ಉಡುಪಿ: ಇಲ್ಲಿನ ಪ್ರತಿಷ್ಟಿತ ಶ್ರೀ ಕೃಷ್ಣ ದೇವಾಲಯದಲ್ಲಿರುವ ಪಂಕ್ತಿ ಬೇಧ ಮತ್ತು ಜಾತಿ ಬೇಧವನ್ನು ವಿರೋದಿಸಿ ಹಾಗೂ ಸಂವಿಧಾನ ಬದ್ಧ ಸಮಾನತೆಯನ್ನು ಸ್ಥಾಪಿಸಲು ಒತ್ತಾಯಿಸಿ ಗಣರಾಜ್ಯ ದಿನವಾದ ಜ.26 ರಂದು ಸಿಪಿಐ (ಎಂ) ಪಕ್ಷದ ಕಾರ್ಯಕರ್ತರು ಉಡುಪಿಯಲ್ಲಿ ಬೃಹತ್ ಬಹಿರಂಗ ಪ್ರತಿಭಟನಾ ಸಭೆ, ಜನಜಾಗೃತಿ ಜಾಥಾ ಮತ್ತು ದೇವಾಲಯದ ಹೊರ ಅವರಣದಲ್ಲಿ ಪ್ರತಿಭಟನಾ ಧರಣಿ ನಡೆಸಿ ಪೋಲೀಸರ ಜೊತೆಗೆ ಸಂಘರ್ಷ ನಡೆಸಿದರು.
ಮಧ್ಯಾಹ್ನ 12 ಗಂಟೆಗೆ ಅಜ್ಜರಕಾಡು ಹುತಾತ್ಮ ಸ್ಮಾರಕದ ಪರಿಸರದಲ್ಲಿ ಕೆ.ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಪ್ರತಿಭಟನಾ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ಜಿ.ವಿ.ಶ್ರೀರಾಮ ರೆಡ್ಡಿ ಅವರು, ಬ್ರಾಹ್ಮಣರು ಉಂಡ ಎಂಜಲೆಲೆಗಳ ಮೇಲೆ ಹೊರಳಾಡುವುದರಿಂದ ರೋಗಗಳು ವಾಸಿಯಾಗುತ್ತವೆ ಎಂಬುದು ನಿಜವೇ ಆಗಿದ್ದರೆ ನಾಡಿನಲ್ಲಿರವ ಆಸ್ಪತ್ರೆಗಳನ್ನೆಲ್ಲ ಮುಚ್ಚಿಬಿಡಿ ಎಂದು ಸವಾಲೆಸೆದರು. ರೋಗಿಷ್ಟ ಮಠಾಧೀಶರು ಮೊದಲು ಎಂಜಲೆಲೆ ಮೇಲೆ ಹೊರಳಾಡಲೆಂದು ವ್ಯಂಗ್ಯವಾಡಿದರು.
ಪಕ್ಷದ ಇನ್ನೊಬ್ಬ ಮುಖಂಡ ಜಿ.ಎನ್.ನಾಗರಾಜ್ ಅವರು ಮಾತನಾಡಿ, ದುಡಿಮೆಯಲ್ಲಿ ಮತ್ತು ರಕ್ಷಣೆಯಲ್ಲಿ ಜಾತಿ ಇಲ್ಲವೆಂದ ಮೇಲೆ ಊಟದಲ್ಲಿ ಮಾತ್ರ ಯಾಕೆ ಪಂಕ್ತಿ ಬೇಧ- ಜಾತಿ ಬೇಧ ಎಂದು ಖಾರವಾಗಿಯೇ ಪ್ರಶ್ನಿಸಿದರು. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಕಮ್ಯುನಿಸ್ಟರಿಂದ ಮಾತ್ರ ಜಾತಿ ಬೇಧದ ವಿರುದ್ದ ಹೋರಾಟ ಸಾಧ್ಯವೆಂದು ಬಿ.ಮಾಧವ ಹೇಳಿದರು. ನಮಗೆ ತಿರುಪತಿ ಲಾಡು ಬೇಡ, ಗಂಗಾ ಜಲವೂ ಬೇಡ. ಕುಡಿಯಲು ನೀರು ಮತ್ತು ರೇಷನ್ ಕಾರ್ಡ್ ಕೊಡಿ ಎಂದು ಗುಡುಗಿದ ಕೆ.ನೀಲಾ ಅವರು, ವಚನಗಳ ಮೂಲಕ ಪಂಕ್ತಿ ಬೇಧ ಆಚರಿಸುವ ಮಠಾಧೀಶರನ್ನು ಬೆತ್ತಲೆ ಮಾಡಿದರು.
ಸಭೆಯ ಬಳಿಕ ಅಜ್ಜರಕಾಡಿನಿಂದ ಹೊರಟ ಜನಜಾಗೃತಿ ಜಾಥಾ ತಾಲೂಕು ಕಚೇರಿ, ಕೋರ್ಟ್ ರೋಡ್, ಕವಿ ಮುದ್ದಣ ಮಾರ್ಗ, ಪ್ರಧಾನ ಅಂಚೆ ಕಚೇರಿ ರಸ್ತೆಯಾಗಿ ರಥಬೀದಿ ಪ್ರವೇಶಿಸಲು ಮುಂದಾದಾಗ ದೇಗುಲದ ರಥಬೀದಿಗೆ ಸಂಪರ್ಕ ಕಲ್ಪಿಸುವ ಕನಕದಾಸ ರಸ್ತೆಯ ಆರಂಭದಲ್ಲಿಯೇ ಪೋಲೀಸರು ಪ್ರತಿಭಟನಾಕಾರರನ್ನು ತಡೆದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೂ, ಪೋಲೀಸರಿಗೂ ನಡುವೆ ಸ್ವಲ್ಪ ಹೊತ್ತು ಸಂಘರ್ಷ ನಡೆಯಿತು. ಪೋಲೀಸರು ಅಳವಡಿಸಿದ್ದ ಬೆರಿಕೇಡ್ ಗಳನ್ನು ಪ್ರತಿಭಟನಾಕಾರರು ತಳ್ಳಿ ತೆಗೆದುಬಿಟ್ಟರಲ್ಲದೆ ಪೋಲೀಸರ ಕೋಟೆಯನ್ನು ಬೇದಿಸಿ ಮುಂದುವರಿಯಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಪಕ್ಷದ ನಾಯಕರು ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡ ಕಾರಣ ಕಾರ್ಯಕರ್ತರು ಬಳಿಕ ರಸ್ತೆಯಲ್ಲಿಯೇ ಧರಣಿ ಕುಳಿತರು. ಹೋರಾಟದ ಹಾಡುಗಳು ಮತ್ತು ಘೋಷಣೆಗಳೊಂದಿಗೆ ಮುಂದುವರಿದ ಧರಣಿಯನ್ನುದ್ದೇಶಿಸಿ ಮಾತನಾಡಿದ ಶ್ರೀರಾಮ ರೆಡ್ಡಿ ಅವರು, ದೇವಾಲಯ, ಮಠ ಎಲ್ಲವೂ ಸಾರ್ವಜನಿಕ ವಂತಿಗೆಯಿಂದ ಸ್ಥಾಪನೆಯಾಗಿದೆ. ಊಟವನ್ನೂ ಸಾರ್ವಜನಿಕ ವಂತಿಕೆಯಿಂದಲೇ ನೀಡಲಾಗುತ್ತಿದೆ. ಹೀಗಿರುವಾಗ ಸಾರ್ವಜನಿಕರಿಗೆ ಪಂಕ್ತಿ ಬೇಧ ಯಾಕೆ ಎಂದು ಖಾರವಾಗಿಯೇ ಪ್ರಶ್ನಿಸಿದರು. ಪಂಕ್ತಿ ಬೇಧದ ವಿರುದ್ದದ ಅಭಿಯಾನ ಉಡುಪಿಯಿಂದ ಆರಂಭಗೊಂಡಿದೆ. 250 ಕ್ಕೂ ಅಧಿಕ ಮುಜರಾಯಿ ದೇವಾಲಯಗಳು ರಾಜ್ಯದಲ್ಲಿದ್ದು, ಇವುಗಳ ವಿರುದ್ದ ಮುಂದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಳುವಳಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಚಳುವಳಿಯಲ್ಲಿ ವಿ.ಜೆ.ಕೆ.ನಾಯರ್, ನಿತ್ಯಾನಂದ ಸ್ವಾಮಿ, ಕೆ.ಆರ್.ಶ್ರೀಯಾನ್, ಪ್ರಸನ್ನ ಕುಮಾರ್, ಎಸ್.ವೈ.ಗುರುಶಾಂತ್, ಪಿ.ವಿಶ್ವನಾಥ ರೈ ಮೊದಲಾದವರು ಭಾಗವಹಿಸಿದ್ದರು. ಅಂತಿಮವಾಗಿ ಪೋಲೀಸರು ಧರಣಿ ನಿರತರನ್ನು ಸಾಂಕೇತಿಕವಾಗಿ ಬಂಧಿಸಿ ಬಿಡುಗಡೆಗೊಳಿಸಿದರು. ಚಿತ್ರಗಳು: ಶ್ರೀರಾಮ ದಿವಾಣ.
- srirama reddy bhaashana 2
- g n nagaraj bhaashana
- k neelaa bhaashana
- srirama reddy bhaashana 1
- horaatada haadu
- jaathaa 1
- jaathaa 2
- jaathaa 3
- jaathaa 4
- sangharsha 1
- sangharsha 2
- sangharsha 3
- cpim ninda udupi krishna degulakke mutthige 11












