ಮೂಡಿಗೆರೆ ಸುದ್ದಿ: ಉಡುಪಿಯಲ್ಲಿ ಇತ್ತೀಚಿಗೆ ಜೆಸಿ ಉದ್ಯಾವರ, ಕುತ್ಪಾಡಿಯಲ್ಲಿ ನಡೆದ ರಾಜ್ಯಮಟ್ಟದ ಕರ್ನಾಟಕ ಸಾಂಸ್ಕೃತಿಕ ಹಬ್ಬದಲ್ಲಿ ಮೂಡಿಗೆರೆ ಜೆಸಿ ಸದಸ್ಯರು ಘಟಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ದ್ವಿತೀಯ ಸ್ಥಾನ ಪಡೆದರು. ಜೆಸಿ ಅಣ್ಣನಾಯಕ್, ಜೆಸಿ ಟಿ ಹರೀಶ್, ಜೆಸಿ ಪ್ರಸನ್ನ, ಜೆಸಿ ರವಿಕುಮಾರ್, ಜೆಸಿ ರೋಹಿತ್, ಜೆಸಿ ರಾಜೇಶ್, ಜೆಸಿ ಪ್ರವೀಣ್, ಜೆಸಿ ಮಣಿಕಂಠ, ಜೆಸಿ ಅಶೋಕ್ ಹಾಗು ಮತ್ತಿತರೆ ಸದಸ್ಯರು ಸದಸ್ಯರು ಭಾಗವಾಹಿಸಿದ್ದರು

ಮೂಡಿಗೆರೆ ಸುದ್ದಿ : ಉಡುಪಿಯಲ್ಲಿ ಇತ್ತೀಚಿಗೆ ಜೆಸಿ ಕಲ್ಯಾಣಪುರ ನಡೆಸಿದ ಕಡಲೋತ್ಸವ ಕಾರ್ಯಕ್ರಮದಲ್ಲಿ ಮೂಡಿಗೆರೆ ಜೆಸಿರೆಟ್ ಘಟಕ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಜೆಸಿರೆಟ್ ಭಾರತಿ ರವೀಂದ್ರ, ಮಂಜುಳಾ ಅಣ್ಣನಾಯಕ್, ಸುಚಿತ್ರಾ ಪ್ರಸನ್ನ, ಲತಾ ಪ್ರವೀಣ್, ಸರಶ್ವತಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು.

ಉಡುಪಿ: ಗರೋಡಿಗಳು ದೇವಸ್ಥಾನಗಳೂ ಅಲ್ಲ, ದೈವಸ್ಥಾನಗಳೂ ಅಲ್ಲ. ಹಿಂದೆ ವ್ಯಾಯಾಮ ಕೇಂದ್ರಗಳಾಗಿದ್ದ ಗರೋಡಿಗಳು, ಇಂದು ಆರಾಧನಾಯಲಯಗಳಾಗಿವೆ. ಗರೋಡಿಗಳಲ್ಲಿ ಮಂತ್ರ – ತಂತ್ರಗಳ ಅಗತ್ಯವಿಲ್ಲ. ಬ್ರಹ್ಮಕಲಶ, ಆರೂಢ ಪ್ರಶ್ನೆ, ತಾಂಬೂಲ ಪ್ರಶ್ನೆ
ಇತ್ಯಾದಿಗಳಿಲ್ಲ, ಇರಬಾರದು. ಇವುಗಳೆಲ್ಲ ತಪ್ಪು. ತುಳುನಾಡಿನ ದುರ್ದೈವ. ಬದಲಾಗದ ಸ್ಥಿತಿ ಬಂದಿದೆ ಎಂದು ತುಳು ಜನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮೇ.9 ರಂದು ಬೆಳಗ್ಗೆ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಉಡುಪಿ ತಾಲೂಕಿನಲ್ಲಿ 71 ಗರೋಡಿಗಳಿವೆ. ಮುಂಬೈ ಸಹಿತ ದೇಶಾದ್ಯಂತ ಒಟ್ಟು 248 ಗರೋಡಿಗಳಿವೆ ಎಂದು ಹೇಳಿದ. ಇಲ್ಲೆಲ್ಲಾ ಆಚರಣೆಗಳಲ್ಲಿ ವೈವಿಧ್ಯತೆಗಳಿವೆ ಎಂದು ತಿಳಿಸಿದ ಬಾಬು ಅಮೀನ್ ಅವರು, ಮೇ.13 ರಂದು ಮಾರ್ಪಳ್ಳಿಯ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ಒಂದು ದಿನದ ಉಡುಪಿ ತಾಲೂಕು ಮಟ್ಟದ ಗರೋಡಿ ಆರಾಧಕರ ಸಮ್ಮೇಳನ ‘ಪತ್ತೇರಿ ಕೂಟ- 2012′ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮೇ.13 ರಂದು ಬೆಳಗ್ಗೆ ಗಂಟೆ 9.30 ಕ್ಕೆ ಸಮ್ಮೇಳನದ ಉದ್ಘಾಟನೆ, ಗಂಟೆ 11.15 ರಿಂದ ‘ಗರೋಡಿ ಪೂ ಪೂಜೆನೆ’, ಗಂಟೆ 12.15 ರಿಂದ ‘ಗರೋಡಿಯ ಆಚರಣೆ: ಪರಂಪರೆಯ ದೃಷ್ಟಿಕೋನ’, ಮಧ್ಯಾಹ್ನ ಗಂಟೆ 2.15 ರಿಂದ ‘ಹೊಸ ಕಾಲದಲ್ಲಿ ಗರೋಡಿಯ ಆಚರಣೆಗಳು’ ಮತ್ತು ಗಂಟೆ 3.15 ರಿಂದ ‘ತುಳುನಾಡಿನ ಆಚರಣೆ: ಸ್ಥಿತ್ಯಂತರದ ಹಾದಿಯಲ್ಲಿ’ ಎಂಬ ವಿಷಯಗಳ ಮೇಲೆ ವಿಚಾರಗೋಷ್ಟಿಗಳು, ಸಂಜೆ ಗಂಟೆ 4.30 ರಿಂದ ಸಮಾರೋಪ ಸಮಾರಂಭ ನಡೆಯಲಿದೆ.
ಸಮಾರೋಪದಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶೇಖರ ಪೂಜಾರಿ ಕಲ್ಮಾಡಿ ಹಾಗೂ ಇತರರನ್ನು ಸಮ್ಮಾನಿಸುವ ಕಾರ್ಯಕ್ರಮವಿದೆ ಎಂದು ಅಮೀನ್ ಮಾಹಿತಿ ನೀಡಿದರು. ಮಾಧ್ಯಮಗೋಷ್ಟಿಯಲ್ಲಿ ಮಾರ್ಪಳ್ಳಿಯ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಅಧ್ಯಕ್ಷರಾದ ಕೆ.ಪ್ರಭಾಕರ ಹೆಗ್ಡೆ, ಇತರ ಪದಾಧಿಕಾರಿಗಳಾದ ಸಂಜೀವ ಪೂಜಾರಿ, ಶೇಖರ ಮಾರ್ಪಳ್ಳಿ, ಶೇಖರ ಪೂಜಾರಿ ಕಲ್ಮಾಡಿ ಹಾಗೂ ತಾಲೂಕು ಪಂಚಾಯತ್ ಸದಸ್ಯರಾದ ಪ್ರವೀಣ ಶೆಟ್ಟಿ ಉಪಸ್ಥಿತರಿದ್ದರು. ವರದಿ – ಚಿತ್ರ: ಶ್ರೀರಾಮ ದಿವಾಣ.

ಉಡುಪಿ: ಮಂಗಳೂರು ಧರ್ಮ ಪ್ರಾಂತ್ಯದ ಉಡುಪಿ ಜಿಲ್ಲೆಯ ಅಧಿಕೃತ ಕ್ಯಾಥೊಲಿಕ್ ಸ್ತ್ರೀ ಸಂಘಟನೆ ಸ್ಥಾಪಿಸಲಾಗಿದ್ದು, ಮೇ.11 ರಂದು ಬೆಳಗ್ಗೆ ಗಂಟೆ 11.30 ಕ್ಕೆ ಉಡುಪಿಯ ಡೊನ್ ಬೊಸ್ಕೊ ಹಾಲ್ ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷೆ ಲೀನಾ ರೋಚ್ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮೇ.09 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ
ರೈ.ರೆ.ಡಾ.ಅಲೋಸಿಯಸ್ ಪಾವ್ಲ್ ಡಿ’ಸೋಜ ಹಾಗೂ ಉಡುಪಿ ವಲಯದ ಸಪಿಸ್ಕೋಪಲ್
ರೆ.ಡಾ.ಬ್ಯಾಪ್ಟಿಸ್ಟ್ ಮಿನೇಜಸ್ ಇವರು ಸಂಘಟನೆಯನ್ನು ಉದ್ಘಾಟಿಸಲಿದ್ದಾರೆಂದು ರೋಚ್ ಹೇಳಿದರು.
ಉಡುಪಿ ಜಿಲ್ಲೆಯ 5 ವಲಯಗಳಲ್ಲಿರುವ 47 ಚರ್ಚುಗಳಲ್ಲಿಯೂ ಸಂಘಟನೆಯ ಘಟಕಗಳನ್ನು ರಚಿಸಲಾಗಿದೆ. ಶಿರ್ವ ವಲಯದಲ್ಲಿ 11, ಉಡುಪಿ ವಲಯದಲ್ಲಿ 9, ಕಲ್ಯಾಣಪುರ ವಲಯದಲ್ಲಿ 8, ಕುಂದಾಪುರ ವಲಯದಲ್ಲಿ 11 ಮತ್ತು ಕಾರ್ಕಳ ವಲಯದಲ್ಲಿ 11 ಘಟಕಗಳನ್ನು ರಚಿಸಲಾಗಿದೆ. ಇಲ್ಲೆಲ್ಲಾ ಪ್ರತೀ ತಿಂಗಳೂ ಸಮಿತಿ ಸಭೆ ಸೇರಲಿದ್ದು ಜಾತಿ, ಮತ ಬೇಧವಿಲ್ಲದೆ ಎಲ್ಲಾ ವರ್ಗದ ಅನ್ಯಾಯ, ಶೋಷಣೆ, ದೌರ್ಜನ್ಯಕ್ಕೆ ಒಳಗಾದ ಸ್ತ್ರೀಯರು ಸಂಘಟನೆಯ
ಪದಾಧಿಕಾರಿಗಳನ್ನು ಅಥವಾ ಸಂಘಟನೆಯು ನಡೆಸುವ ಸಭೆಗಳಲ್ಲಿ ಭಾಗವಹಿಸಿ ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಗುಪ್ತವಾಗಿ ಹೇಳಬೇಕಾದ ವಿಷಯವಾದರೆ ಗುಪ್ತವಾಗಿ ಹೇಳಲೂ ಸಹ ಅವಕಾಶವಿದೆ ಎಂದು ಲೀನಾ ರೋಚ್ ತಿಳಿಸಿದ್ದಾರೆ.
ಈಗಾಗಲೇ ಸಂಘಟನೆಗೆ 1200 ಮಂದಿ ಸದಸ್ಯರಾಗಿದ್ದಾರೆ ಎಂದಿರುವ ರೋಚ್ ಅವರು, ದಾಂಪತ್ಯದಲ್ಲಿನ ಹೊಂದಾಣಿಕೆಯ ಕೊರತೆ, ವಿಚ್ಚೇದನೆ, ಮಕ್ಕಳ ಪ್ರಾಮುಖ್ಯತೆ, ವಿದ್ಯಾಭ್ಯಾಸ ಇತ್ಯಾದಿ ವಿಷಯಗಳಲ್ಲಿಯೂ ಸಂಘಟನೆ ಕೆಲಸ ಮಾಡಲಿದೆ ಎಂದು ವಿವರ ನೀಡಿದರು.
ಮಾಧ್ಯಮಗೋಷ್ಟಿಯಲ್ಲಿ ಸಂಘಟನೆಯ ಉಪಾಧ್ಯಕ್ಷರುಗಳಾದ ಸಿಂತಿಯಾ ಡಾಯಸ್, ಐರಿನ್ ಪಿರೇರಾ, ಕಾರ್ಯದರ್ಶಿ ವೆರೋನಿಕಾ ಸಲ್ದಾನಾ ಹಾಗೂ ಸಂಘಟನೆ ಪ್ರಕಟಿಸುವ ವಿಶೇಷ ಸಂಚಿಕೆಯ ಸಂಪಾದಕಿ ಲಿಡ್ವಿನ್ ಪಿಂಟೊ ಅವರು ಉಪಸ್ಥಿತರಿದ್ದರು.

ಉಡುಪಿ: ಬ್ರಹ್ಮಾವರದ ಸೈಂಟ್ ಮೇರಿಸ್ ಸಿರಿಯನ್ ಕಾಲೇಜಿನ ಕಚೇರಿ ಸಹಾಯಕರಾಗಿರುವ ಡೇನಿಯಲ್ ಮಂತೇರೊ ಇವರು ಸಂಗ್ರಹಿಸಿದ ಪಕ್ಷಿಗಳ ಅಂಚೆ ಚೀಟಿಗಳು ಗಿನ್ನಿಸ್ ದಾಖಲೆ ದಾಖಲೆಗೆ ಸೇರ್ಪಡೆಯಾಗಿವೆ. ಈ ವಿಷಯವನ್ನು ಸ್ವತಹಾ ಡೇನಿಯಲ್, ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕರಾದ ಡಾ.ವೈ.ರವೀಂದ್ರನಾತ ರಾವ್ ಹಾಗೂ ಕಾಲೇಜಿನ ಕಚೇರಿ ಅಧೀಕ್ಷಕರಾದ ಸಿರಿಲ್ ಪಿ.ಡಿ.ಸೋಜ ಅವರು ಶನಿವಾರ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಗಿನ್ನಿಸ್ ವರ್ಲ್ಡ್ ರೆಕೋರ್ಡ್ಸ್ ಸರ್ಟಿಫಿಕೆಟ್ ಪ್ರದರ್ಶಿಸುವ ಮೂಲಕ ಬಹಿರಂಗಪಡಿಸಿದರು.
ಡೇನಿಯಲ್ ಅವರು ಸಂಗ್ರಹಿಸಿದ 263 ದೇಶಗಳ 4,911 ಪಕ್ಷಿಗಳ ಅಂಚೆಚೀಟಿಗಳು, ಇದರಲ್ಲಿಯೂ ಮುಖ್ಯವಾಗಿ ಬಾತುಕೋಳಿಗಳ ಅಂಚೆಚೀಟಿಗಳು ದಾಖಲೆಗೆ ಸೇರಿವೆ. ಜರ್ಮನಿ ದೇಶದ ಪೌಲ್ ಇರ್ವಿನ್ ಓಸ್ವಲ್ಡ್ ಅವರು ಸಂಗ್ರಹಿಸಿದ 2,116 ಅಂಚೆಚೀಟಿಗಳು ಈ ಹಿಂದಿನ
ದಾಖಲೆಯಾಗಿತ್ತು. ಪೌಲ್ ಅವರ ಮೊದಲ ದಾಖಲೆಯನ್ನು ಮುರಿದ ಡೇನಿಯಲ್ ಅವರಲ್ಲಿ ಒಟ್ಟು 8000 ಕ್ಕೂ ಅಧಿಕ ಅಂಚೆಚೀಟಿಗಳಿವೆಯಂತೆ.
ಅಂಚೆಚೀಟಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಇದುವರೆಗೆ ಒಂದೇ ಒಂದು ಚಿನ್ನದ ಪದಕ ಲಭಿಸಿಲ್ಲ. ಮುಂದೆ ಚಿನ್ನದ ಪದಕ ಪಡೆಯಬೇಕೆಂಬುದು ತನ್ನಾಸೆ ಎಂದು ತಿಳಿಸಿದ ಡೇನಿಯಲ್ ಅವರು, ಆದರೆ; ತನ್ನ ಆಸೆ ಕೈಗೂಡುವುದ ಅಷ್ಟೇನೂ ಸುಲಭದ ಕೆಲಸವಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಕಾರಣ; ಚಿನ್ನದ ಪದಕಕ್ಕೆ ಅರ್ಹವಾಗಬೇಕಾದರೆ ಎಷ್ಟು ಅಂಚೆಚೀಟಿಗಳು ತನ್ನಲ್ಲಿವೆ ಎನ್ನುವುದಕ್ಕಿಂತಲೂ ಮುಖ್ಯವಾಗಿ ಎಷ್ಟು ಹಳೆಯ ಕಾಲದ ಅಂಚೆಚೀಟಿಗಳಿವೆ ಎನ್ನುವುದು ಹೆಚ್ಚು ಮುಖ್ಯವಾಗುತ್ತದೆ. ಚಿನ್ನದ ಪದಕ ಪಡೆಯುವಲ್ಲಿ ಈ ವಿಷಯಕ್ಕೆ ಅಧಿಕ ಪಾಯಿಂಟ್ ಇದೆ. ಇದು ಸವಾಲಿನ ಕೆಲಸ ಎನ್ನುವುದು ಡೇನಿಯಲ್ ನುಡಿ.
ತುಂಬಾ ಖುಷಿಯಾಗಿದೆ. ಇದೊಂದು ಜೀವನದ ದೊಡ್ಡ ಸಾಧನೆ ಎಂದು ಪ್ರತಿಕ್ರಿಯಿಸಿದ ಡೇನಿಯಲ್ ಮೆಂತೇರೊ ಅವರು, ತನ್ನ 11 ನೇ ವಯಸ್ಸಿನಲ್ಲಿ ಅಂದರೆ, 1973 ರಲ್ಲಿ ಅಂಚೆಚೀಟಿ ಸಂಗ್ರಹಿಸುವ ಹವ್ಯಾಸವನ್ನು ರೂಢಿಸಿಕೊಂಡವರು. ಬ್ರಹ್ಮಾವರ ಸಮೀಪದ ಕುಮ್ರಗೋಡು ನಿವಾಸಿಯಾಗಿರುವ ಇವರಿಗೆ ಶಾಲಾ ಜೀವನದಲ್ಲಿ ಶಿಕ್ಷಕರೊಬ್ಬರು ಯಾವುದಾದರೂ
ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ನೀಡಿದ ಸಲಹೆಯನ್ನು ಸ್ವೀಕರಿಸಿ ಈ ಹವ್ಯಾಸವನ್ನು ಬೆಳೆಸಿಕೊಂಡು ಇದೀಗ ಗಿನ್ನಿಸ್ ದಾಖಲೆಯನ್ನು ಮಾಡಿ ಸಾರ್ಥಕತೆ ಪಡೆದುಕೊಂಡಿದ್ದಾರೆ.
10 ಅಂತಾರಾಷ್ಟ್ರೀಯ ಪ್ರಶಸ್ತಿಗಳು, 21 ರಾಷ್ಟ್ರ ಮಟ್ಟದ ಪ್ರಶಸ್ತಿಗಳು, 13 ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಮಡಿರುವ ಡೇನಿಯಲ್ ಅವರಿಗೆ ರಾಜ್ಯದ 31 ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಅಂಬೇಡ್ಕರ್ ಪ್ರಶಸ್ತಿ, ಅಸಾಧಾರಣ ಕೊಂಕಣಿ ವ್ಯಕ್ತಿ ಪುರಸ್ಕಾರಗಳನ್ನು ಪಡೆದಿರುವ ಡೇನಿಯಲ್ ಅವರ ಅಂಚೆಚೀಟಿ ಸಂಗ್ರಹ ಈ ಹಿಂದೆಯೇ ಲಿಮ್ಕಾ ಬುಕ್ ಆಫ್ ರೇಕಾರ್ಡ್ ಸೇರಿತ್ತು. ಇಂಡಿಯಾ ಬುಕ್ ಆಫ್ ರೇಕಾರ್ಡ್ ನಲ್ಲಿ ಮೂರು ದಾಖಲೆಗಳು ಸೇರ್ಪಡೆಯಾಗಿವೆ. ಇದುವರೆಗೆ 162 ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ಅಂಚೆಚೀಟಿ ಮತ್ತು ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ 31 ಕಮ್ಮಟಗಳನ್ನು ನಡೆಸಿದ್ದಾರೆ. ಚಿತ್ರ- ವರದಿ: ಶ್ರೀರಾಮ ದಿವಾಣ.

ಉಡುಪಿ: ಭಾರತದ ನಂ.1 ಸರ್ಕಸ್ ಕಂಪೆನಿ ಎಂದು ಗುರುತಿಸಲ್ಪಟ್ಟಿರುವ ಜಂಬೋ ಸರ್ಕಸ್ ಉಡುಪಿ ನಗರಕ್ಕೆ ಆಗಮಿಸಿದ್ದು, ಮೇ.4 ರಿಂದ ಪ್ರದರ್ಶನ ಆರಂಭಿಸಲಿದೆ.
ಉಡುಪಿ ಕಲ್ಸಂಕದ ರಾಯಲ್ ಗಾರ್ಡನ್ ನಲ್ಲಿ ಪ್ರತಿದಿನ ಮಧ್ಯಾಹ್ನ ಗಂಟೆ 1, 4 ಮತ್ತು 7 ಕ್ಕೆ ಪ್ರದರ್ಶನ ನಡೆಯಲಿದೆ. 40 ಮಂದಿ ಮಹಿಳಾ ಮತ್ತು 60 ಮಂದಿ ಪುರುಷ ಕಲಾವಿದರು ಇರುವ ಈ ಸಂಸ್ಥೆಯಲ್ಲಿ ಇರುವವರ ಒಟ್ಟು ಸಂಖ್ಯೆ 250 ಕ್ಕೂ ಅಧಿಕ.
ಕೇರಳದ ಎಂ.ವಿ.ಶಂಕರನ್ ಆರಂಭಿಸಿದ ಜಂಬೋ ಸರ್ಕಸ್ ಕಂಪೆನಿಯನ್ನು ಈಗ ಅವರ ಇಬ್ಬರು ಮಕ್ಕಳು ಜೊತೆಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಚಿತ್ರದಲ್ಲಿ ಕಂಪೆನಿಯ ಆಫ್ರಿಕಾ ಮೂಲದ ಕಲಾವಿದರನ್ನು ನೋಡಬಹುದು. ಚಿತ್ರ: ಶ್ರೀರಾಮ ದಿವಾಣ.

ಉಡುಪಿ: ಇನ್ ಹೆಲೇಶನ್ ಥೆರಪಿ ಚಿಕಿತ್ಸೆಯನ್ನು ನಿರಂತರವಾಗಿ ಪಾಲಿಸುವುದರ ಮೂಲಕ ಅಸ್ತಮಾ ಖಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು ಎಂದು ಉಡುಪಿ ಕಡಿಯಾಳಿಯ ವೈದ್ಯ ಡಾ.ಅನಂತ ಶೆಣೈ ಅವರು ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು
ಮಾತನಾಡುತ್ತಿದ್ದರು. ಗೋಷ್ಟಿಯಲ್ಲಿ ಭರತ್ ಕುಮಾರ್ ಉಪಸ್ಥಿತರಿದ್ದರು.
ಹಲವು ಮಂದಿ ರೋಗಿಗಳು ಒಂದು ಮಟ್ಟಿಗೆ ಚೇತರಿಸಿಕೊಂಡ ಬಳಿಕ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಇದು ಅಪಾಯಕಾರಿ ಸಂಗತಿಯಾಗಿದ್ದು, ಇದರಿಂದಾಗಿ ಆ ವ್ಯಕ್ತಿಗೆ ಮತ್ತೆ ಅಸ್ತಮಾ ಮರುಕಳಿಸುವಂತಾಗುತ್ತದೆ ಎಂದು ಡಾ.ಅನಂತ ಅಭಿಪ್ರಾ ವ್ಯಕ್ತಪಡಿಸಿದ್ದಾರೆ.
ಸಾವಿಗೂ ಕಾರಣವಾಗುವ ಅಸ್ತಮಾಕ್ಕೆ ಅತ್ಯುತ್ತಮ ಔಷಧವೆಂದರೆ, ಅದು ಇನ್ಹೇಲರ್ ಗಳು. ಇವುಗಳು ಅಸ್ತಮಾ ಬಾಧಿತನ ಕೊನೆಯ ಔಷಧ ೆಂಬ ತಪ್ಪು ಕಲ್ಪನೆಗಳು ಹರಡಿದ್ದು, ಇದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಿಪ್ಲ ಕಂಪೆನಿಯು ಈ ನಿಟ್ಟಿನಲ್ಲಿ ‘ಬ್ರಿದ್ ಫ್ರಿ’ ಎಂಬ ಸಾರ್ವಜನಿಕ ಸೇವೆಯನ್ನು ಆರೋಗ್ಯ ವೃತ್ತಿಪರರ ಸಹಯೋಗದೊಂದಿಗೆ ನೀಡಲು ಮುಂದಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತಾಗಬೇಕು ಎಂದು ಮನವಿ ಮಾಡಿಕೊಂಡರು.