Posts Tagged ‘G Rajashekhar’

ಉಡುಪಿ: ದಲಿತ ಚಳುವಳಿ ಕರ್ನಾಟಕದಲ್ಲಿ ಸಾಂಸ್ಕೃತಿಕ ಚಳುವಳಿಯಾಗಿ ಉಳಿದಿದೆಯೇ ಹೊರತು ಇದುವರೆಗೂ ರಾಜಕೀಯ ಚಳುವಳಿಯಾಗಿ ಬೆಳೆದಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕು ಎಂದು ಹಿರಿಯ ಮಾನವ ಹಕ್ಕುಗಳ ಹೋರಾಟಗಾರ ಮೈಸೂರಿನ ಡಾ.ವಿ.ಲಕ್ಷ್ಮಿ ನಾರಾಯಣ್ ಅವರು ಹೇಳಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ಎ.14 ರಂದು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಜಾತಿ ಮುಕ್ತ ಸಂಬಂಧ ವೇದಿಕೆ ಜಂಟಿಯಾಗಿ ಆಯೋಜಿಸಿದ ಆನಂದ ಪಟವದರ್ಧನ್ ನಿರ್ದೇಶನದ ‘ಜೈ ಭೀಮ್ ಕಾಮ್ರೇಡ್’ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು
ಮಾತನಾಡುತ್ತಿದ್ದರು.
ಆನಂದ ಪಟವರ್ಧನ್ ಅವರ ಚಲನಚಿತ್ರಗಳು ಸ್ವಾತಂತ್ರ್ಯೋತ್ತರ ಆಧುನಿಕ ಭಾರತದ
ಚಿತ್ರಣವನ್ನು ಸಮರ್ಥವಾಗಿ ಬಿಚ್ಚಿಡುತ್ತದೆ. ಇದರಿಂದಾಗಿ ಅವರು ಈ ರಂಗದಲ್ಲಿ ಕಹಿಯನ್ನೇ ಅನುಭವಿಸಿದ್ದಾರೆ. ಬಲಪಂಥೀಯರಿಂದ ಉಗ್ರ ಪ್ರತಿಭಟನೆಯನ್ನೇ ಅವರು ಎದುರಿಸಬೇಕಾಗಿ ಬಂದಿದೆ. ಹೋರಾಟಗಾರರಿಗೆ ಹಿಂಸಾವಾದಿಗಳು, ನಕ್ಸಲರು ಎಂದು ಹಣೆಪಟ್ಟಿ ಹಚ್ಚುವುದನ್ನು ಚಿತ್ರದಲ್ಲಿ ಪಟವರ್ಧನ್ ಪ್ರಶ್ನಿಸುತ್ತಾರೆ ಎಂದು ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಚಿಂತಕ ಜಿ.ರಾಜಶೇಖರ್ ಅಭಿಪ್ರಾಯಪಟ್ಟರು.
ಪ್ರೊ.ಹಯವದನ ಮೂಡುಸಗ್ರಿ, ಜಯನ್ ಮಲ್ಪೆ, ಗೋಪಾಲ ಬಿ.ಶೆಟ್ಟಿ, ಸುಂದರ ಸಾರುಕೈ, ಕೆ.ಫಣಿರಾಜ್, ಡಾ.ರತಿ ರಾವ್, ಸುಮಾ ಜೋಸ್ ಮೊದಲಾದವರು ಸಂವಾದದಲ್ಲಿ ಭಾಗವಹಿಸಿದ್ದರು.

ಉಡುಪಿ: ಬ್ರಿಟಿಷ್ ಆಡಳಿತ ಕಾಲದಲ್ಲಿ ಅಸ್ಪೃಶ್ಯರ ಪರ ಹೋರಾಟಗಾರ ಡಾ.ಅಂಬೇಡ್ಕರ್ ಮಹಾನ್ ನಾಯಕರಾಗಲು ಸಾಧ್ಯವಾಯಿತು. ಆದರೆ ಸ್ವತಂತ್ರ ಭಾರತದಲ್ಲಿ ಮತ್ತೊಬ್ಬ ಅಂಬೇಡ್ಕರ್ ರಂಥ ನಾಯಕರನ್ನು ಹುಟ್ಟುಹಾಕಲು, ಬೆಳೆಸಲು ಯಾಕೆ ಯಾವ ಸರಕಾರಗಳಿಗೂ ಸಾಧ್ಯವಾಗಿಲ್ಲ ಎಂದು ಎಲ್ಲರೂ ಚಿಂತಿಸಬೇಕು ಎಂದು ಉದ್ಯಾವರ ಚರ್ಚ್ ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಹೇಳಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ಬನ್ನಂಜೆ ಗಾಂಧಿ ಭವನದಲ್ಲಿ ಇಂದು ಸಂಜೆ ನಡೆದ
ಡಾ.ಬಿ.ಅರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಕೋಮು ಸೌಹಾರ್ದ ವೇದಿಕೆ ಪ್ರಕಟಿಸಿದ ಖ್ಯಾತ ವಿಮರ್ಶಕ ಜಿ.ರಾಜಶೇಖರ್ ಬರೆದ ‘ಬಾಬರಿ ಮಸೀದಿ ಧ್ವಂಸ’ (ಕಳೆದ 20 ವರ್ಷಗಳ ಭಾರತದ ಮತೀಯ ರಾಜಕಾರಣದ ವಿಶ್ಲೇಷಣೆ) ಎಂಬ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಪದವಿ ಪಡೆದ ದಲಿತ ಸಮುದಾಯದ ವಿದ್ಯಾವಂತರಿಗೆ ಉದ್ಯೋಗ ನೀಡಲು ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ ವಿಲಿಯಂ ಮಾರ್ಟಿಸ್, 16 ಸಾವಿರ ಬ್ಯಾಗ್ ಲಾಗ್ ಹುದ್ದೆಗಳನ್ನು ಇನ್ನು ಸರಕಾರ ತುಂಬಿಲ್ಲವೆಂದು ಟೀಕಿಸಿದರು. ಯಾವ ಸರಕಾರವಿರಲಿ, ಯಾವ ಪಕ್ಷಗಳೇ ಇರಲಿ ದಲಿತರನ್ನು ಮೆಲೆ ಬರಲು ಬಿಡುತ್ತಿಲ್ಲವೆಂದೂ ದೂರಿದರು.
ಹಿರಿಯ ಸಾಹಿತಿ ಗೋಪಾಲ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ.ರಾಜಶೇಖರ್ ಹಾಗೂ ಜಯನ್ ಮಲ್ಪೆ ಉಪಸ್ಥಿತರಿದ್ದರು.

ಉಡುಪಿ: ಅಯೋಧ್ಯೆಯಲ್ಲಿ 1992 ರ ಡಿಸೆಂಬರ್ 6 ರಂದು 2 ಲಕ್ಷ ಕರಸೇವಕರು ಬಲಹೀನ ಮತ್ತು ಅಸಹಾಯಕ ಸಮುದಾಯದ ಮೇಲೆ ನಡೆಸಿದ್ದು ಏಕಪಕ್ಷೀಯ ಹಿಂಸಾಚಾರವೇ ಹೊರತು ಮತ್ತೇನೂ ಅಲ್ಲ. ಈ ಕರಸೇವಕರು ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕ ಅಯೋಧ್ಯೆಯ 134 ಮನೆ, 23 ಮಸೀದಿ, 11 ಮಜಾರ್, 3 ಈದ್ಗಾ, 2 ಮದ್ರಸ, ಒಂದು ದೇವಾಲಯವನ್ನು ಬೆಂಕಿ ಕೊಟ್ಟು ನಾಶಮಾಡಿದರು. ಮಾತ್ರವಲ್ಲ, ಬಾಬರಿ ಮಸೀದಿಯ ಕಟ್ಟ ಕಡೆಯ ಇಮಾಮರ ಇಬ್ಬರು ಮಕ್ಕಳ ಸಹಿತ 13 ಜನರನ್ನು ಜೀವಂತ ದಹಿಸಿದರು. ಇದು ಸುದ್ದಿಯಾಗಲೇ ಇಲ್ಲ ಎಂದು ಹಿರಿಯ ಚಿಂತಕ ಮತ್ತು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಹೇಳಿದರು. ಅಯೋಧ್ಯೆಯಲ್ಲಿ ಕರಸೇವಕರಿಂದ ಧ್ವಂಸಗೊಳಿಸಲ್ಪಟ್ಟ ಮಸೀದಿಯನ್ನು ಪುನರ್ಮಿಸಬೇಕು ಮತ್ತು ಅಪರಾಧಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಗಡಿಯಾರ ಗೋಪುರದ ಮುಂಭಾಗದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ಧೇಶಿಸಿ ಅವರು ಮಾತನಾಡುತ್ತಿದ್ದರು. ಅಯೋಧ್ಯೆ ಚಳುವಳಿಯಲ್ಲಿ ಪೇಜಾವರ ಸ್ವಾಮೀಜಿ ಸಹಿತ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶಾಮೀಲಾದ ಯಾರಿಗೂ ಇದುವರೆಗೂ ಶಿಕ್ಷೆಯಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದ ರಾಜಶೇಖರ್, ಬಿಜೆಪಿಯ ಫ್ಯಾಸಿಸ್ಟ್ ನೀತಿ ಮುಸ್ಲೀಮ್ ಮತ್ತು ಕ್ರೈಸ್ತ ವಿರೋದಿ ಮಾತ್ರವಲ್ಲ, ಹಿಂದೂ ಮತ್ತು ಮನುಷ್ಯ ವಿರೋಧಿಯೂ ಆಗಿದೆ ಎಂದು ತಿಳಿಸಿದರು. ಮೂಡಬಿದ್ರಿ, ಕದ್ರಿ, ಧರ್ಮಸ್ಥಳ ಮೊದಲಾದ ಕ್ಷೇತ್ರಗಳು ಮೂಲತಹ ಬೌದ್ಧಾಲಯಗಳಾಗಿದ್ದು, ಇವುಗಳನ್ನು ಈಗ ಬೌದ್ಧರಿಗೆ ಬಿಟ್ಟುಕೊಡಲು ಸಾಧ್ಯವೇ ಎಂದು ಪ್ರತಿಭಟನೆಯನ್ನು ಉದ್ಧೇಶಿಸಿ ಕನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆ ಪ್ರಶ್ನಿಸಿದರು.
ಪಿಎಫ್ಐ ಜಿಲ್ಲಾದ್ಯಕ್ಷ ನಿಸಾರ್ ಬ್ರಹ್ಮಾವರ್, ಎಸ್ ಡಿಪಿಐ ಮಾಜಿ ಜಿಲ್ಲಾಧ್ಯಕ್ಷ ರೆಹಮಾನ್ ಮಲ್ಪೆ ಮೊದಲಾದವರು ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದರು.

ಉಡುಪಿ: ಪೆರ್ಡೂರು ಎಂಬೂರು ಆಫ್ರೀಕಾ ಖಂಡದ ಯಾವುದೋ ಒಂದು ಕಾಡಿನ ಮೂಲೆಯಲ್ಲೇನೂ ಇಲ್ಲ. ಹೀಗಿದ್ದೂ ಹೆದ್ದಾರಿಯಲ್ಲಿ ವಾಹನವನ್ನು ತಡೆದು ನಿಲ್ಲಿಸಿ ದಲಿತ ಯುವಕರ ಮೇಲೆ ಹಲ್ಲೆ ನಡೆಸಿ ಇಂದಿಗೂ ರಾಜಾರೋಷವಾಗಿ ಪೆರ್ಡೂರು, ಹಿರಿಯಡ್ಕ ಪರಿಸರದ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಲು ಘಟನೆ ನಡೆದು 20 ದಿನಗಳಾದರೂ ಹಿರಿಯಡ್ಕ ಪೊಲೀಸರಿಗೆ ಯಾಕೆ ಸಾಧ್ಯವಾಗುತ್ತಿಲ್ಲ ? ಇವರಿಗೆ ಕೇಳಿಸಿಕೊಳ್ಳುವ ಕಿವಿ, ಯೋಚಿಸುವ ಮಿದುಳು ಯಾವುದೂ ಇಲ್ಲವೇ ? ಪೊಲೀಸರು ಸಾಮಾನ್ಯ ನಾಗರಿಕರಿಗೆ ವಿಶೇಷ ರಕ್ಷಣೆ ಒದಗಿಸಿಕೊಡುವ ಅಗತ್ಯವೇನೂ ಇಲ್ಲ. ಕನಿಷ್ಟ ಕರ್ತವ್ಯವನ್ನು ಪಾಲಿಸುವ ಮೂಲಕ ಬದುಕುವ ಹಕ್ಕನ್ನು ಕೊಟ್ಟರೆ ಸಾಕು. ಆದರೆ, ಈ ಪೊಲೀಸರು ಅದಕ್ಷರಾಗಿ, ಕ್ರಿಮಿನಲ್ಗಳೊಂದಿಗೆ ಶಾಮೀಲಾಗಿಕೊಂಡು ತಾವು ಕ್ರಿಮಿನಲ್ ಗಳಾದರೆ ಈ ಸಮಾಜವನ್ನು ರಕ್ಷಿಸುವವರು ಯಾರು ?
ಹೀಗೆಂದು ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮುಖಾಮುಖಿಯಾಗಿ ನಿಂತು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದವರು ಖ್ಯಾತ ಚಿಂತಕ, ಹಿರಿಯ ವಿಮರ್ಶಕ ಜಿ.ರಾಜಶೇಖರ್ ರವರು. ಅಮ್ಮುಂಜೆಯ ಯುವಕರ ಮೇಲೆ ಕುಕ್ಕೆಹಳ್ಳಿಯಲ್ಲಿ ಹಲ್ಲೆ ನಡೆಸಿ, ದರೋಡೆ ಮಾಡಿದ ಪೆರ್ಡೂರಿನ ಬಜರಂಗಿಗಳನ್ನು ಬಂಧಿಸುವಂತೆ ಮತ್ತು ಆರೋಪಿಗಳನ್ನು ರಕ್ಷಿಸುತ್ತಿರುವ ಹಿರಿಯಡ್ಕ ಠಾಣಾಧಿಕಾರಿ ಲಕ್ಷ್ಮಣ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಇಂದು ಸಂಜೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಉಡುಪಿ ಎಸ್ಪಿ ಕಚೇರಿ ಮುಂದೆ ನಡೆಸಿದ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಅವರು ಮಾತನಾಡುತ್ತಿದ್ದರು. ಹಿಟ್ಲರ್ ನ ನಾಝಿಸಂ ಮತ್ತು ಮುಸಲೋನಿಯ ಫ್ಯಾಸಿಸಂ ಆರ್ಎಸ್ಎಸ್ ಗೆ ಮಾದರಿಯಾಗಿದೆ. ಇಂಥ ಆರ್ಎಸ್ ಎಸ್ ಗೆ ವಿದ್ಯಾರ್ಥಿಗಳ ನಡುವೆ ಕೆಲಸ ಮಾಡಲು ಎಬಿವಿಪಿ, ರಾಜಕೀಯವಾಗಿ ಕೆಲಸ ಮಾಡಲು ಬಿಜೆಪಿ ಇರುವಂತೆ ನೀಚತನದ ಕ್ರಿಮಿನಲ್, ಗೂಂಡಾ ಕೆಲಸ ಮಾಡಲು ಬಜರಂಗ ದಳವೆಂಬ ಪಡೆ ಇದೆ. ಇಂಥ ನೀಚತನದ ಕೆಲಸ ಈ ಪಡೆಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಕಳೆದ 20 ವರ್ಷಗಳಿಂದ ನಡೆಯುತ್ತಿದೆ ಎಂದು ಆರೋಪಿಸಿದ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರೂ ಆದ ರಾಜಶೇಖರ್, ಇನ್ನಾದರೂ ಮಾನವಂತರಾಗಿ, ಸಂಘ ಪರಿವಾರದ ಗುಲಾಮರಾಗಬೇಡಿ ಎಂದು ಪೊಲೀಸರಿಗೆ ಮನವಿ ಮಾಡಿಕೊಂಡರು.
ಧರಣಿಯನ್ನುದ್ಧೇಶಿಸಿ ಮಾತನಾಡಿದ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ಅವರು, ಕರಾವಳಿ ಜಿಲ್ಲೆಗಳಲ್ಲಿ ನಡೆಯುವ ಕೋಮು ಗಲಭೆಗಳ ಹಿಂದಿನ ರಿಮೋಟ್ ಕಂಟ್ರೋಲರ್ ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ ಒಂದೇ ಒಂದು ಕೇಸು ದಾಖಲಿಸಲು ಇಲ್ಲಿನ ಪೊಲೀಸರಿಗೆ ಇದುವರೆಗೆ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. ಬರಹಗಾರರಾದ ಪ್ರೊ.ಕೆ.ಫಣಿರಾಜ್, ಪ್ರೊ.ಹಯವದನ ಮೂಡುಸಗ್ರಿ, ಜಿ.ಪಂ.ಸದಸ್ಯೆ ಮಲ್ಲಿಕಾ ಅಶೋಕ್, ಪಿಎಫ್ಐ ನಾಯಕ ಹನೀಫ್ ಕಾಪು ಹಾಗೂ ಎಸ್ ಡಿಪಿಐ ಮುಂದಾಳು ಇಲಿಯಾಸ್ ಧರಣಿಯನ್ನುದ್ಧೇಶಿಸಿ ಮಾತನಾಡಿದರು. ದಸಂಸ ಮುಖಂಡರಾದ ಜಯನ್ ಮಲ್ಪೆ, ಗಣೇಶ್ ನೆರ್ಗಿ, ಸುಂದರಿ ಪುತ್ತೂರು, ಸರೋಜಾ ಕೆಮ್ಮಣ್ಣು, ಸರಸ್ವತಿ ಶಂಕರ್ ಕಿನ್ನಿಮೂಲ್ಕಿ, ಮಂಜುನಾಥ ಅಮ್ಮುಂಜೆ, ವಿಶ್ವನಾಥ ಕೊಳಲಗಿರಿ, ದೇಜಪ್ಪ ಹಿರಿಯಡ್ಕ, ಮಂಜುನಾಥ ಕಪ್ಪೆಟ್ಟು, ಸಾಧು ಚಿಟ್ಪಾಡಿ ಮೊದಲಾದವರು ಧರಣಿಯ ನೇತೃತ್ವ ವಹಿಸಿದ್ದರು.
ಧರಣಿಯ ಬಳಿಕ ಉಡುಪಿ ಜಿಲ್ಲಾ ಪೊಲೀಸ್ ಇಲಾಖಾಧಿಕಾರಿಗಳ ಮೂಲಕ ಪಶ್ಚಿಮ ವಲಯದ ಐಜಿಪಿ ಪ್ರತಾಪ್ ರೆಡ್ಡಿಯವರಿಗೆ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು. ಮನವಿಯನ್ನು ಉಡುಪಿಯ ಪ್ರಭಾರ ಡಿವೈಎಸ್ಪಿ ಜಯಂತ್ ವಿ.ಶೆಟ್ಟಿ ಸ್ವೀಕರಿಸಿದರು.

ಉಡುಪಿ: ರಾಜ್ಯದ ಗೃಹ ಸಚಿವರು ನಂ 1 ಕ್ರಿಮಿನಲ್. ಉಡುಪಿಯ ಶಾಸಕರೂ ಒಬ್ಬ ಗೂಂಡಾ. ಇಡೀ ವ್ಯವಸ್ಥೆಯೇ ಕ್ರಿಮಿನಲ್ ಆಗಿದೆ. ಕರಾವಳಿ ಜಿಲ್ಲೆಗಳ ಪೊಲೀಸ್ ಠಾಣೆಗಳು ಬಜರಂಗ ದಳ ಕಾರ್ಯಕರ್ತರ ಅಡ್ಡೆಯಾಗಿದೆ. ಪೊಲೀಸರು ಕ್ರಿಮಿನಲ್ ಗಳ ಬಂಟರಂತೆ
ವರ್ತಿಸುತ್ತಿದ್ದಾರೆ. ಇಲ್ಲಿನ ಪೊಲೀಸರ ದೃಷ್ಠಿಯಲ್ಲಿ ಪೆಟ್ಟು ತಿಂದವರೇ
ಅಪರಾಧಿಗಳಾಗಿದ್ದಾರೆ. ಇದಕ್ಕೆ ಇತ್ತೀಚೆಗಿನ ಉದಾಹರಣೆಯೇ ಹಿರಿಯಡ್ಕ ಪೊಲೀಸ್ ಠಾಣೆ. ಇಲ್ಲಿನ ಪಿಎಸ್ಐ ಒಬ್ಬ ಕಾನ್ ಸ್ಟೇಬಲ್ ಆಗಲೂ ನಾಲಾಯಕ್ಕು..
ಹೀಗೆ ಸಚಿವರು, ಶಾಸಕರು, ಪೊಲೀಸರ ವಿರುದ್ಧ ಮಾತಿನ ಚಾಟಿ ಬೀಸಿದವರು ಖ್ಯಾತ ಚಿಂತಕ, ಹಿರಿಯ ವಿಮರ್ಶಕ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್.
ಅಮ್ಮುಂಜೆಯ ಯುವಕರ ಮೇಲೆ ಪೆರ್ಡೂರಿನ ಬಜರಂಗ ದಳದ ಕಾರ್ಯಕರ್ತರು ಕುಕ್ಕೆಹಳ್ಳಿಯಲ್ಲಿ ನಡೆಸಿದ ಹಲ್ಲೆ ಮತ್ತು ದರೋಡೆ ಕೃತ್ಯವನ್ನು ಖಂಡಿಸಿ ಹಾಗೂ ಘಟನೆ ನಡೆದು 6 ದಿನಗಳಾದರೂ ಆರೋಪಿಗಳನ್ನು ಬಂಧಿಸದೆ ರಕ್ಷಿಸುತ್ತಿರುವ ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್ ಸ್ಪೆಕ್ಟರ್ ರವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಶಾಖೆಯು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ಮಂಗಳವಾರ ನಡೆಸಿದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ರಾಜಶೇಖರ್ ಮಾತನಾಡುತ್ತಿದ್ದರು. ದಲಿತರ ಮೌನವನ್ನು ದೌರ್ಬಲ್ಯವೆಂದು ತಿಳಿದುಕೊಳ್ಳುವ ಅಗತ್ಯವಿಲ್ಲ. ದಲಿತರ ಮೇಲೆ ಬಜರಂಗ ದಳ ಕಾರ್ಯಕರ್ತರು ಇದೇ ರೀತಿ ಹಲ್ಲೆ ನಡೆಸುವುದನ್ನು ಮುಂದುವರಿಸಿದ್ದೇ ಆದಲ್ಲಿ ಮುಂದೆ ದಲಿತ ಯುವಕರು ಬಜರಂಗ ದಳಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು
ಮುನ್ನೆಚ್ಚರಿಕೆ ನೀಡಿದ ದಸಂಸ ಜಿಲ್ಲಾ ಪ್ರದನ ಸಂಚಾಲಕ ಜಯನ್ ಮಲ್ಪೆ, ಹಿರಿಯಡ್ಕ ಪೊಲೀಸ್ ಠಾಣಾಧಿಕಾರಿಗೆ ಕಣ್ಣು, ಕಿವಿ ಒಂದೂ ಇಲ್ಲ ಎಂದು ಆರೋಪಿಸಿದರು.
ಉದ್ಯಾವರ ಚರ್ಚ್ ನ ಧರ್ಮಗುರುಗಳಾದ ಫಾ.ವಿಲಿಯಂ ಮಾರ್ಟಿಸ್, ಖ್ಯಾತ ಚಿಂತಕರಾದ ಪ್ರೊ.ಹಯವದನ ಮೂಡುಸಗ್ರಿ, ಪ್ರೊ.ಕೆ.ಫಣಿರಾಜ್, ಭಾರತೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಜಿಲ್ಲಾದ್ಯಕ್ಷ ಲೂಯಿಸ್ ಲೋಬೊ ಹಾಗೂ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವೆರೋನಿಕಾ ಕರ್ನೆಲಿಯೊ ಪ್ರತಿಭಟನಾ ನಿರತರನ್ನು ಉದ್ಧೇಶಿಸಿ ಮಾತನಾಡಿದರು.
ಪ್ರತಿಭಟನೆ ನಡೆಯುತ್ತಿದ್ದಾಗ ಸ್ಥಳಕ್ಕೆ ಬಂದ ಉಡುಪಿ ಡಿವೈಎಸ್ಪಿ ಡಾ.ಪ್ರಭುದೇವ ಬಿ.ಮಾಣೆ ಮನವಿ ಸ್ವೀಕರಿಸಿ, ಆರೋಪಿಗಳನ್ನು ಬಂಧಿಸಲು ಎರಡು ತಂಡಗಳನ್ನು ರಚಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ನಾಯಕರಾದ ಪ್ರೊ.ಸಿರಿಲ್ ಮಥಾಯಸ್, ವಾಲ್ಟರ್ ಪಿಂಟೊ, ಖತೀಬ್ ಅಬ್ದುಲ್ ರಶೀದ್, ಜಮಾಅತೆ ಇಸ್ಲಾಮಿ ಹಿಂದ್ ನಾಯಕರಾದ ಮುಹಮ್ಮದ್ ಇದ್ರಿಸ್ ಹೂಡೆ, ಹುಸೇನ್ ಕೋಡಿಬೆಂಗ್ರೆ, ಸಿಎಫ್ಐ ಮುಖಂಡರು, ಜಿ.ಪಂ.ಸದಸ್ಯೆ ಮಲ್ಲಿಕಾ ಅಶೋಕ್, ದಸಂಸ ನಾಯಕರಾದ ಶೇಖರ ಹೆಜ್ಮಾಡಿ, ಗಣೇಶ್ ನೆರ್ಗಿ, ಸುಂದರ ಕಪ್ಪೆಟ್ಟು, ಸುಂದರಿ ಪುತ್ತೂರು, ಸರೋಜಾ ನೇಜಾರು ಮೊದಲಾದವರು ಪ್ರತಿಭಟನಾ ದರಣಿಯ ನೇತೃತ್ವ ವಹಿಸಿದ್ದರು.

ಉಡುಪಿ: ಇತ್ತೀಚೆಗೆ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಪೋಲೀಸರಿಂದ ಬಂಧಿತರಾದ ಶಂಕಿತ ಉಗ್ರರು ಉಗ್ರರೇ ಆಗಿದ್ದಲ್ಲಿ ಈ ಬಗ್ಗೆ ನಿಷ್ಪಕ್ಷಪಾತ ವಿಚಾರಣೆ ನಡೆದು ಶಿಕ್ಷೆಯಾಗಲೇಬೇಕು. ಆದರೆ ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ ದಕ್ಷ ಹಾಗೂ ಜಾತ್ಯಾತೀತ ಪೋಲೀಸ್ ಅಧಿಕಾರಿಗಳು ನೇಮಕವಾಗಬೇಕು. ಶಂಕಿತ ಉಗ್ರರ ಆರೋಪಿತ ಉದ್ಧೇಶಗಳು ಮತ್ತು ಹಿನ್ನೆಲೆಯ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರಕುವ ಮೊದಲೇ ಇಡೀ ಮುಸ್ಲೀಮ್ ಸಮುದಾಯದ ಮೇಲೆಯೇ ಅನುಮಾನವನ್ನು ಹುಟ್ಟುಹಾಕುವ ರೀತಿಯಲ್ಲಿ ಬಹುದೊಡ್ಡ ಮಾಧ್ಯಮ ವಿಭಾಗ ಸತತವಾಗಿ ವರದಿಗಳನ್ನು ಪ್ರಕಟಿಸುತ್ತಿರುವುದು ಹಾಗೂ ಶಂಕಿತ ಉಗ್ರರನ್ನು ನೇರವಾಗಿ ‘ಉಗ್ರರು’ ಎಂದು ಬಿಂಬಿಸುತ್ತಿರುವುದು ಮಾತ್ರ ಅತ್ಯಂತ ಆತಂಕಕಾರಿ, ಕಳವಳಕಾರಿ, ಖಂಡನಾರ್ಹ ಮತ್ತು ಆಕ್ಷೇಪಾರ್ಹ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ, ಖ್ಯಾತ ಚಿಂತಕ ಜಿ.ರಾಜಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೋಮು ಸೌಹಾರ್ದ ವೇದಿಕೆಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕಗಳು ಜಂಟಿಯಾಗಿ ಇಂದು ಬೆಳಗ್ಗೆ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯದ ರೀತಿಯಲ್ಲಿ ಪೋಲೀಸರು ಹಾಗೂ ಗುಪ್ತಚರ ಇಲಾಖೆಯವರು ಆಯ್ದ ಮಾಹಿತಿಗಳನ್ನು ಸೋರಿ ಬಿಡುತ್ತಿರುವುದನ್ನು ಮತ್ತು ಅವುಗಳನ್ನು ಕೆಲವು ಅಕ್ಷರ- ದೃಶ್ಯ ಮಾಧ್ಯಮಗಳು ಅತಿರಂಜಿತವಾಗಿ ವರದಿ ಮಾಡುತ್ತಾ ನ್ಯಾಯ ಪ್ರಕ್ರಿಯೆಗೇ ತೊಡರುಗಾಲಾಗುತ್ತಿದೆ ಎಂದು ರಾಜಶೇಖರ್ ಟೀಕಿಸಿದರು. ಬಂಧಿತರ ವಿಚಾರಣೆ ನಡೆದು ನ್ಯಾಯಾಲಯದಲ್ಲಿ ಅವರು ಅಪರಾಧಿಗಳು ಎಂಬ ತೀರ್ಮಾನ ಪ್ರಕಟವಾಗುವವರೆಗೂ ಅವರು ನಿರಪರಾಧಿಗಳು ಎಂದೇ ಪರಿಗಣಿಸಬೇಕು ಎಂಬುದು ಕ್ರಿಮಿನಲ್ ಕಾಯ್ದೆಯ ಮೂಲಭೂತ ನಿರ್ದೇಶಕ ಸೂತ್ರವಾಗಿದೆ. ಸಾವಿರ ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆಂಬುದು ಈ ದೇಶದ ಪ್ರಜಾತಂತ್ರದ ನ್ಯಾಯಸಂಹಿತೆಯ ಮೂಲ ಸೂತ್ರವಾಗಿದೆ. ಆದರೆ, ಈವರೆಗೂ ಈ ‘ಶಂಕಿತ ಉಗ್ರ’ ರ ಪ್ರಕರಣದಲ್ಲಿ ಮಾತ್ರ ಈ ಬಗೆಯ ಯಾವುದೇ ನ್ಯಾಯ ಸಂಹಿತೆ ಅನ್ವಯವಾಗದಂತೆ ವಿಚಾರಣೆ ಮತ್ತು ತನಿಖೆಗೆ ಮುನ್ನವೇ ಮಾಧ್ಯಮಗಳ ಕೋರ್ಟಿನಲ್ಲಿ ತೀರ್ಪುಗಳು ಪ್ರಕಟವಾಗುತ್ತಿವೆ ಎಂದು ಟೀಕಿಸಿದ ರಾಜಶೇಖರ್, ನಮ್ಮ ಅತ್ಯಂತ ಭ್ರಷ್ಟ ರಾಜಕಾರಣಿಗಳು ಕೂಡಾ ನ್ಯಾಯಾಲಯ ತಮ್ಮನ್ನು ಅಪರಾಧಿ ಎಂದು ನ್ಯಾಯಾಲಯ ತೀರ್ಮಾನಿಸುವವರೆಗೂ ತಾವು ನಿರಪರಾಧಿಗಳು ಎಂದು ಹೇಳಿಕೊಂಡು ಅಧಿಕಾರದಲ್ಲಿ ಮುಂದುವರಿಯುತ್ತಿರುವಾಗ, ಶಂಕಿತ ಉಗ್ರರಿಗೂ ಅದೇ ನ್ಯಾಯ ಸಂಹಿತೆ ಅನ್ವಯವಾಗಬೇಕೆಂದು ಪ್ರತಿಪಾದಿಸಿದರು.
ಈ ಹಿಂದೆ 2007-08 ರ ಚುನಾವಣೆಯ ಸಂದರ್ಭದಲ್ಲೂ ನೂರಾರು ಮುಸ್ಲೀಮರನ್ನು ಉಗ್ರರ ಹೆಸರಲ್ಲಿ ಹುಬ್ಬಳ್ಳಿ ಕೋರ್ಟ್ ಸ್ಪೋಟ, ಮಾಲೆಗಾಂವ್, ನಾಂದೇಡ್ ಬಾಂಬ್ ಬ್ಲಾಸ್ಟ್ ಇತ್ಯಾದಿ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. ಆಗಲೂ ಕೆಲವು ಮಾಧ್ಯಮಗಳು ಬಹಳ ವ್ಯವಸ್ಥಿತವಾಗಿ ಇಡೀ ಮುಸ್ಲೀಮ್ ಸಮುದಾಯದ ಮೇಲೆಯೇ ಚಾರ್ಜ್ ಶೀಟ್ ಹಾಕುವಂ ರೀತಿಯಲ್ಲಿ ವರದಿಗಳನ್ನು ಪ್ರಕಟಿಸಿದವು. ಆದರೆ, ಆ ಎಲ್ಲಾ ಪ್ರಕರಣಗಳಲ್ಲೂ ಯಾವ ಮುಸ್ಲೀಮರೂ ಭಾಗವಹಿಸಿರಲಿಲ್ಲ ಎಂಬುದು ಬಳಿಕ ಸ್ಪಷ್ಟವಾಗಿ ಸಾಬೀತಾಯಿತು. ಪೋಲೀಸರ, ಕೋಮುವಾದಿ ಸರಕಾರದ, ಕೆಲವು ಮಾಧ್ಯಮಗಳ ಬೇಜವಬ್ದಾರಿ ಮತ್ತು ಸ್ಥಾಪಿತ ಹಿತಾಸಕ್ತಿಗಳಿಗೆ ಬಲಿಯಾಗಿ ನೂರಾರು ಮುಸ್ಲೀಮರು ವಿನಾಕಾರಣ ಅವಮಾನ ಮತ್ತು ಶಿಕ್ಷೆಯನ್ನು ಅನುಭವಿಸಿದರು. ಇಷ್ಟಾದ ಮೇಲೆಯೂ ಮೊದಲು ‘ಉಗ್ರರು’ ಎಂದು ಬರೆದ ಮಾದ್ಯಮಗಳು ಕನಿಷ್ಟ ಕ್ಷಮೆಯನ್ನೂ ಯಾಚಿಸಲಿಲ್ಲ ಎಂದು ರಾಜಶೇಖರ್ ಖೇದ ವ್ಯಕ್ತಪಡಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಆಸ್ಟ್ರೇಲಿಯಾದ ಡಾ.ಮುಹಮ್ಮದ್ ಹನೀಫ್ ಪ್ರಕರಣವನ್ನೂ, ರಾಷ್ಟ್ರ ಮಟ್ಟದಲ್ಲಿ ಪಾರ್ಲಿಮೆಂಟ್ ಪ್ರಕರಣವನ್ನು ರಾಜಶೇಖರ್ ಉದಾಹರಿಸಿದರು. ಭಯೋತ್ಪಾದನಾ ಪ್ರಕರಣದಡಿಯಲ್ಲಿ ಡಾ.ಹನೀಫ್ ರನ್ನು ಬಂಧಿಸಿದ ಆಸ್ಟ್ರೇಲಿಯಾ ಪೋಲಿಸರು, ಬಳಿಕ ನಿರಪರಾಧಿ ಎಂದು ಅವರನ್ನು ಬಿಡುಗಡೆಗೊಳಿಸಿತು. ಆಗ ಅಲ್ಲಿನ ಸರಕಾರ ಡಾ.ಹನೀಫ್ ರಿಗೆ ಹರಿಹಾರ ನೀಡಿತು. ಪಾರ್ಲಿಮೆಂಟ್ ದಾಳಿ ಪ್ರಕರಣದಲ್ಲಿ ಎಸ್.ಎ.ಆರ್.ಗಿಲಾನಿ ಹಾಗೂ ಇಫ್ತಿಕಾರ್ ಗಿಲಾನಿಯವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿತು ಎಂದು ರಾಜಶೇಖರ್ ನೆನಪು ಮಾಡಿಕೊಂಡರು.
ಪೋಲೀಸರು ಹಾಕುವ ಚಾರ್ಜ್ ಶೀಟ್ ಗಳನ್ನು ಕೋರ್ಟ್ ಗಳು ಖುಲಾಸೆಗೊಳಿಸಬಹುದು. ಆದರೆ, ಮಾಧ್ಯಮಗಳು ಹಾಕುವ ಚಾರ್ಜ್ ಶೀಟ್ ಗಳು ಜನಮಾನಸದಲ್ಲಿ ಉಳಿದು ಸಮಾಜದಲ್ಲಿ ಅಲ್ಪಸಂಖ್ಯಾತರ ಬದುಕನ್ನು ಅಸಹನೀಯಗೊಳಿಸುತ್ತದೆ. ಆದ್ದರಿಂದ, ಹಳೆಯ ಅನುಭವದ ಹಿನ್ನೆಲೆಯಲ್ಲಿ ಮಾಧ್ಯಮಗಳು ಪ್ರಕರಣದ ವರದಿ ಮಾಡುವಾಗ ಆರೋಪಿಗಳು ನಿರಪರಾಧಿಗಳಾಗುವ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮಾತ್ರವಲ್ಲ, ಕೆಲವು ವ್ಯಕ್ತಿಗಳು ಮಾಡಿರಬಹುದಾದ ತಪ್ಪಿಗೆ ಇಡೀ ಸಮುದಾಯದ ಮೇಲೆ ಹೇರುವ ಪ್ರಮಾದವನ್ನು ಮಾಡಬಾರದೆಂದು ವಿನಂತಿಸಿದರು.
ಆಯ್ದ ಮಾಹಿತಿಗಳನ್ನು ಸೋರಿಬಿಡದಂತೆ ಪೋಲೀಸರಿಗೆ ಕಟ್ಟುನಿಟ್ಟಿನ ಸೂಚನೆ
ನೀಡಬೇಕೆಂದೂ, ಕೋಮುವಾದಿ ಶಕ್ತಿಗಳ ಅಜೆಂಡಾಗಳಿಗೆ ಪೂರಕವಾಗಿ ಪ್ರಕರಣವು ಬಳಕೆಯಾಗದಂತೆ ನೋಡಿಕೊಳ್ಳಬೇಕೆಂದು ಪೋಲೀಸ್ ಮುಖ್ಯಸ್ಥರಿಗೆ ಮನವಿ ಮಾಡಿದ ರಾಜಶೇಖರ್, ಈವರೆಗೆ ತನಗೆ ಹತ್ತಿದ್ದ ಎಲ್ಲಾ ಜನವಿರೋಧಿ ಕಳಂಕದಿಂದ ಮುಕ್ತವಾಗುವ ಹುನ್ನಾರದಲ್ಲಿ ರಾಜ್ಯದ ಬಿಜೆಪಿ ಸರಕಾರ ತೊಡಗಿದೆ ಎಂದು ಆರೋಪಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು, ಕಾರ್ಯದರ್ಶಿ ಮುಹಮ್ಮದ್ ಕಕ್ಕಿಂಜೆ, ಉಡುಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ಖತೀಬ್ ಅಬ್ದುಲ್ ರಶೀದ್, ಲೂವಿಸ್ ಲೋಬೋ ಹಾಗೂ ಜತೆ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.

ಬೆಳ್ಳಾರೆ ಕಾಲೇಜು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದವರು ಎಬಿವಿಪಿಯ ದುಶ್ಯಾಸನರು: ಜಿ.ರಾಜಶೇಖರ್

Posted: September 6, 2012 in Uncategorized
Tags: , , , , , , , , , , , , , , , , , , , , , , , , , , , , , , , , , , , , , , , , , , , , , , , , , , ,

ಉಡುಪಿ: ಬೆಳ್ಳಾರೆಯ ಡಾ.ಶಿವರಾಮ ಕಾರಂತ ಸರಕಾರಿ ಪದವಿ ಕಾಲೇಜಿನ ಅಸಹಾಯಕ
ವಿದ್ಯಾರ್ಥಿನಿ ಪೆರುವಾಜೆಯ ಸಾಹಿರಾ ಶಮೀಲಾ ಧರಿಸಿದ್ದ ಶಿರವಸ್ತ್ರ ಎಳೆದುಹಾಕಿ ಹಲ್ಲೆ ನಡೆಸಿದವರು ಎಬಿವಿಪಿಯ ದುಶ್ಯಾಸನರು. ಮಹಾಭಾರತದ ದುಶ್ಯಾಸನ ದ್ರೌಪದಿಯ ಸೀರೆಯನ್ನು ಸೆಳೆದರೆ, ಎಬಿವಿಪಿಯ ದುಶ್ಯಾಸನರು ವಿದ್ಯಾರ್ಥಿನಿಯ ಶಿರವಸ್ತ್ರವನ್ನು ಸೆಳೆದರು ಎಂದು ಖ್ಯಾತ ಚಿಂತಕ, ಬರಹಗಾರ ಜಿ.ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲೇಜು ವಿದ್ಯಾರ್ಥಿನಿಯ ಮೇಲೆ ಎಬಿವಿಪಿ ಕಾರ್ಯಕರ್ತರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಇಂದು ಸಂಜೆ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪರಿಸರದ ಗಡಿಯಾರ ಗೋಪುರ ಮುಂದೆ ನಡೆಸಿದ ಬಹಿರಂಗ ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಸುಳ್ಯ ಠಾಣೆಯ ಪೋಲೀಸರು 36 ಗಂಟೆಗಳ ಬಳಿಕ ದಾಖಲಿಸಿದ್ದಾರೆ. ಸಂಘ ಪರಿವಾರದ ಜೊತೆಗೆ ಶಾಮೀಲಾಗಿರುವ ಸುಳ್ಯ ಪೋಲೀಸರು ಇಲ್ಲಿಯೂ ಎಬಿವಿಪಿ ಕಾರ್ಯಕರ್ತರು ನೀಡಿದ ಸುಳ್ಳು ದೂರನ್ನೂ
ದಾಖಲಿಸಿಕೊಂಡಿದ್ದಾರೆ. ಕರಾವಳಿಯ ಎರಡೂ ಜಿಲ್ಲೆಗಳ ಪೋಲೀಸರು ಇದೇ ರೀತಿ
ವರ್ತಿಸುತ್ತಾರೆ. ಇದು ಹೊಸದೇನೂ ಅಲ್ಲ ಎಂದು ರಾಜಶೇಖರ್ ಟೀಕಿಸಿದರು.
ಬಿಜೆಪಿ ಒಂದು ಫ್ಯಾಸಿಸ್ಟ್ ಪಕ್ಷವಾಗಿದ್ದು, ಈ ಪಕ್ಷವೇ ಎಬಿವಿಪಿಯನ್ನು
ಪೋಷಿಸುತ್ತಿದೆ. ಸಂಘ ಪರಿವಾರ ನಡೆಸುವ ಈ ರೀತಿಯ ದೌರ್ಜನ್ಯಗಳಲ್ಲಿ ಪೋಲೀಸರು ಹಾಗೂ ಪತ್ರಿಕೆಗಳೂ ಭಾಗಿಗಳಾಗುತ್ತಿವೆ ಎಂದು ರಾಜಶೇಖರ್ ಆರೋಪಿಸಿದರು.
ಎಬಿವಿಪಿ ಕೇಂದ್ರದ ಯುಪಿಎ ಸರಕಾರದ ಕಲ್ಲಿದ್ದಲು ವಿತರಣೆಯ ವಿರುದ್ಧ ಬಂದ್ ನಡೆಸಿದೆ. ಆದರೆ, ಈಗಾಗಲೇ ಈ ಕಲ್ಲಿದ್ದಲು ವಿತರಣೆಯಲ್ಲಿ ಎನ್ ಡಿ ಎ ಸರಕಾರವು ಭಾಗಿ ಎಂಬುದನ್ನು ಯುಪಿಎ ಸರಕಾರ ಬಹಿರಂಗಪಡಿಸಿದೆ ಎಂದು ಸ್ಪಷ್ಟಪಡಿಸಿದ ರಾಜಶೇಖರ್, ರಾಜ್ಯದ ಬಿಜೆಪಿ ಸರಕಾರದ ಭ್ರಷ್ಠಾಚಾರದ ಬಗ್ಗೆ ಎಂದೂ ಮಾತನಾಡದ, ಬಂದ್ ಗೆ ಕರೆ ಕೊಡದ ಎಬಿವಿಪಿಗೆ ಕೇಂದ್ರದ ವಿರುದ್ಧ ಬಂದ್ ಗೆ ಕರೆಕೊಡುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು. ಕೇಂದ್ರ ಸರಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಎಬಿವಿಪಿ ರಾಜ್ಯದ ಬಿಜೆಪಿ ಸರಕಾರದ ಬ್ರಹ್ಮಾಂಡ ಭ್ರಷ್ಆಚಾರದ ಬಗ್ಗೆ ಮಾತನಾಡುತ್ತಿಲ್ಲ ಯಾಕೆ ಎಂದು ಎಸ್ ಡಿ ಪಿ ಐ ನಾಯಕ ರಫೀಕ್ ಮಜೂರು ಅವರು ಪ್ರಶ್ನಿಸಿದರು.
ಮಗ ಎಲ್ಲಾ ಬಿಟ್ಟ, ಭಂಗಿ ನೆಟ್ಟ ಎಂಬಂತೆ ಎಬಿವಿಪಿ ಗೂಂಡಾಗಳು ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮುಸ್ಲೀಮರನ್ನು ಧಮನ ಮಾಡುವುದನ್ನೇ ಸಂಘ ಪರಿವಾರ ಅಜೆಂಡಾ ಮಾಡಿಕೊಂಡಿದೆ ಎಂದು ದೂರಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆ ಅಟವರು, ಪರಿವಾರವು ಎಬಿವಿಪಿ ಎಂಬ ವಿಷಜಂತುಗಳ ಮೂಲಕ ರಾಕ್ಷಸೀ ಕೃತ್ಯ ಎಸಗಿದ್ದಾರೆ. ಎಬಿವಿಪಿ ಪುಂಡರಿಗೆ ರಾಜ್ಯದ ಬಿಜೆಪಿ ಸರಕಾರದ ಭ್ರಷ್ಠಾಚಾರ ಯಾಕೆ ಕಣ್ಣಿಗೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದರು.
ಎಬಿವಿಪಿ ಬಂದ್ ಕರೆ ನೀಡಿದ ದಿನ ಕೆಲವು ಕಾಲೇಜುಗಳ ಪ್ರಾಂಶುಪಾಲರು ಕಾಲೇಜಿಗೆ ರಜೆ ನೀಡುವ ಮೂಲಕ ಬಿಜೆಪಿ ಪಕ್ಷದ ಚೇಲಾಗಳಂತೆ ವರ್ತಿಸಿದ್ದಾರೆ ಎಂದು ಚಿಂತಕ ಪ್ರೊ.ಹಯವದನ ಮೂಡುಸಗ್ರಿ ಅಪಾದಿಸಿದರು.
ಜಿಲ್ಲಾ ಅಲ್ಪ ಸಂಖ್ಯಾತರ ವೇದಿಕೆಯ ಮುಖಂಡ ಪ್ರೊ.ಸಿರಿಲ್ ಮಥಾಯಸ್, ಪಿಎಫ್ಐ ನಾಯಕರುಗಳಾದ ಅಬ್ರಹಂ ಉಚ್ಚಿಲ, ಹನೀಫ್ ಮೂಳೂರು, ಸಾಧಿಕ್ ನಿಟ್ಟೂರು, ಮಕ್ಸೂದ್ ಉಡುಪಿ, ಮಜೀದ್ ನಿಟ್ಟೂರು, ಕ್ಯಾಂಪಸ್ ಫ್ರಂಟ್ ಆಪ್ ಇಂಡಿಯಾ ನಾಯಕ ತೌಸಿಫ್, ಎಸ್ ಡಿಪಿಐ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಉಡುಪಿ: ದಲಿತ ವಿರೋಧಿ, ರೈತ ವಿರೋಧಿ, ಜನ ವಿರೋಧಿ, ಭ್ರಷ್ಟಾಚಾರಿ, ನೈತಿಕ ದಿವಾಳಿತನದ ಕೋಮುವಾದಿ ಪಕ್ಷವಾದ ಬಿಜೆಪಿಯಿಂದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ 24 ಕೇಸುಗಳ ವೀರ ವಿ.ಸುನಿಲ್ ಕುಮಾರ್ ಅವರನ್ನು ಸೋಲಿಸಿ, ಜಾತ್ಯಾತೀತ ವ್ಯಕ್ತಿಗಳನ್ನು ಬೆಂಬಲಿಸುವ ಮೂಲಕ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಉಳಿಸಬೇಕೆಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತದಾರರಿಗೆ ಕರೆ ನೀಡಿದೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾ.10 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ವೇದಿಕೆ ಪರವಾಗಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೊಕ್ ಅವರು, ಕ್ರೈಸ್ತರ ಹಾಗೂ ಮುಸ್ಲೀಮರ ಮತ ತನಗೆ ಅಗತ್ಯವಿಲ್ಲವೆಂದು ಬಹಿರಂಗ ಸಭೆಯಲ್ಲಿ ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಚುನಾವಣಾ ನೀತಿ ಸಂಹಿತೆ ಮತ್ತು ದೇಶದ ಸಂವಿಧಾನ ಹಾಗೂ ಜಾತ್ಯಾತೀತತೆಯ ತತ್ವವನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿದರು.
ಗೋ ಸಾಗಾಟದ ನೆಪದಲ್ಲಿ ಹಾಜಬ್ಬ- ಹಸನಬ್ಬರನ್ನು ಬೆತ್ತಲೆ ಮಾಡಿದ ಪ್ರಕರಣ, ಕುಂದಾಪುರದ ಕರಾಣಿ ಮತೀನ್, ಬಾರ್ಕೂರಿನ ಕೃಷ್ಣಯ್ಯ ಪಾಟಾಳಿ ಹಾಗೂ ಆರ್ಡಿಯ ದಯಾನಂದ ಶೆಟ್ಟಿಯವರನ್ನು ಕೊಲೆ ಮಾಡಿದ ಪ್ರಕರಣಗಳಲ್ಲಿ, ಉಡುಪಿ ಮತ್ತು ಚಿಕ್ಕ ಮಗಳೂರು ಜಿಲ್ಲೆಗಳಲ್ಲಿ ನಡೆದ ಕೋಮುಗಲಭೆಯ ಪ್ರಕರಣಗಳಲ್ಲಿ ಸುನಿಲ್ ಕುಮಾರ್ ಪಾತ್ರ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಇದೆ ಎಂದು ಕೋಮು ಸೌಹಾರ್ದ ವೇದಿಕೆ ಅಪಾದಿಸಿದೆ.
ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾದ್ಯಕ್ಷ ಜಿ.ರಾಜಶೇಖರ್, ದ.ಕ.ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು, ರಾಜ್ಯ ಕಾರ್ಯದರ್ಶಿ ಮೂಡಿಗೆರೆಯ ಗೌಸ್ ಮೊಹಿದ್ದೀನ್, ಕೇಂದ್ರ ಸಮಿತಿ ಸದಸ್ಯರಾದ ಉದ್ಯಾವರ ಚರ್ಚ್ ನ ರೆ,ಫಾ.ವಿಲಿಯಂ ಮಾರ್ಟಿಸ್, ಕಲ್ಕುಳಿ ವಿಠಲ ಹೆಗಡೆ, ಪ್ರೊ.ನಗರಿ ಬಾಬಯ್ಯ, ಶಶಿಧರ ಹೆಮ್ಮಾಡಿ ಉಪಸ್ಥಿತರಿದ್ದರು.

ಉಡುಪಿ: ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡಲ್ಲಿ ಒಂದು ರಾಜಕೀಯ ನಿರ್ಧಾರವಾಗಿ ರೇವ್ ಪಾರ್ಟಿ ನಡೆಸಲಾಗಿದೆ. ಇದಕ್ಕೆ ನೇರವಾಗಿ ಶಾಸಕರೇ ಹೊಣೆಗಾರರಾಗಿದ್ದು, ಸರಕಾರದ ತಲೆದಂಡವಾಗಬೇಕು. ಪ್ರಾಮಾಣಿಕರೂ, ದಕ್ಷರೂ ಆದ ಜಿಲ್ಲಾಧಿಕಾರಿಗಳನ್ನು ಬಲಿಪಶು ಮಾಡಬಾರದು, ಜಿಲ್ಲಾಧಿಕಾರಿಗಳು ಸರಕಾರ ಹೇಲಳಿದ್ದನ್ನು ಮಾಡಿದ್ದಾರಷ್ಟೇ ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಹೇಳಿದ್ದಾರೆ.
ಎಸ್ ಡಿಪಿಐ ಪಕ್ಷವು ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿ ಫೆ.8 ರಂದು ಸಂಜೆ ನಡೆಸಿದ ಬಹಿರಂಗ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಚರ್ಚ್ ದಾಳಿ, ಪಬ್ ದಾಳಿ, ರೇವ್ ಪಾರ್ಟಿ, ಇದೀಗ ಬ್ಲೂಫಿಲಂ ವೀಕ್ಷಣೆ. ಇದು ಹೀಗೆ ಮುಂದುವರಿದರೆ ಯುವತಿಯರು ಚಪ್ಪಲಿಯಲ್ಲಿ ಹೊಡೆಯುವ ಸ್ಥಿತಿ ನಿರ್ಮಾನವಾಗಲಿದೆ ಎಂದು ರಾಜಶೇಖರ್ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅತ್ಯಾಚಾರ, ಅನಾಚಾರ ನಡೆದರೂ ನಾಚಿಕೆ ಪಟ್ಟುಕೊಳ್ಳದಂತಹ ಹೊಸದೊಂದು ಸಂಸ್ಕೃತಿ ಸೃಷ್ಟಿಯಾಗಿದೆ. ಪಾಪದ ಕೊಡ ತುಂಬಿದೆ. ಸರಕಾರ ಇನ್ನಾದರೂ ರಾಜೀನಾಮೆ ನೀಡಲಿ ಎಂದು ಜಿ.ರಾಜಶೇಖರ್ ಒತ್ತಾಯಿಸಿದರು.

ಉಡುಪಿ: ಗಾಂಧೀಜಿಯವರನ್ನು ಕೊಂದ ಗೋಡ್ಸೆ ವಿಷ ಸರ್ಪದ ಹಲ್ಲು ಮಾತ್ರವೇ ಆಗಿದ್ದ. ವಿಷ ಸರ್ಪ ಅಂದೂ ಇತ್ತು, ಇಂದೂ ಇದೆ, ಮುಂದೆಯೂ ಇರುತ್ತೆ ಎಂದು ಚಿಂತಕ ವರದೇಶ ಹಿರೇಗಂಗೆ ಅವರು ಹೇಳಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾ ಘಟಕವು ಗಾಂಧಿ ಜಯಂತಿ ಅಂಗವಾಗಿ ಎಂ.ಜಿ.ಎಂ. ಕಾಲೇಜಿನ ಧ್ವನ್ಯಾ ಲೋಕ ಸಭಾಂಗಣದಲ್ಲಿ ಜ.30 ರಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಿ ಅವರು ಮಾತನಾಡುತ್ತಿದ್ದರು.
ಉಡುಪಿಗೆ ಆಗಮಿಸಿದ್ದ ಸಂದರ್ಭದಲ್ಲಿ ಶ್ರೀಕೃಷ್ಣ ದೇವಾಲಯಕ್ಕೆ ಹೋಗಬೇಕೆಂಬ ವಿಷಯ ಗಾಂಧೀಜಿಯವರಲ್ಲಿ ಪ್ರಸ್ತಾಪವಾಯಿತು. ಆಗ ಗಾಂಧೀಜಿಯವರು ಶ್ರೀಕೃಷ್ಣ ದೇವಾಲಯಕ್ಕೆ ದಲಿತ ಸಮುದಾಯಕ್ಕೆ ಪ್ರವೇಶಿಸಿದರು. ದಲಿತರಿಗೆ ಪ್ರವೇಶ ಇಲ್ಲ ೆಂಬುದನ್ನು ತಿಳಿದುಕೊಂಡ ಬಳಿಕ ಗಾಂಧೀಜಿಯವರು ದೇವಾಲಯಕ್ಕೆ ಭೇಟಿ ಕೊಡದೆ ನಿರ್ಗಮಿಸಿದರು. ಇದು ಗಾಂಧಿ ಮಾರ್ಗ ಎಂದು ವರದೇಶ್ ತಿಳಿಸಿದರು.
ವೇದಿಕೆಯು ಗಾಂಧಿ ಜಯಂತಿ ಅಂಗವಾಗಿ, ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ‘ಜಾತಿ ಅಸ್ಪೃಶ್ಯತೆ ನಿವಾರಿಸಲು ಗಾಂಧಿವಾದದ ಪ್ರಸ್ತುತತೆ’ ಮತ್ತು ಪದವಿ ವಿದ್ಯಾರ್ಥಿಗಳಿಗೆ ಜಾಗತೀಕರಣದ ಮೊಬೈಲ್ ಯುಗದಲ್ಲಿ ಗಾಂಧಿ ಮಾರ್ಗದ ಪ್ರಸ್ತುತತೆಗಳು’ ಎಂಬ ವಿಷಯಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಿತ್ತು. ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಬಹುಮಾನಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು, ಗಾಂಧಿವಾದದ ಬಗ್ಗೆ ಮನೆ ಮನೆಗಳಲ್ಲಿ ಚರ್ಚೆ ನಡೆಯಬೇಕು, ನಾಲ್ಕು ಗೋಡೆಗಳ ನಡುವೆ ಮಾತನಾಡಿ ಏನೂ ಪ್ರಯೋಜನವಿಲ್ಲ ಎಂದರು.
ಸಾಮಾಜಿಕ ಅಸಮಾನತೆಯೇ ಈ ದೇಶದ ದೊಡ್ಡ ಸಮಸ್ಯೆ ಎಂದು ಹೇಳಿದ ಹೆಗ್ಡೆಯವರು, ಇಂದು ಖಾದಿಯನ್ನು ತೊಟ್ಟು ತಾನೊಬ್ಬ ಗಾಂಧಿವಾದಿ ಎಂದು ತೋರಿಸುವ ಕಪಟ ನಾಟಕಗಳು ಹೆಚ್ಚಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ವೇದಿಕೆ ಜಿಲ್ಲಾಧ್ಯಕ್ಷರಾದ ಜಿ.ರಾಜಶೇಖರ್ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಪ್ರೊ.ಕೆ.ಪಣಿರಾಜ್ ಕಾರ್ಯಕ್ರಮ ನಿರ್ವಹಿಸಿದರು. ದಿನಕರ ಬೆಂಗ್ರೆ ಸ್ವಾಗತಿಸಿದರು.