಗೆ ಅನಧಿಕೃತವಾಗಿ ವಿತರಿಸಿದ ಹಣ ಕೆಲವು ಲಕ್ಷಗಳು. ಈ ಬಗ್ಗೆ ಚುನಾವಣಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ನಡೆಸುವ ದಿಟ್ಟತನ ಪ್ರದರ್ಶಿಸಬೇಕೆಂದು www.udupibits.com ಒತ್ತಾಯಿಸಿದೆ.